i
ಬಸವನ ಜನ ಕಲ್ಯಾಣ ಚಿಂತನಾ ಧಾರೆ–ಪ್ರೊ.ಹೆಚ್.ಲಿಂಗಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
-ಬಸವನ ಜನಕಲ್ಯಾಣ ಚಿಂತನಾಧಾರೆ-
ಬದುಕಲು ಒಂದಿಲ್ಲೊಂದು ದುಡಿಮೆ ಮಾಡಬೇಕಿದ್ದ ಸಂದರ್ಭದಲ್ಲಿ ದೈಹಿಕ ಶ್ರಮದ ವೃತ್ತಿಗಳು ಸಾರ್ವತ್ರಿಕ ಮಾನವನು ತನ್ನ ಆಹಾರವನ್ನು ತಾನೇ ಹುಡುಕಿ ಸಂಗ್ರಹಿಸಿಕೊಳ್ಳಬೇಕಾಗುತ್ತಿತ್ತು. ನಂತರದ ದಿನಗಳಲ್ಲಿ ಮಾನವನು ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ, ದೈಹಿಕ ಶ್ರಮದ ವೃತ್ತಿಯನ್ನು ಹೀನಾಯವಾಗಿ ಕಾಣಲಾಯಿತು. ಸಮಾಜದಲ್ಲಿ ಒಂದು ಗುಂಪು ವಿದ್ಯೆಯನ್ನು ತನ್ನ ಹಿಡಿತದಲ್ಲಿರಿಸಿಕೊಂಡು ವೇದಶಾಸ್ತ್ರ, ಪುರಾಣ, ಆಗಮ ಗ್ರಂಥಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಿತು. ಬಹುಪಾಲು ಬಹುಕಾಲ ಜನರನ್ನು ಅಜ್ಞಾನದಲ್ಲಿರಿಸುವುದರ ಮೂಲಕ ಅವರ ದೈಹಿಕ ಶ್ರಮದ ಉತ್ಪನ್ನಕ್ಕೆ ’ಒಡೆಯರು’ ತಾವಾಗಿ ನಿರಾತಂಕದಲ್ಲಿ ಬದುಕುವ ವ್ಯವಸ್ಥೆಯನ್ನು ಮಾಡಿಕೊಂಡರು. ಶ್ರಮ ಜೀವಿಗಳನ್ನು ಹಗಲಿರುಳು ದುಡಿಯಲು ಹಚ್ಚಿ ದುಡಿಮೆಯಿಂದ ಬಂದ ಉತ್ಪನ್ನಗಳನ್ನು ತಮ್ಮಲ್ಲಿ ಯಥೇಚ್ಚವಾಗಿ ಸಂಗ್ರಹಿಸಿಟ್ಟುಕೊಂಡು, ಸಮಾಜದ ಮೇಲ್ವರ್ಗಗಳು ಐಷಾರಾಮಿಯಾಗಿ ಬದುಕುತ್ತಿದ್ದವು. ಬಸವ ಕಾಯಕ ತತ್ವಕ್ಕೆ ಸಾಮಾಜಿಕ ನ್ಯಾಯ ಮತ್ತು ಸಾರ್ವತ್ರಿಕ ಮಹತ್ವವನ್ನು ತಂದುಕೊಡಲು ಪ್ರಯತ್ನಿಸಿದರು. ’ಜ್ಞಾನ ಶ್ರೇಷ್ಠ ಶ್ರಮ ಕನಿಷ್ಠ’ ಎಂಬ ವ್ಯತ್ಯಾಸವನ್ನು ಕಟುವಾಗಿ ವಿರೋಧಿಸಿದರು.
ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ
ವೇದ ಘನವೆಂಬೆನೆ? ಪ್ರಾಣವಧೆಯ ಹೇಳುತ್ತಿದೆ
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತದೆ
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ
ತ್ರಿವಿಧ ದಾಸೋಹದಲ್ಲಲ್ಲದೆ ಕಾಣಬಾರದು ಕೂಡಲಸಂಗಮದೇವನ
ಮೇಲಿನ ವಚನದ ಸಾರ ಈ ರೀತಿಯಲ್ಲಿದೆ. ವೇದ, ಶಾಸ್ತ್ರಗಳ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಮೂಡಿಸುತ್ತದೆ. ಜೊತೆಗೆ ಶೋಷಣೆಗೆ ಕಾರಣವಾಗಿದೆ. ಶ್ರಮ ಜೀವಿಗಳನ್ನು ಗೌರವದಿಂದ ನೋಡುವ ಬದಲು ಕೀಳಾಗಿ ಕಾಣುತ್ತಾರೆ ಎಂಬುದನ್ನು ಬಸವಣ್ಣ ವಿರೋಧಿಸಿದರು. ಆದ ಕಾರಣ ಕುಲ-ಕಸುಬು ಮಾಡುವ ಕಾಯಕ ಜೀವಿಗಳನ್ನು ಕಾಯಕದ ಮೂಲಕ ಸಮಾಜದಲ್ಲಿ ಸಾಮಾಜಿಕ-ಆರ್ಥಿಕ ನ್ಯಾಯ ಬಲಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿದರು.
