i
ಯುವತಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ…
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ಯುವತಿ ಕೊಲೆ ಮಾಡಿದ ಆರೋಪಿಯೊಬ್ಬನಿಗೆ ಚಿಕ್ಕಮಗಳೂರು ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಯುವತಿಗೆ ಚಾಕುವಿನಿಂದ ಮನ ಬಂದಂತೆ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗೆ ಚಿಕ್ಕಮಗಳೂರಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಎನ್ಆರ್ ಪುರ ತಾಲೂಕಿನ ಬಿ.ಟಿ.ಮಿಥನ್ ಶಿಕ್ಷೆಗೊಳಗಾದ ವ್ಯಕ್ತಿ
ಈತ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ, ಅದರ ನಡುವೆ ಆಕೆ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಾರೆಂಬ ಸಂಶಯದಿಂದ ಅವರನ್ನು 2019ರ ಸೆಪ್ಟೆಂಬರ್ 17 ರಂದು ಬೈಕಿನಲ್ಲಿ ಕರೆದುಕೊಂಡು ಬಂದು ಮಾಗುಂಡಿ ಗ್ರಾಮದ ಬಳಿ ಭದ್ರಾನದಿ ದಡದಲ್ಲಿ ಚಾಕುವಿನಿಂದ ದೇಹದ ವಿವಿಧೆಡೆ ಚುಚ್ಚಿದ್ದ. ಬಳಿಕ ಆಕೆಯನ್ನ ನದಿಗೆ ತಳ್ಳಿದ್ದ. ಇದರ ನಡುವೆಯು ಆರೋಪಿಯಿಂದ ತಪ್ಪಿಸಿಕೊಂಡು ಯುವತಿ ಅಲ್ಲಿಯ ಸಾರ್ವಜನಿಕರ ರಕ್ಷಣೆ ಪಡೆದು, ಅವರ ಮೂಲಕ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.
ಈ ಕೇಸ್ನ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಿಥನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್ನಲ್ಲಿ ವಿಚಾರಿಸಿದ ಅಂತಿಮವಾಗಿ ನ್ಯಾಯಾಧೀಶರಾದ ಭಾನುಮತಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ, ಹಣ ಕಟ್ಟದೆ ಹೋದರೆ ಶಿಕ್ಷೆಯ ಪ್ರಮಾಣ ಮತ್ತೆ 6 ತಿಂಗಳಿಗೆ ವಿಸ್ತರಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಘವೇಂದ್ರ ರಾಯ್ಕರ್ ವಾದ ಮಂಡಿಸಿದರು.