i
ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಚ್ಚುತ್ತಿರುವ ತಾಪಮಾನವು ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೆ ಪರಿಣಾಮಗಳನ್ನು ಬೀರದಿರಲು ಬೇಸಿಗೆ ನಿರ್ವಹಣಾ ಕ್ರಮಗಳನ್ನು ಮೈಸೂರು ಮೃಗಾಲಯದಲ್ಲಿ ಕೈಗೊಳ್ಳಲಾಗಿರುತ್ತದೆ.
ನೀರಿನ ಜೆಟ್ಗಳು ಮತ್ತು ಸಿಂಪರಣೆಗಳ ಅಳವಡಿಕೆ: ಪ್ರಾಣಿಗಳಿಗೆ ಉಂಟಾಗುವ ಶಾಖದ ಒತ್ತಡವನ್ನು ತಡೆಗಟ್ಟಲು ಎಲ್ಲಾ ಪ್ರಾಣಿಮನೆಗಳಲ್ಲಿ ನೀರಿನ ಜೆಟ್ಗಳು ಮತ್ತು ನೀರಿನ ಸಿಂಪರಣೆಗಳನ್ನು ಅಳವಡಿಸಲಾಗಿರುತ್ತದೆ. ಪಕ್ಷಿಮನೆಗಳಲ್ಲಿ ಎಲ್ಲಾ ಪಕ್ಷಿಗಳಿಗೆ ತಂಪಾದ ವಾತಾವರಣವನ್ನು ನಿರ್ಮಿಸಲು ತಂಪಾದ ನೀರಿನ ಸಿಂಪರಣೆಗಳನ್ನು ಒದಗಿಸಲಾಗಿದೆ.
ಫ್ಯಾನ್ ಹಾಗೂ ಏರ್ ಕೂಲರ್ಗಳ ವ್ಯವಸ್ಥೆ: ರಾತ್ರಿಯಲ್ಲಿ ಪ್ರಾಣಿಗಳು ಒಳಾವರಣಗಳಲ್ಲಿ ಆರಾಮದಾಯಕ ಸ್ಥಿತಿಯಲ್ಲಿರಲು ಫ್ಯಾನ್ಗಳು ಮತ್ತು ಕೂಲರ್ಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಬೇಸಿಗೆಯ ಆಹಾರ ಪದ್ದತಿ: ಬೇಸಿಗೆಯಲ್ಲಿ ತಂಪಾದ ಆಹಾರ ಕ್ರಮವನ್ನು ಖಾತ್ರಿಪಡಿಸಲು ಎಲ್ಲಾ ಬಗೆಯ ವಾನರ ಜಾತಿಯ ಪ್ರಾಣಿಗಳಾದ ಗೊರಿಲ್ಲಾ, ಒರಾಂಗೂಟಾನ್, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು ನೀರಿನಾಂಶವುಳ್ಳ ತರಕಾರಿ ಹಾಗೂ ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ, ಕರಬೂಜ ಇತ್ಯಾದಿಗಳನ್ನು ಅವುಗಳ ಆಹಾರದಲ್ಲಿ ಹೆಚ್ಚಾಗಿ ಸೇರಿಸಿ ನೀಡಲಾಗುತ್ತಿದೆ ಹಾಗೂ ಓ.ಆರ್.ಎಸ್. ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ. ಹಿಮಾಲಯದ ಕಪ್ಪು ಕರಡಿಗಳಿಗೆ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯವಾಗುವಂತೆ ಆಹಾರವನ್ನು ಐಸ್ಬ್ಲಾಕ್ ರೀತಿಯಲ್ಲಿ ಒದಗಿಸಲಾಗುತ್ತಿದೆ.
ಕೆಸರಿನ ಕೊಳ ಹಾಗೂ ನೆರಳಿಗಾಗಿ ಚಪ್ಪರಗಳ ವ್ಯವಸ್ಥೆ: ಎಲ್ಲಾ ಬಗೆಯ ಸಸ್ಯಾಹಾರಿ ಪ್ರಾಣಿಮನೆಗಳಲ್ಲಿ ಕೆಸರಿನ ಕೊಳವನ್ನು ನಿರ್ಮಿಸುವ ಮೂಲಕ ಅವುಗಳಿಗೆ ನೈಸರ್ಗಿಕ ತಣ್ಣನೆಯ ವಾತಾವರಣವನ್ನು ಕಲ್ಪಿಸಲಾಗಿರುತ್ತದೆ. ಪ್ರಾಣಿಗಳು ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಪ್ರಾಣಿಮನೆಗಳಲ್ಲಿ ಚಪ್ಪರಗಳನ್ನು ಒದಗಿಸಲಾಗಿದೆ.
ಪ್ರಾಣಿಮನೆಗಳ ಮೇಲೆ ಟೆರಸ್ ಗಾರ್ಡನ್ ಹಾಗೂ ಉಷ್ಣಮಾಪಕಗಳು: ಪ್ರಾಣಿಗಳ ಒಳಾವರಣವನ್ನು ತಂಪಾಗಿರಿಸಲು ಒಳಾವರಣದ ತಾರಸಿಗಳಲ್ಲಿ ಟೆರೇಸ್ ಗಾರ್ಡನಿಂಗ್ ಪ್ರಾರಂಭಿಸಲಾಗಿರುತ್ತದೆ. ಪ್ರಾಣಿಗಳ ಒಳಾವರಣಗಳು ಸೂರ್ಯನ ಶಾಖವನ್ನು ಹೀರಿಕೊಳ್ಳುವುದನ್ನು ತಪ್ಪಿಸಲು ಒಳಾವರಣಗಳ ತಾರಸಿಗೆ ಸುಣ್ಣವನ್ನು ಹಚ್ಚುವ ಕ್ರಮವಹಿಸಲಾಗಿದೆ. ಪ್ರತಿ ಪ್ರಾಣಿಮನೆಗಳಲ್ಲಿರುವ ಉμÁ್ಣಂಶವನ್ನು ತಿಳಿದುಕೊಳ್ಳಲು ಉಷ್ಣಮಾಪಕಗಳನ್ನು ಅಳವಡಿಸಲಾಗಿರುತ್ತದೆ. ಉಷ್ಣಮಾಪಕಗಳು ಏರುತ್ತಿರುವ ತಾಪಮಾನದಿಂದ ಮೃಗಾಲಯದೊಳಗಿರುವ ಎಲ್ಲಾ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿ ರಕ್ಷಿಸಲು ಹಾಗೂ ಅವುಗಳನ್ನು ಕ್ಷೇಮವಾಗಿರಿಸಲು ಸಹಾಯಕವಾದ ಸಾಧನಗಳಾಗಿವೆ ಎಂದು ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.