ಪ್ರತಿಯೊಬ್ಬ ವ್ಯಕ್ತಿ ಯಾವುದಾದರೊಂದು ಕಾಯಕ ಮಾಡಿ ಬದುಕಲೇಬೇಕಾಗಿತ್ತು. ದುಡಿಮೆಯಲ್ಲಿ ಶ್ರೇಷ್ಠ ಕನಿಷ್ಠವೆಂಬ ತಾರತಮ್ಯವಿರಬಾರದೆಂದು ಬಸವಣ್ಣನವರ ನಿಲುವಾಗಿತ್ತು. ಬಸವಣ್ಣನವರು ದುಡಿಮೆಯನ್ನು ಆಧ್ಯಾತ್ಮಿಕ ನೆಲೆಯ ಮೂಲಕ ದುಡಿಮೆಗಾರರಿಗೆ ಹೆಚ್ಚಿನ ಮಹತ್ವವನ್ನು ತಂದುಕೊಡಲು ಬಯಸಿದರು. ಬಸವಣ್ಣ ತಾವು ಮಾಡುವ ಕಾಯಕ ತನ್ನ ಉದ್ದೇಶಕ್ಕಾಗಿ ಅಲ್ಲ, ಅದು ಸಾಮಾಜಿಕ ಸಮಾನತೆಯನ್ನು ಸ್ಥಾಪಿಸಲು ಸಹಾಯಕವಾಗಿದೆ ಎಂಬ ಅಭಿಪ್ರಾಯ ಅವರ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ,
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ – ಮಕ್ಕಳಿಗೆಂದು
ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ
……………………………………………………….
ನಿಮ್ಮ ನಿಲುವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ
ತಲೆದಂಡ ಕೂಡಲಸಂಗಮದೇವಾ!
ಕಾಯಕವೆಂಬುದು ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕರ್ಮವಾಗಿರದೆ ಅದು ವ್ಯಕ್ತಿಯ ಆಧ್ಯಾತ್ಮಿಕ ವಿಕಾಸಕ್ಕೆ ಮತ್ತು ಸಾಮಾಜಿಕ ಹಿತಾಸಕ್ತಿಗೆ ಪೂರಕವಾಗಿರಬೇಕೆಂದು ಬಸವಣ್ಣ ಅಭಿಪ್ರಾಯಪಡುತ್ತಾರೆ.
ದೇವಸಹಿತ ಭಕ್ತ ಮನೆಗೆ ಬಂದೆಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ
ಕೂಡಲ ಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸವಾಣಿ
ವ್ಯಕ್ತಿಗಳ ಮೂಲಕ ಜಾತಿಯನ್ನು ತಿಳಿಯಲು ಪ್ರಯತ್ನಿಸುವುದರಿಂದ ಸಮಾಜದಲ್ಲಿ ಸಾಮಾಜಿಕ ಅಸಮಾನತೆಯ ಯಥಾ ಪ್ರಕಾರ ಮುಂದುವರೆಯುತ್ತದೆ ಎಂದು ಗ್ರಹಿಸಿದ ಬಸವಣ್ಣ ವೃತ್ತಿಯನ್ನಾಗಲಿ, ಜಾತಿಯನ್ನಾಗಲಿ, ಆಧಾರವಾಗಿರಿಸಿಕೊಂಡು ಮತ್ತೊಬ್ಬರನ್ನು ಕೀಳಾಗಿ ಕಾಣುವುದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಬಸವಣ್ಣ ಸಮಾಜದ ಒಳಿತಿಗಾಗಿ ವ್ಯಕ್ತಿ ತನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಅದು ಹೇಗೆ ಅಂದರೆ ಕಾಯಕ ಮತ್ತು ದಾಸೋಹಗಳ ಮೂಲಕ ಸಾಮಾಜಿಕ ಅಭ್ಯುದಯ ಸಾಧಿಸಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. ತಾನು ತನ್ನದು ಎಂಬ ಅಹಂಕಾರ ಮಮಕಾರಗಳನ್ನು ತೊರೆದು ಸಮಾಜದ ಒಟ್ಟು ಕ್ಷೇಮಕ್ಕಾಗಿ ಎಲ್ಲರೂ ಯತ್ನಿಸಬೇಕು. ಇಲ್ಲದಿದ್ದರೆ ನಾವು ಹಾಳಾಗುತ್ತೇವೆ ಎನ್ನುವುದನ್ನು ಬಸವಣ್ಣ ಹೀಗೆ ಹೇಳಿದ್ದಾರೆ.
ಊರ ಸೀರೆಗೆ ಅಗಸ ತಡಬಡಿಹಡೆದಂತೆ
ಹೊನ್ನೆನ್ನದು, ಹೆಣ್ಣಿನ್ನದು, ಮಣ್ಣಿನ್ನದೆಂದು ಮರುಳಾದೆ
ಸಮುದಾಯದ ಅಭಿವೃದ್ಧಿ ಸಾಧಿಸಲು ಯತ್ನಿಸುವವನಲ್ಲಿ ಇರುವ ಮೂಲಭೂತ ಗುಣ ದಯೆ. ನಾವೆಲ್ಲರೂ ದಯಾಮಯಿಗಳಾಗಬೇಕು. ಆಗ ಮಾತ್ರ ನಾವು ಧಾರ್ಮಿಕರಾಗುತ್ತೇವೆ.
