i
ಬಸವ ಸ್ಮರಣೆ ಎಂದರೆ ಏನಂತೆ?– ಕವಿತೆ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಣ್ಣ ಅಣ್ಣಾ ಬಸವಣ್ಣಾ
ಇಂದು ನೀನು ಹುಟ್ಟಿದ ದಿನವಂತೆ.
ಸಂಭ್ರಮವಾದರು ಯಾಕಂತೆ?
ಸ್ಮರಣೆ ಎಂದರೆ ಏನಂತೆ?
ನೀ ನುಡಿದು ನಡೆದುದೆಲ್ಲವ
ಗಾಳಿ ಗಂಟು ಅಡವಿ ಪಾಲು ಮಾಡಿದವರಿಗೆ
ನಿನ್ನ ಸ್ಮರಣೆಯಾದರು ಯಾಕಂತೆ?
ಸ್ಮರಣೆ ಎಂದರೆ ಏನಂತೆ?
ಹರಿವ ನೀರ ಕೆಡಿಸಿ ನಡೆವ ದಾರಿಗೆ
ಕಲ್ಲು ಮುಳ್ಳುಗಳಿರಿಸಿ,
ಬಡ ಜನರ ಹೆಗಲೇರಿ ಹೊಟ್ಟೆ ಹೊರೆವ
ನರಿ ಜನಗಳಗೆ ನಿನ್ನ ಸ್ಮರಣೆ ಏಕಂತೆ?
ನೀ ಕೊಟ್ಟ ಅಣಿ ಮುತ್ತು ಸಪ್ತಶೀಲಗಳನು
ಅಟ್ಟಕ್ಕೇರಿಸಿ ನುಡಿಯಲ್ಲಿ
ಚಟ್ಚ ಕಟ್ಟಿದರೆ ನಡೆಯಲ್ಲಿ
ಶುದ್ಧಿ ಎಂತು ಅಂತರಂಗ ಬಹಿರಂಗದಲ್ಲಿ?
ಕಳುವ ಕೊಲುವ ಹುಸಿಯ ನುಡಿವ
ತನ್ನ ಬಣ್ಣಿಸಿ ಎದುರ ಹಳಿವ
ಹೊಸ ವಿದ್ಯೆಗಳು
ನಿತ್ಯ ರಣರಣಿಸುತಿವೆ ಇಲ್ಲಿ, ಎಲ್ಲರಲ್ಲಿ.
ನೀನೊರೆದ ಕಾಯಕ ತತ್ತ್ವವು
ಎಲ್ಲ ಶರಣರ ಸತ್ಯ ಪಾತ್ರವು
ಹರಿದು ಹೋಗಿದೆ ಚಿಂದಿ ಚಿಂದಿ;
ದುರಾಸೆಗಳು ಜುಗುಲಬಂಧಿ.
ಹೊಲಸು ಮಾಡುವನೊಬ್ಬ
ಅಸಲಿಗೆ ಬಲಿಯಾಗುವವನಿನ್ನೊಬ್ಬ;
ತಲೆ ಹಿಡಿದವರು ಕೊಲೆ ಮಾಡಿದವರು
ನುಣುಚಿಕೊಳ್ಳಲು ದಾರಿ ನೂರಾರು.
ದಾಸೋಹವೆಂಬುದು ದಾರಿ ತಪ್ಪಿ
ಕಿತ್ತು ತಿಂಬುವ ಸ್ವಾಹವಾಗಿದೆ;
ಅನ್ನವಿಕ್ಕುವ ಮನಗಳಿಗೆ ಕನ್ನವಿಕ್ಕುವ ಕೈಗಳು;
ಕೇಳಲಾಗದು ಸಜ್ಜನರ ಗೋಳು.
ಬೆವರ ಬಸಿದು ದುಡಿದ ಮಾಲು
ಕಳ್ಳ ಸಂತೆಯಲಿ ಕಿತ್ತು ತಿನ್ನುವರ ಪಾಲು.
ಅನ್ನದಾತ ಸತ್ತು ಬಿದ್ದೊಡೆ
ತಿನಬಂದ ನಾಯಿಗಳು ನುರಾರು.
ಶಿವಯೋಗವೆಂಬುದು
ಅಂಗೈಯ ಲಿಂಗ ಕಳೆದು ಧ್ಯಾನವಳಿದು
ಗುಡಿ ಗುಂಡಾರ ಸೇರಿ ಪೂಜೆಗೊಂಡಿದೆ ಮತ್ತೆ
ಶಂಕ ಜಾಗಟೆ ಗಂಟೆಗಳ ಸದ್ದಿನಲ್ಲಿ;
ಮತಿಯಾಗಿದೆ ಮಲೆತು ನಿಂತ ನೀರು
ಅಭಷೇಕ ರತ್ನದಾರತಿಗಳರ್ಚನೆಯಲ್ಲಿ,
ಸರ್ವ ಸುಖ ಮೃಷ್ಟಾನ್ನ ಭೋಗದಲ್ಲಿ
ಜಾತಿ ಸೂತಕಗಳ ಕರ್ಮಕಾಂಡದಲ್ಲಿ.
ಅಣ್ಣ ಅಣ್ಣಾ ಬಸವಣ್ಣಾ
ನೀ ಹಚ್ಚಿಟ್ಟ ಕಲ್ಯಾಣ ದೀಪ
ತೈಲವಳಿದು ಬತ್ತಿ ಒಣಗಿ ಇಂಗಿಹೋಗುತಿದೆ
ಲೋಕ ಕಲ್ಯಾಣ ಬೆಳಕು.
ಎಲ್ಲಿರುವೆ ಬಾ ಅಣ್ಣ ಮತ್ತೊಮ್ಮೆ ಜಗದಲ್ಲಿ
ಜಡ ಜನರ ಎದೆಯಲ್ಲಿ
ನೋವಿಂಗೆ ಮಿಡಿವ ಪ್ರಾಣಮಿತ್ರನಾಗಿ
ಸಕಲ ಜೀವಿಗಳಿಗೆ ಲೇಸಾಗಿ.
ಕವಿತೆ– ಡಾ.ಜಿಎನ್ನೆಂ, ದೂ. ೯೪೪೯೦ ೭೭೦೦೩