i
ಪರಿಸರಲ್ಲಿ ಗಿಡ-ಮರಗಳನ್ನು ನೆಟ್ಟು ಉಷ್ಣಾಂಶ ಕಡಿಮೆ ಮಾಡಲು ಪ್ರಯತ್ನಿಸಿ- ಉಮೇಶ್ ಕಾರಜೋಳ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪರಿಸರದಲ್ಲಿ ತಂಪಾದ ವಾತಾವರಣವಿರಬೇಕಾದರೆ ಪ್ರತಿಯೊಬ್ಬರು ಗಿಡ-ಮರಗಳನ್ನು ನೆಟ್ಟು ಉಷ್ಣಾಂಶ ಕಡಿಮೆ ಮಾಡಬಹುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಜನತೆಯಲ್ಲಿ ಮನವಿ ಮಾಡಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಎರಡು ಮಣ್ಣಿನ ಅರವಟಿಕೆಗಳನ್ನಿಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅವರು ಬೆಂಕಿಯಂತ ಬಿಸಿಲಿನ ಝಳ ದಿನ ದಿನಕ್ಕೂ ಏರುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುವುದು ಕಷ್ಟ. ಹಾಗಾಗಿ ಅರವಟಿಕೆಗಳ ಮೂಲಕ ತಣ್ಣನೆಯ ನೀರನ್ನು ಮಳೆಗಾಲ ಆರಂಭವಾಗುವತನಕ ಪ್ರತಿನಿತ್ಯವೂ ಪೂರೈಸಲಾಗುವುದು. ನೀರು ಬರಿ ಜಲವಲ್ಲ. ಅದೊಂದು ಜೀವ ಜಲ ಹಾಗಾಗಿ ಹನಿ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದರು.
ಆರಂಭದಲ್ಲಿ ಎರಡು ಕಡೆ ಅರವಟಿಕೆಗಳನ್ನು ಇಡಲಾಗಿದೆ. ನೀರಿನ ಲಭ್ಯತೆ ಆಧರಿಸಿ ಜನಸಾಮಾನ್ಯರಿಗೆ ಇನ್ನು ಅನುಕೂಲವಾಗುವಂತೆ ಹಾಗೂ ಗ್ರಾಮೀಣ ಭಾಗಗಳಲ್ಲಿಯೂ ಅರವಟಿಕೆಗಳ ಮೂಲಕ ಶುದ್ದ ಕುಡಿಯುವ ನೀರು ಒದಗಿಸಲಾಗುವುದು. ಬಿಸಿಲ ತೀವ್ರತೆ ಜಾಸ್ತಿಯಿರುವುದರಿಂದ ಪಶು, ಪಕ್ಷಿಗಳಿಗೂ ನೀರಿನ ದಾಹ ತಣಿಸಲು ವಿಶೇಷ ಅರವಟಿಕೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದೆಂದು ಹೇಳಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್ ಮಾತನಾಡಿ ಇದೊಂದು ಅತ್ಯುತ್ತಮವಾದ ಕೆಲಸ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವತನಕ ಪ್ರತಿನಿತ್ಯವು ನೀರಿನ ಅರವಟಿಕೆ ಮೂಲಕ ಜನತೆಗೆ ಶುದ್ದ ಕುಡಿಯುವ ನೀರಿನ ಅನುಕೂಲ ಕಲ್ಪಿಸಿರುವ ಉಮೇಶ್ ಕಾರಜೋಳರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆದರ್ಶ್, ಸುದರ್ಶನ್, ಅರುಣ್, ನಾಗರಾಜ್ಬೇದ್ರೆ ಈ ಸಂದರ್ಭದಲ್ಲಿ ಹಾಜರಿದ್ದರು.