ದಯವಿಲ್ಲದ ಧರ್ಮವದಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ
ದಯವೇ ಧರ್ಮದ ಮೂಲವಯ್ಯ
ಸಾಮಾನ್ಯವಾಗಿ ನಾವೆಲ್ಲರೂ ನಮ್ಮ-ನಮ್ಮ ಸಂಸಾರದ ತಾಪತ್ರಾಯಗಳಲ್ಲಿ ಮುಳುಗಿ ಸಮುದಾಯವನ್ನು ಮರೆತುಬಿಡುತ್ತೇವೆ. ಅದಕ್ಕಾಗಿ ಬಸವಣ್ಣ
ಸಂಸಾರವೆಂಬುದೊಂದು ಗಾಳಿಯ ಸೊಡದು,
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ
ಇದ ನಚ್ಚಿ ಕೆಡಬೇಡ
ಎಂದು ಎಚ್ಚರಿಸಿದ್ದಾರೆ ಬಸವಣ್ಣನವರು. ಸ್ವತಃ ಆಡಿದ ಹಾಗೆ ಮಾಡಿ ತೋರಿಸಿ ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ. ಬಸವಣ್ಣ ಸಮಾಜ ಸುಧಾರಕನಾಗಿ, ಅರ್ಥಶಾಸ್ತ್ರಜ್ಞನಾಗಿ ಕೆಲಸದ ಮಹತ್ವವನ್ನು ಮಾಡಿ ತೋರಿಸಿದರು. ಕನ್ನಡದ ಪ್ರಥಮ ಬಂಡಾಯ ಕವಿಯಾದರು. ಇಂದಿನ ದಲಿತ ಸಾಹಿತ್ಯ ಕೃಷಿಗೆ ಆಧಾರದ ಸೆಲೆಯಾದರು. ಮಹಿಳಾ ವಿಮೋಚನಾಗಾರರಾದರು. ದಮನಿತ ಜಾತಿ-ಕುಲಗಳ ವ್ಯತ್ಯಾಸವನ್ನು ಹೋಗಲಾಡಿಸಿದರು. ಇಂತಹ ವ್ಯಕ್ತಿಯನ್ನು ಯಾವುದೇ ಮತ-ಜಾತಿಗಳಿಗೆ ಸೀಮಿತಗೊಳಿಸಿ ನೋಡಬಾರದು ಬಸವ ಪಂಥ ಅಂಧಕಾರ ತುಂಬಿದ ಜಗತ್ತಿಗೆ ಕರುಣೆಯ ಸಿಂಚನೆಗೈದ ಮಹಾನ್ ಮಾನವತಾವಾದಿಯಾಗಿದ್ದಾರೆ. ಇವರ ಕಾಯಕ ತತ್ವವನ್ನು ಆಚರಣೆಗೆ ತರುವುದೇ ಇಂದಿನ ಜನಾಂಗವು ವಿಶ್ವದ ಈ ಮಹೋನ್ನತ ವ್ಯಕ್ತಿಗೆ ನೀಡುವ ಗೌರವ, ವಿಶ್ವದ ಶಾಂತಿಗೆ ಕೊಡುವ ಕೊಡುಗೆಯಾಗಿದೆ……..
ಮನು ಧರ್ಮಶಾಸ್ತ್ರದಲ್ಲಿ ಸ್ತ್ರೀಯರನ್ನು ನಿಕೃಷ್ಟವಾಗಿ ಕಂಡಿದ್ದರು. ಸ್ತ್ರೀ ಸಮಾನತೆಯ ಬಗ್ಗೆ ಬುದ್ಧ ಅಪಾರ ಗೌರವ ಭಾವನೆಯನ್ನು ಹೊಂದಿದ್ದರು. ಅದರಂತೆ ಬಸವಣ್ಣ ಕೂಡಾ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದರು. ಬಸವಣ್ಣ ಅನುಭವಮಂಟಪದಲ್ಲಿ ಅಂದೇ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಕಲ್ಪಿಸಿದ್ದರು. ಅದಕ್ಕೆ ಅವರ ಕಾಲದಲ್ಲಿ ಇದ್ದ ಸ್ತ್ರೀ ವಚನಕಾರರ ದಂಡು ಬಹುದೊಡ್ಡದು. ತನ್ನ ಸ್ವಂತ ಜೀವನದಲ್ಲಿ ಮಹಿಳೆಯರನ್ನು ಶಿವನ ಪತ್ನಿ ಮಹಾದೇವಿ ಎಂದೇ ಕಂಡು ಬಸವಣ್ಣನವರು ಆರಾಧಿಸುತ್ತಿದ್ದರು. ಬಸವಣ್ಣನವರ ಕಾಲದ ಶ್ರೇಷ್ಠ ವಚನಕಾರ್ತಿ ಅಕ್ಕಮಹಾದೇವಿ ಅಪ್ರತಿಮೆ ಚೆಲುವೆಯಾಗಿದ್ದಳು. ಆಕೆಯನ್ನು ಬಸವಣ್ಣ ಅಲ್ಲಮ ಪ್ರಭುವಿಗೆ ಪರಿಚಯ ಮಾಡಿಸುವ ಪರಿ ಈ ರೀತಿ ಇದೆ.
