i
ಕಾಡುಗೊಲ್ಲ ಸಾಂಸ್ಕೃತಿಕ ನಾಯಕರಾದ ಚಿತ್ತಯ್ಯ-ಕಾಟಯ್ಯ ರವರ ತತ್ವ ಆದರ್ಶಗಳನ್ನು ರೂಢಿಸಿಕೊಳ್ಳಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಡುಗೊಲ್ಲ ಸಮುದಾಯದ ಪುರಾಣ ಪುರುಷರಾದ ಚಿತ್ತಯ್ಯ ಕಾಟಯ್ಯ ರವರ ತತ್ವ ಆದರ್ಶಗಳನ್ನು ಇಂದಿನ ಯುವಪೀಳಿಗೆ ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ಹಾಗೂ ಸಾಹಿತಿ ಪ್ರೊ. ಜಿ.ಪರಮೇಶ್ವರಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ವೇದಾವತಿನಗರದ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯು, ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕ ಕುರಿತು ಆಯೋಜಿಸಿದ್ದ ಪಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಡುಗೊಲ್ಲ ಸಮುದಾಯಕ್ಕೆ ತನ್ನದೇ ಆದ ಸಂಸ್ಕೃತಿ, ಪರಂಪರೆ ಹೊಂದಿದ್ದು, ಇದರ ಇತಿಹಾಸ ಬೆಳೆದುಬಂದ ಬಗೆಯನ್ನು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದಲ್ಲಿ ತಿಳಿಯಬಹುದಾಗಿದೆ. ಕಾಡುಗೊಲ್ಲರು ಶಿವನ ಬೆವರಿನಿಂದ ಹುಟ್ಟಿದ್ದು, ಉತ್ತಮ ಸಂಸ್ಕೃತಿಯ ನೆಲೆಯಿಂದ ಬಂದವರಾಗಿದ್ದಾರೆ, ಇಂತಹ ಪುಸ್ತಕಗಳನ್ನು ಬರೆಯುವುದರಿಂದ ನೆರೆಹೊರೆ ಸಮಾಜ ಸಮುದಾಯ ಗುರುತಿಸುತ್ತದೆ, ಪುಸ್ತಕ ಓದುವುದರಿಂದ ಬರೆಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ, ವ್ಯಕ್ತಿಯಲ್ಲಿರುವ ದು:ಖ ಸಂಕಟ ವೇದನೆ ಮರೆಯಲು ಓದು ಬರಹ ಸ್ಪೂರ್ತಿಯಾಗುತ್ತದೆ ಎಂದು ಹೇಳಿದರು. ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯ ಪುಸ್ತಕದ ವ್ಯಾಖ್ಯಾನಕಾರ ಹಾಗೂ ನಿವೃತ್ತ ಪ್ರಾಂಶುಪಾಲರಾದ ಕಾಮಣ್ಣ ಮಾತನಾಡಿ, ಕಾಡುಗೊಲ್ಲ ಸಮುದಾಯದ ಇತಿಹಾಸವನ್ನು ಪ್ರೊ.ಜಿ.ಪರಮೇಶ್ವರಪ್ಪ ರವರು ಚಿತ್ತಯ್ಯ ಕಾಟಯ್ಯ ಪುರಾಣ ಕಾವ್ಯವನ್ನು ಬಾಮಿನಿ ಷಟ್ಪದಿಯಲ್ಲಿ ಬರೆದಿದ್ದಾರೆ. ಇದು ಮುಂದಿನ ಯುವಪೀಳಿಗೆ ತಿಳಿಯಲು ಸಹಕಾರಿಯಾಗುತ್ತದೆ, ಕಾಡುಗೊಲ್ಲರ ಇತಿಹಾಸವು ಬಹಳ ಪ್ರಾಚೀನವಾಗಿದ್ದು, ಶಿವ ಪಾರ್ವತಿಯು ಭೂಮಿಯ ಪರ್ಯಟನೆ ಮಾಡುವ ಸಂದರ್ಭದಲ್ಲಿ ಗುಡಿಬಂಡೆ ಮತ್ತು ನಿಡಗಲ್ ಮಧ್ಯೆ ಕಾಡಿಗೆ ಬೆಂಕಿ ಬಿದ್ದಿರುವ ಸಂದರ್ಭದಲ್ಲಿ ನವಿಲುಗಳು ಶಿವನನ್ನು ಬೇಡುತ್ತಾ ನಾವು ಇರುವವರೆಗೂ ನಮ್ಮ ನವಿಲು ಗರಿಯನ್ನು ನಿಮಗೆ ಅರ್ಪಣೆ ಮಾಡುತ್ತೇವೆ, ಈ ಬೆಂಕಿಯನ್ನು ನಂದಿಸು ಎಂದು ಶಿವವನ್ನು ಬೇಡಿಕೊಳ್ಳುತ್ತವೆ. ಆಗ ಬೆಂಕಿಯನ್ನು ನಂದಿಸುವಾಗ ಶಿವನ ಬೆವರಿನ ಹನಿಯಿಂದ ೦೩ ಜನ ಹುಟ್ಟುತ್ತಾರೆ. ಇವರು ಶಿವನ ಮಕ್ಕಳಾಗಿ ಕಾಟಯ್ಯ ಚಿತ್ತಯ್ಯ ಓಬಳನರಸಿಂಹಯ್ಯ ರಾಜ್ಯಭಾರ ಮಾಡುತ್ತಾರೆ. ಇವರು ಕಾಡುಗೊಲ್ಲರ ಮೂಲಪುರುಷರಾಗಿ ಬಂದಿದ್ದಾರೆ ಎಂದು ಹೇಳಿದರು. ಯುವ ಮುಖಂಡ ಕರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಿಯಾಲ ಸರ್ಕಾರಿ ಪ್ರೌಢಶಾಲೆಯ ನಿವೃತ್ತಿ ಮುಖ್ಯ ಶಿಕ್ಷಕರಾದ ವೈ.ಶಿವಲಿಂಗಪ್ಪ, ತಮ್ಮಣ್ಣ, ಯುವ ಮುಖಂಡರಾದ ನಿರಂಜನ್, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲ್ಲೂಕು ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಚಿಕ್ಕಣ್ಣ, ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಜೆ.ನಿಜಲಿಂಗಪ್ಪ, ಡಿ.ಪಾಂಡುರಂಗಪ್ಪ, ಕಾಂತರಾಜು, ಡಿ.ದಾಸಣ್ಣ, ನಾಗರಾಜು, ಮಹಲಿಂಗಪ್ಪ ಅರ್ಚಕ ರಾಮಚಂದ್ರಪ್ಪ, ತಿಮ್ಮಣ್ಣ, ರಾಮು, ಕೃಷ್ಣಪ್ಪ ಹಾಗೂ ಇತರರು ಉಪಸ್ಥಿತರಿದ್ದರು.