i
ಹವಾಮಾನ ವೈಪರೀತ್ಯ: ಆರೋಗ್ಯದಲ್ಲಿರಲಿ ಕಾಳಜಿ-ಡಾ.ಗಿರೀಶ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಮೇಲೆ ಅನೇಕ ದುಷ್ಪಾರಿಣಾಮಗಳು ಉಂಟಾಗುತ್ತಿದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬಿಸಿ ಗಾಳಿ ಬಿಸಿಲಾಘಾತ, ಸೂರ್ಯಾಘಾತ ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಶಿಕ್ಷಣ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏರುತ್ತಿರುವ ಜಾಗತಿಕ ತಾಪಮಾನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಅಲ್ಲಲ್ಲಿ ಬಿಸಿಲಾಘಾತ, ಸೂರ್ಯಾಘಾತದ ಘಟನೆಗಳು ಕಂಡು ಬರುತ್ತಿದೆ. ಸಾರ್ವಜನಿಕರು ಕಾರಣವಿಲ್ಲದೇ ಬಿಸಿಲಿನಲ್ಲಿ ಸುತ್ತಾಡುವುದು ಬೇಡ. ಹೆಚ್ಚು ಹೆಚ್ಚು ನೀರು ಕುಡಿಯಿರಿ, ನೀರು ಮಜ್ಜಿಗೆ ಎಳನೀರು ನಿಂಬೆ ರಸ ದ್ರವರೂಪದ ಆಹಾರ ಸೇವನೆ ನಿರ್ಜಲೀಕರಣ ಆಗದಂತೆ ಓ.ಆರ್.ಎಸ್ ದ್ರಾವಣವನ್ನು ಸೇವಿಸುವುದು ಉಪಯುಕ್ತ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಎಲ್ಲೆಡೆ ಜಾತ್ರೆ ಹಬ್ಬ ಹರಿದಿನಗಳಲ್ಲಿ ಹೆಚ್ಚು ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವನೆ ಮಾಡಬೇಡಿ ಕಾರ್ಬೊನೇಟೆಡ್ ತಂಪು ಪಾನಿಯಾಗಳನ್ನು ಸೇವಿಸಬೇಡಿ. ಸಾಧ್ಯವಾದಷ್ಟು ಶುದ್ಧ ಕುಡಿಯುವ ನೀರು ಬಳಕೆ ಶುಚಿತ್ವಕ್ಕೆ ಗಮನ ಕೊಡಿ. ತಂಗಳು ಆಹಾರ ಸೇವಿಸದೆ ಶುದ್ಧ ಸ್ವಚ್ಛ ಆಹಾರ ಸೇವಿಸಿ ಕಾಫಿ ಟೀ ಸೇವನೆ ನಿಯಂತ್ರಿಸಿ. ಎಲ್ಲಾ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಓ.ಆರ್.ಎಸ್. ಪಟ್ಟಣಗಳನ್ನು ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಿ. ಬಿಗಿ ಇಲ್ಲದ, ತೆಳುವಾದ ಕಾಟನ್ ವಸ್ತ್ರಗಳನ್ನು ಉಪಯೋಗಿಸಿ ಎಂದರು.
ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಷ್ಮಿತ ಮಾತನಾಡಿ, ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ತನಕ ಬಿಸಿಲಿನಲ್ಲಿ ಸುತ್ತಾಡಬೇಡಿ. ಬಿಸಿಲಿನಲ್ಲಿ ಹೊರಾಂಗಣ ದೈಹಿಕ ಚಟುವಟಿಕೆ ಕಡಿಮೆ ಮಾಡಿ ಅನಿವಾರ್ಯವಾಗಿ ಬಿಸಿಲಿಗೆ ಹೋಗಲೇಬೇಕಾದ ಪ್ರಸಂಗದ ಸಂದರ್ಭದಲ್ಲಿ ಕಣ್ಣಿಗೆ ಕನ್ನಡಕ ತಲೆಗೆ ಟೋಪಿಯನ್ನು ಧರಿಸಿಕೊಂಡು ಹೋಗಿ ಜೊತೆಯಲ್ಲಿ ನೀರಿನ ಬಟಲಿ ತೆಗೆದುಕೊಂಡು ಹೋಗಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅವರು ಓ.ಆರ್.ಎಸ್ ಹೇಗೆ ಬಳಸಬೇಕು ಊಟಕ್ಕೆ ಮೊದಲು ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನ ಬಳಕೆ ಮೂಲಕ ತೊಳೆಯುವ ವಿಧಾನದ ಬಗ್ಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಬಿಸಿಲಾಘಾತದ ಲಕ್ಷಣಗಳು, ಆನಾರೋಗ್ಯ ಮೂರ್ಛೆ ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತನ್ನಿ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.