ಕಾಯದ ಲಜ್ಜೆಯ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಎನ್ನ ಹೆತ್ತತಾಯಿ ಮಹಾದೇವಿಯಕ್ಕನ
ನಿಲವ ನೋಡಯ್ಯಾ ಪ್ರಭುವೆ
ಸ್ತ್ರೀ ಸಮುದಾಯವನ್ನು ತಾಯಿಗೆ ಸಮಾನ ಎಂದು ಕಂಡ ಬಸವಣ್ಣನವರ ಸಚ್ಚಾರಿರ್ತ್ಯಕ್ಕಿದು ಉದಾಹರಣೆ. ಸ್ತ್ರೀಯರ ಮೇಲಣ ಮೋಹದಿಂದ ದಾರಿ ತಪ್ಪುವ ಮಂದಿಯನ್ನು ಬಸವಣ್ಣ ಹೀಗೆ ಎಚ್ಚರಿಸಿದ್ದಾರೆ.
ಪರ ಸ್ತ್ರೀ ಪರಧನನೆಂಬೀ ಜೂಬಿಗಂಜುವೆ
ಛಲಬೇಕು ಶರಣಂಗೆ ಪರ ಸ್ತ್ರೀಯ ನೊಲ್ಲನೆಂಬ
ನೋಡಲಾಗದು ನುಡಿಸಲಾಗದು ಪರಸ್ತ್ರೀಯ ಕಾಣಿರೋ
ಪರ ವಧುವನ್ನು ಮಹಾದೇವಿ ಎಂಬೆ ಕೂಡಲಸಂಗಮದೇವ
ಪರಸ್ತ್ರೀಯನ್ನು ಬಯಸುವುದು ಮಹಾಪಾಪ ಅದಕ್ಕಾಗಿ ಬಸವಣ್ಣ ಹೀಗೆ ಹೇಳಿದ್ದಾರೆ. ಪರಧನ ಪರಸ್ತ್ರೀಯರಿಗೆ ಎಳಸದಂತೆ ಮನಸ್ಸನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ಚಲಿಸಿದರೆ, ಕೂಡಲಸಂಗಮ ದೇವನು ಒಲಿಯುವನು.
ಹೆಣ್ಣು ಜೀವನದ ಮಾರ್ಗದರ್ಶಕಿ, ಆಕೆಯಿಂದಾಗಿ ಗಂಡು ಸರಿಯಾದ ಮಾರ್ಗದಲ್ಲಿ ಜೀವನ ನಡೆಸಲು ಸಾಧ್ಯ ಹೆಣ್ಣನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದುದ್ದನ್ನು ಅಕ್ಕಮಹಾದೇವಿ, ಮುಕ್ತಾಯಕ್ಕ, ನೀಲಾಂಬಿಕೆ, ಗಂಗಾಂಬಿಕೆಯವರ ವಚನದಲ್ಲಿ ಕಾಣಬಹುದು.
ಹುಳಿವಿಡಿದು ಘೃತದ ಕಾಂಬಂತೆ
ಅಕ್ಷರ ವಿಡಿದು ವಿದ್ಯೆಯನವರಿಯಂತೆ
ಅನ್ನವ ಕೊಂಡು ಚೈತನ್ಯದ ಪಡೆವಂತೆ
ಸತಿ ಹಿಡಿದು ನಿರ್ಮಾಣ ಸತಿಯ ಕಾಣು
ಹೀಗೆ ಬಸವಣ್ಣ ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಿದ್ದಾರೆ.
ಜಾತಿಗಳ ವಿನಾಶಕ್ಕೆ ಬಸವಣ್ಣ ಯೋಚಿಸಿದ ಪರಿಯೇ ಭಿನ್ನವಾದುದು. ಅಂತರ ಜಾತಿಯ ಮದುವೆಯ ಮೂಲಕ ರಕ್ತ ಸಂಕರದ ಮೂಲಕ ಅರಳಯ್ಯ ಮತ್ತು ಮದುವರಸರ ಮಕ್ಕಳ ಮದುವೆಯಿಂದ ಜಾತಿ ವಿನಾಶದ ಪ್ರಯೋಗವನ್ನು ಆರಂಭಿಸಿ, ಯಶಸ್ಸನ್ನು ಗಳಿಸಿದರು. ಬಸವಣ್ಣ ಎಲ್ಲಾ ಕಸುಬುಗಳನ್ನು ಸಮಾನವಾಗಿ ನೋಡಿದರು. ಆದ ಕಾರಣ ಎಲ್ಲಾ ಜಾತಿಗಳು ಸಮಾನ ಎನ್ನುವುದು ಅವರ ದೃಷ್ಟಿಕೋನವಾಗಿತ್ತು.
