i
ಮಲೇರಿಯಾ ನಿವಾರಣೆ ಎಲ್ಲರ ಸಹಭಾಗಿತ್ವದಿಂದಷ್ಟೇ ಸಾಧ್ಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕದಲ್ಲಿ 2025ಕ್ಕೆ ಮಲೇರಿಯಾ ನಿವಾರಣಾ ಗುರಿ ಹೊಂದಲಾಗಿದೆ. ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆಯಾದ ಸಾವು-ನೋವುಗಳನ್ನು ತಡೆಗಟ್ಟಬಹುದು. ಮಲೇರಿಯಾ ನಿವಾರಣೆ ಎಲ್ಲರ ಸಹಭಾಗಿತ್ವದಿಂದಷ್ಟೇ ಸಾಧ್ಯ. ಎಲ್ಲರೂ ಸೇರಿ ಮಲೇರಿಯಾ ರೋಗವನ್ನು ನಿವಾರಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ರಂಗಯ್ಯನಬಾಗಿಲು ಸಮೀಪದ ಎಸ್.ಜಿ.ಪ್ಯಾರಾಮೆಡಿಕಲ್ ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಮಲೇರಿಯಾ ದಿನದ ಈ ಬಾರಿಯ ಘೋಷವಾಕ್ಯ “ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧ ಹೋರಾಟವನ್ನು ತೀವ್ರಗೊಳಿಸೋಣ” ಎಂಬುದಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಲೇರಿಯಾ ನಿಯಂತ್ರಣದಲ್ಲಿದ್ದು, ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದಾಗ್ಯೂ ಕೂಡ ಮಲೇರಿಯಾ ಕುರಿತು ಹೆಚ್ಚಿನ ಅರಿವು ಅತ್ಯಗತ್ಯ. ಮಲೇರಿಯಾ ರೋಗವು ತುಂಬಾ ಆತಂಕಕಾರಿಯಾದದ್ದು, ಈ ರೋಗವು ಮಕ್ಕಳು ಹಾಗೂ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಂತವರು ಯಾವುದೇ ಜ್ವರ ಬರಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಲೇರಿಯಾ ಜಾಥಾ ಹಮ್ಮಿಕೊಂಡಿದ್ದು, ಜಾಥಾವು ನಗರದ ಎಸ್.ಜಿ ಪ್ಯಾರಾ ಮೆಡಿಕಲ್ ಕಾಲೇಜ್ ಆವರಣದಿಂದ ಆರಂಭಗೊಂಡು ಮಲೇರಿಯಾ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ, ಸೊಳ್ಳೆ ಪರದೆ ಬಳಸಿ, ಮಲೇರಿಯಾ ಓಡಿಸಿ, ಜನರ ಅಮೂಲ್ಯ ಜೀವನ ಉಳಿಸಿವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂಬ ವಿವಿಧ ಘೋಷಣೆಗಳೊಂದಿಗೆ ಉಚ್ಚಂಗಿಯಲ್ಲಮ್ಮ, ಈಶ್ವರ ದೇವಸ್ಥಾನ ಮಾರ್ಗವಾಗಿ ಕರುವಿನ ಕಟ್ಟೆ ವೃತ್ತದಿಂದ ಪುನಃ ಕಾಲೇಜು ಆವರಣದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಂದ್ರಶೇಖರ್ ಕಂಬಾಳಿಮಠ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕೀಟಶಾಸ್ತ್ರಜ್ಞೆ ಡಾ.ನಂದಿನಿ ಕಡಿ, ಎಸ್.ಜಿ.ಪ್ಯಾರಮೆಡಿಕಲ್ ಕಾಲೇಜು ಅಧ್ಯಕ್ಷ ಡಾ.ಶಿವಲಿಂಗಯ್ಯ, ಪ್ರಾಂಶುಪಾಲ ಚಂದ್ರಶೇಖರ್, ನಗರ ಆರೋಗ್ಯಾ ಕೇಂದ್ರದ ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.