i
ಮಳೆ ತಂದ ಅವಾಂತರ: ನೆಲಕಚ್ಚಿದ ಅಡಿಕೆ, ಬಾಳೆ ಲಕ್ಷಾಂತರ ನಷ್ಟ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿಗೆ ಆಗಮಿಸಿದ ಪ್ರಸ್ತುತ ವರ್ಷದ ಮೊದಲ ಮಳೆ ಜನರಲ್ಲಿ ಉಲ್ಲಾಸದ ಜೊತೆಗೆ ನಷ್ಟವನ್ನು ಸಹ ಉಂಟುಮಾಡಿದೆ. ಸೋಮವಾರ ಸಂಜೆ ತಾಲ್ಲೂಕಿನ ಗಡಿಭಾಗದ ಗ್ರಾಮವಾದ ಸಿರಿವಾಳಓಬಳಾಪುರ ಹಾಗೂ ಇನ್ನಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ಮಳೆಯೊಂದಿಗೆ ಲಕ್ಷಾಂತರ ರೂಪಾಯಿಯ ಬೆಳೆ ನಷ್ಟವಾಗಿದೆ.
ಓಬಳಾಪುರ ಗ್ರಾಮದ ಶಂಕರಪ್ಪ, ಗಂಗಾಧರಪ್ಪ ಎಂಬುವವರ ಒಟ್ಟು ನಾಲ್ಕು ಎಕರೆ ಪ್ರದೇಶದಲ್ಲಿದ್ದ ಮೆಕ್ಕೆಜೋಳ ಗಾಳಿ, ಮಳೆಗೆ ನೆಲಕಚ್ಚಿದ್ದು ಸುಮಾರು ೫೦ ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಗ್ರಾಮದ ಯಲ್ಲಕ್ಕ ಎಂಬುವವರ ಸುಮಾರು ೫.೨೦ ಎಕರೆ ಪ್ರದೇಶದಲ್ಲಿದ್ದ ಫಸಲಿಗೆ ಬಂದಿದ್ದ ಬಾಳೆ ಮಳೆಗೆ ನೆಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಗ್ರಾಮದ ವರಲಕ್ಷ್ಮಿಎಂಬುವವರ ಮೂರು ಎಕರೆ ಬಾಳೆ ತೋಟದ ಬಾಳೆ ಗಿಡಗಳು ನೆಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಶಿವಶಂಕರಪ್ಪ ಮತ್ತು ಶಾಂತಕುಮಾರ್ ಎಂಬುವವರ ಸುಮಾರು ೩೦ ಅಡಿಕೆ ಮರಗಳು, ಓಬಳಾಪುರ ಕಾವಲ್ನ ಯರ್ರಿಸ್ವಾಮಿ ಎಂಬುವವರ ೩೦ ಅಡಿಕೆ ಮರಗಳು ಮಳೆ ಗಾಳಿಗೆ ಮುರಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಗ್ರಾಮ ಲೆಕ್ಕಾಧಿಕಾರಿ ಗ್ರಾಮಕ್ಕೆ ತೆರಳಿ ತೋಟಗಾರಿಕೆ, ಕೃಷಿ ಬೆಳೆ ಹಾನಿಕುರಿತಂತೆ ತಾಲ್ಲೂಕು ಆಡಳಿತಕ್ಕೆ ವರದಿ ನೀಡಿದ್ಧಾರೆ.