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಈ ಹಿಂದೆ ಆಗಿ ಹೋದ ಮಹಾಪುರುಷದಲ್ಲಿ ಬಹುತೇಕರು ಅಂತರ್ ಜಾತಿ ಸಂಬಂಧದಿಂದ ಹುಟ್ಟಿದವರು. ಶ್ರೇಷ್ಠತೆಗೂ ಜಾತಿ ಅಥವಾ ಕುಲಕ್ಕೂ ಯಾವ ಸಂಬಂಧವೂ ಇಲ್ಲ, ಇದನ್ನು ಬಸವಣ್ಣ ಹೀಗೆ ಪ್ರಸ್ತುತಪಡಿಸಿದ್ದಾರೆ. ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ ಮಂಡೋದರಿ ಕಪ್ಪೆಯ ಮಗಳು
ಕುಲವನಸದಿರಿಂ, ಕುಲದಿಂದ ಮುನ್ನೇನಾದಿರಿ ಭೋ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ
ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ
ಮೂರು ಭುವನರಿಯೇ ನಾವಿದ ಕಾಣಿಂಭೋ
ನಮ್ಮ ಕೂಡಲ ಸಂಗನ ವಚನವಿಂತೆಂದುದು
ಶ್ವಪಚೋಪಿ……. ಯಾದಡೇನು, ಶಿವಭಕ್ತನೆ ಕುಲಜಂ ಭೋ!
ಹೀಗೆ ಜಾತಿ ವಿಷಯಗಳಿಗೆ ಸಂಬಂಧಿಸಿದಂತೆ, ಜಾತಿ ವಿನಾಶದೆಡೆಗೆ ನಿಜಕ್ಕೂ ಚಿಂತನೆ ನಡೆಸಿದ ವಚನಗಳು ಸಾಕ್ಷೀಕರಿಸುತ್ತವೆ. ಬಸವಣ್ಣನವರು ಅರವತ್ತು ನಾಲ್ಕು ಶೀಲ ವ್ರತಗಳಿಗಧಿಪತಿಯಾಗಿ ನಡೆದು ಸರ್ವಾಚಾರ ಸಂಪನ್ನರೆಸಿಕೊಂಡರು. ತಮ್ಮ ಘನ ವ್ಯಕ್ತಿತ್ವ ಪ್ರಭಾವ ಬೀರಿ, ಭಾರತ ಬೇರೆ ಬೇರೆ ಭಾಗಗಳಿಂದ ಅಂದಿನ ಕಾಲದಲ್ಲಿ ಕಲ್ಯಾಣಕ್ಕೆ ಬರಲು ಕಾರಣ ಕರ್ತರಾದರು. ಅವರನ್ನೆಲ್ಲ ಸಂಘಟಿಸಿದರು. ತಾವು ನೇತರರಾಗಿದ್ದರೂ ತಾರ್ಕಿಕವಾಗಿ ಶ್ರೇಷ್ಠವೆನಿಸಿದ ಯಾವ ಸ್ಥಾನಮಾನವನ್ನು ಬಯಸದೆ, ಸೇವೆಗೆ ತಮ್ಮನ್ನೇ ಅರ್ಪಿಸಿದ ಹಿನ್ನೆಲೆಯಲ್ಲಿ ಉಳಿದು, ಶರಣ-ಶರಣೆಯರ ಸಹಾಯ ಸಹಕಾರಗಳಿಂದ ಸಮಾಜಕ್ಕಂಟಿದ ಎಲ್ಲಾ ಕಪ್ಪು ಕಲೆಗಳನ್ನು ಸ್ವಚ್ಚವಾಗಿ ತೊಳೆಯಲು ಕಂಕಣ ಬದ್ದರಾದರು. ಇಷ್ಟೆಲ್ಲ ತ್ಯಾಗ ಮಾಡಿದರೂ ಯಾವ ಫಲ ಪದವಿಗಳನ್ನೂ ಅವರ ಬಯಸಲಿಲ್ಲ.
ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ,
ರುದ್ರ ಪದವಿಯನೊಲ್ಲೆ.
ನಾನು ಮತ್ತಾವ ಪದವಿಯನೊಲ್ಲೆನಯ್ಯಾ
ಕೂಡಲ ಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾ ಪದವಿಯನು ಕರುಣಿಸಯ್ಯ
ಎಂದು ಮತ್ತು ಸಮಾಜ ಸೇವೆಗೈಯುವ ಅವಕಾಶವನ್ನು ಕರುಣಿಸೆಂದು ಅವರು ಭಾವಿಸಿದರು.
