i
ರಾಗಿ ಹುಲ್ಲಿನ ಬಣವೆಗೆ ಬೆಂಕಿ : ಲಕ್ಷ ಮೌಲ್ಯದ ಹುಲ್ಲು ಭಸ್ಮ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದಿನೇ ದಿನೆ ಬಿಸಿಲಿನ ತಾಪ ಹೆಚ್ಚುತ್ತಿದ್ದು ಇನ್ನೊಂದೆಡೆ ಮಳೆಯಾಗದೆ ರೈತರು ಕಂಗಾಲಾಗಿರುವ ಈ ಸಂದರ್ಭದಲ್ಲಿ ಬೆಂಕಿ ತಗುಲಿದ ಪರಿಣಾಮ ಬಣವೆ ಹಾಕಿದ್ದ ಸುಮಾರು 2 ಲೋಡ್ರಾಗಿ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ಕೊಂಡಸಂದ್ರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ರೈತ ರಾಮಚಂದ್ರ ಎಂಬುವವರಿಗೆ ಸೇರಿದ ಸುಮಾರು ಒಂದು ಲಕ್ಷ ಮೌಲ್ಯದ ರಾಗಿ ಹುಲ್ಲು ಸುಟ್ಟು ಬೂದಿಯಾಗಿದೆ.
ತಾಲೂಕಿನ ತೂಬಗೆರೆ ಹೋಬಳಿಯ ಕೊಂಡಸಂದ್ರ ಗ್ರಾಮದ ರಾಮಚಂದ್ರ ಎನ್ನುವವರು ರಾಗಿ ಹುಲ್ಲನ್ನು ಬಣವೆ ಮಾಡಿದ್ದು ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದೆ, ಬೆಂಕಿಯನ್ನು ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು ಸಾಧ್ಯವಾಗದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಅಷ್ಟರಲ್ಲಿ ಹುಲ್ಲು ಸುಟ್ಟು ಭಸ್ಮವಾಗಿದೆ, ಹಸುಗಳಿಗಾಗಿ ಶೇಖರಣೆ ಮಾಡಿ ಇಟ್ಟಿದ್ದ ರಾಗಿ ಹುಲ್ಲು ಬೆಂಕಿಗಾಹುತಿಯಾಗಿದ್ದು ರೈತ ರಾಮಚಂದ್ರ ಸಾಕಿರುವ ಹಸುಗಳಿಗೆ ಹುಲ್ಲನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಕಾರಣ ಇನ್ನೂ ತಿಳಿದುಬಂದಿಲ್ಲ.