ಬಸವಣ್ಣನವರು ಕಾಯಕವನ್ನೇ ಕೈಲಾಸ ಎಂದು ಪರಿಗಣಿಸುವ ಮೂಲಕ ದೈಹಿಕ ಶ್ರಮದಲ್ಲಿ ತಾರ್ಕಿಕ-ಅತಾರ್ಕಿಕ ವಿಷಯಗಳನ್ನು ಸಂಗಮಿಸಿದ್ದಾರೆ. ಇಹ-ಪರಗಳನ್ನು ಕಾಯಕವು ಹೇಗೆ ಬೆಸೆಯುತ್ತದೆ ಅನ್ನುವುದಕ್ಕೆ ಬಸವಣ್ಣ ಹೇಳಿದ್ದಾರೆ.
ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯ ಜಂಗಮ ದಾಸೋಹಕ್ಕೆಂದು.
ಆಧುನಿಕ ಅರ್ಥವ್ಯವಸ್ಥೆಯಲ್ಲಿ ಪ್ರಥಮವಲಯ ಕೃಷಿ, ಕೈಗಾರಿಕೆ ದ್ವಿತೀಯ ವಲಯ ಮತ್ತು ಸೇವಾ ವಲಯವೆಂದು ವಿಂಗಡಿಸಿದ್ದಾರೆ. ಇದೇ ವಿಂಗಡಣೆಯನ್ನು ನಾವು ಬಸವಣ್ಣನವರ ಈ ಮೇಲಿನ ವಚನದಲ್ಲಿ ಕಾಣುತ್ತೇವೆ. ಇಂದು ನಮ್ಮ ದೇಶದಲ್ಲಿ ತೃಪ್ತಿಯ ಮನೋಭಾವ ಎಂಬುವುದಿಲ್ಲ. ನಿರುದ್ಯೋಗಿಗಳಿಗೆ ಭರ್ಜರಿಯಾಗಿ ಸಂಪಾದಿಸಲು ಸಾಧ್ಯವಾಗುವ ಸರ್ಕಾರಿ ಕೆಲಸದ ಮೋಹ ಸಣ್ಣ ಹುದ್ದೆಯಲ್ಲಿರುವವರಿಗೂ ದೊಡ್ಡ ಹುದ್ದೆಯ ಮೇಲೆ ಕಣ್ಣು ಹೇಗಾದರೂ ಮಾಡಿ ವಾಮ ಮಾರ್ಗದಿಂದ ಪದವಿ ಮತ್ತು ಹುದ್ದೆಗಳನ್ನು ಗಳಿಸುವ ಪ್ರಯತ್ನವನ್ನು ಹೆಚ್ಚಿನವರು ಮಾಡುತ್ತಿದ್ದಾರೆ. ದೈಹಿಕ ಶ್ರಮದ ಮಹತ್ವ ಮತ್ತು ಕಾಯಕತತ್ವದ ಶ್ರೇಷ್ಠತೆಯನ್ನು ಜನರು ಅರಿಯದೇ ಇರುವುದು ಇದಕ್ಕೆ ಕಾರಣ.
ತಾನು ಬದುಕಿ ಇತರರನ್ನು ಬಾಳಗೊಡುವುದು ಜೀವನ ಧರ್ಮ ಎನ್ನುತ್ತಾರೆ. ಕಾಯಕ ತತ್ವ ಕುರಿತು ಬಸವಣ್ಣ ಹೀಗೆ ಹೇಳಿದ್ದಾರೆ.
ಕಾಗೆಒಂದಗುಳ ಕಂಡಡೆ ಕರೆಯದೆ
ತನ್ನ ಬಳಗವನು?
ಕೋಳಿ ಒಂದು ಗುಟುಕ ಕಂಡಡೆ
ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಇರುವುದನ್ನು ಹಂಚಿ ತಿನ್ನಬೇಕು ಕೂಡಿಡಬಾರದು. ಮಾನವ ಸ್ವಾರ್ಥಿಯಾಗಬಾರದು ಎನ್ನುವುದನ್ನು ಬಸವಣ್ಣ ಹೀಗೆ ಹೇಳಿದ್ದಾರೆ.
ಹೊನ್ನಿನೊಳಗೊಂದೊರೆಯು, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ
ಕಾಯಕವನ್ನು ಮಾಡುವವರಿಗೆ ಬಡತನವೆಂಬುವುದಿಲ್ಲ. ಕಾಯಕವನ್ನು ಮಾಡುವವರೆ ನಿಜವಾದ ಭಕ್ತರು. ಆದುದರಿಂದ ಬಸವಣ್ಣ ಪ್ರಶ್ನಿಸುತ್ತಾರೆ. ಭಕ್ತರಿಗೆ ಬಡತನವುಂಟೆ? ನಿತ್ಯರಿಗೆ ಮರಣವುಂಟೆ? ಕಾಯಕ ಮತ್ತು ದಾಸೋಹ ಮಾಡುವವನ ಮನೆ ಕೈಲಾಸ ಎಂದು ಬಸವಣ್ಣ ಸಾರಿದ್ದಾರೆ.
ಕೃಷಿ ಕೃತ ಕಾಯಕವಾದರೇನು?
ತನು-ಮನ ಬಳಲಿಸಿ ತಂದು ದಾಸೋಹ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ
ಅದೆಂತೆನೆ ಆತನ ತನು ಶುದ್ಧ, ಮನ ಶುದ್ಧ, ನಡೆ ಶುದ್ಧ
ಆತನ ನುಡಿಯೆಲ್ಲವೂ ಪಾವನವೂ
ಅಂತಪ್ಪ ಸದ್ಭಕ್ತನ ಮನೆಯೇ ಕೈಲಾಸವು…….
ಹೀಗೆ ಬಸವಣ್ಣ ಕಾಯಕ ತತ್ವದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಜೀವನದಲ್ಲಿ ಮೋಕ್ಷ ಸಾಧಿಸಲು ಗುಡಿಗೋಪುರಗಳನ್ನು ಸುತ್ತಬೇಕಾಗಿಲ್ಲ. ಕಾಯಕದಿಂದ ಮೋಕ್ಷ ದೊರೆಯುತ್ತದೆ ಎಂದು ಸಾರಿದ್ದಾರೆ. ಬಸವಣ್ಣನವರು ಐಹಿಕ ಜೀವನದಲ್ಲಿ ಸಂಪತ್ತಿನ ಮಹತ್ವವನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡಿದ್ದರು. ಆದುದರಿಂದ ಅವರು ಅವನೇವನಾದಡೇನು ಹೇಮವಿಲ್ಲ ದಂಗೈಸಬಹುದೇ? ಎಂದು ಪ್ರಶ್ನಿಸಿದ್ದಾರೆ. ಆದರೆ ಸಂಪತ್ತು ಸದ್ವಿನಿಯೋಗವಾಗಬೇಕು ಎನ್ನುವುದು ಬಸವಣ್ಣನವರ ನಿಲುವು. ನಾವು ಈ ಸಮಾಜದಿಂದ ಸಂಪತ್ತನ್ನುಗಳಿಸುತ್ತೇವೆ. ಅದು ಸಮಾಜೋದ್ಧಾರಕ್ಕೆ ಸದ್ವಿನಿಯೋಗವಾಗಬೇಕು ಎನ್ನುವುದನ್ನು ಬಸವಣ್ಣ ಹೀಗೆ ಹೇಳಿದ್ದಾರೆ.
ನೀ ಕೊಟ್ಟ ದ್ರವ್ಯ ನಿಮಗಲ್ಲದೆ
ಮತ್ತೊಂದು ಕ್ರಿಯೆ ಮಾಡೆನು
ನಿಮ್ಮ ಸೊಮ್ಮಿಂಗೆ ಸವೆಸುವೆನು ನಿಮ್ಮಾಣೆ
ಆದುದರಿಂದ ಕಾಯಕದಿಂದ ಸಂಪತ್ತನ್ನು ಗಳಿಸಬೇಕು. ಹಾಗೆ ದುಡಿದ ಸಂಪತ್ತಿನಲ್ಲಿ ನಮಗೆ ಅಗತ್ಯವಿರುವಷ್ಟನ್ನು ಇಟ್ಟುಕೊಂಡು ಉಳಿದುದನ್ನು ದಾಸೋಹಕ್ಕೆ ನೀಡಬೇಕು ಎಂದು ಬಸವಣ್ಣ ಹೇಳಿದ್ದಾರೆ. ಸಂಪತ್ತನ್ನು ಅಪವ್ಯಯ ಮಾಡುವುದನ್ನು ಬಸವಣ್ಣ ಖಂಡಿಸಿದ್ದರು. ಸ್ತ್ರೀಯರ ಆಭರಣಕ್ಕಾಗಿ ಜನರು ಗುಡಿ, ಮಠ, ದೇವರು, ಮದುವೆ ಮುಂತಾದವುಗಳಿಗಾಗಿ ಹಣದ ಅಪವ್ಯಯ ಮಾಡುವುದನ್ನು ಕಂಡಾಗ ಅವರಿಗೆ ಎಲ್ಲಿಲ್ಲದ ವ್ಯಥೆಯಾಗುತ್ತಿತ್ತು. ಅದರಲ್ಲಿಯೂ ಶ್ರೀಮಂತರು ತಮ್ಮ ಹಣವನ್ನು ಸಮಾಜದ ಒಳಿತಿಗಾಗಿ ಉಪಯೋಗಿಸದೆ ದೇವಾಲಯ ಕಟ್ಟಲು ಪೋಲು ಮಾಡುವುದನ್ನು ಕಂಡು ಅವರು ಹೀಗೆ ಹೇಳಿದ್ದಾರೆ.
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆಯ್ಯ? ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರಹೊನ್ನ ಕಲಶವಯ್ಯಾ
ಅಂದರೆ ಆರಾಧನಾ ಕೇಂದ್ರಗಳಿಗಾಗಿ ಹಣ ಪೋಲು ಮಾಡುವುದು ಡಾಂಭಿಕ ಭಕ್ತಿ. ನಿಜವಾದ ದೇವಾಲಯ ನಮ್ಮ ದೇವರೇ. ಮನುಷ್ಯರಲ್ಲಿ ದೇವರನ್ನು ಕಾಣಲು ಸಾಧ್ಯವಾಗದಿದ್ದರೆ ಆರಾಧನಾ ಕೇಂದ್ರಗಳಲ್ಲಿ ದೇವರು ಇರಲು ಹೇಗೆ ಸಾಧ್ಯ ಎನ್ನುವುದು ಬಸವಣ್ಣನವರ ವಚನದ ಆಂತರ್ಯವಾಗಿದೆ. ಸಂಪತ್ತು ಸದಾ ಚಲಿಸುತ್ತಿರಬೇಕು, ನಾವು ಸಂಪತ್ತನ್ನು ಕೂಡಿ ಹಾಕಿ ಗರ್ವವನ್ನು ಬೆಳೆಸಿಕೊಳ್ಳುವುದು ತಪ್ಪು. ಅದಕ್ಕೆ ಬಸವಣ್ಣ ಸಿರತನ ಹಿಡಿದವರ ನುಡಿಸಲು ಬಾರದು ಎಂದು ಹೇಳಿದ್ದಾರೆ ಸಂಪತ್ತನ್ನು ಕೂಡಿ ಹಾಕಿದರೆ ಅದು ಅಸಮಾನತೆಗೆ, ಶೋಷಣೆಗೆ ಕಾರಣವಾಗುತ್ತದೆ. ಹಣ ಅಗತ್ಯ, ಆದರೆ ಅದುವೇ ಜೀವನದಲ್ಲಿ ಸರ್ವಸ್ವ ಎಂದು ನಾವು ಭಾವಿಸಬಾರದು ಎನ್ನುವುದನ್ನು ಬಸವಣ್ಣ ಮನಗಂಡು
ಕಾಂಚನವೆಂಬ ನಾಯನಚ್ಚಿ ನಿಮ್ಮ ನಾನು ಮರೆದನಯ್ಯಾ
ಕಾಂಚನಕ್ಕೆ ವೇಳೆಯಿಲ್ಲದ ಲಿಂಗಕ್ಕೆ ವೇಳೆಯಿಲ್ಲ
ಹಡಿಕೆಗೆ ಮೆಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೇ?……. ಎಂದು ಕೇಳಿದ್ದಾರೆ
ಹೀಗೆ ಬಸವಣ್ಣನವರು ಆರ್ಥಿಕ ಕಲ್ಯಾಣದ ಬಗ್ಗೆ ಚಿಂತಿಸಿದ್ದಾರೆ. ಒಟ್ಟಿನಲ್ಲಿ ಮಾನವನ ಇತಿಹಾಸದ ಆರಂಭದ ಕಾಲದಿಂದ ಇಂದಿನವರೆಗೆ ಜಗತ್ತಿನಲ್ಲಿ ಬಾಳಿ ಬೆಳಗಿದ ಬಹುತೇಕ ಸುಧಾರಕರು ಸಾಮಾನ್ಯವಾಗಿ ಪ್ರಜಾಪ್ರಭುತ್ವ, ಸಮತಾವಾದ, ಮಾನವತಾವಾದ, ಶ್ರೇಷ್ಠ ರಾಜಕೀಯ ಪಂಡಿತರ, ಅರ್ಥಶಾಸ್ತ್ರಜ್ಞರ ವೈಶಿಷ್ಟಗಳ ಪುಣ್ಯ ಸಂಗಮದ ಪ್ರತೀಕವಾಗಿದ್ದರು. ಬಸವಣ್ಣನವರು ಎಂದೂ ಮಾಸದ ಸಾಮಾನ್ಯ ಜನರ ಮಧ್ಯೆ ಚಿಂತನೆಯ ಮಹಾನ್ಗಣಿಯಾಗಿ ಅಂದಿಗೂ, ಇಂದಿಗೂ ಇವರ ಶುಚಿಭೂತ ಯೋಗಕ್ಷೇಮ ಅರ್ಥಶಾಸ್ತ್ರ ಚಾಲ್ತಿಯಲ್ಲಿದೆ.
ಬಸವಣ್ಣ ಸಮಾಜ ಸುಧಾರಕನಾಗಿ, ಮಹಾಭಕ್ತನಾಗಿ, ಅರ್ಥಶಾಸ್ತ್ರಜ್ಞನಾಗಿ, ಕೆಲಸದ ಮಹತ್ವವನ್ನು ತೋರಿದ್ದರಿಂದ ಕನ್ನಡದ ಪ್ರಪ್ರಥಮ ಬಂಡಾಯ ಕವಿಯಾದರು. ಇಂದಿನ ದಮನಿತ ಸಾಹಿತ್ಯದ ಕೃಷಿಗೆ ಆಧಾರದ ನೆಲೆಯಾಯಿತು. ಮಹಿಳೆಯರನ್ನು ಮಾತೆಯರನ್ನಾಗಿಸಿ ಕಂಡು ಭಾರತದ ಪ್ರಪ್ರಥಮ ಮಹಿಳಾ ವಿಮೋಚನಾಗಾರರಾದರು. ದಮನಿತ ಜಾತಿ-ಕುಲಗಳ ವ್ಯತ್ಯಾಸವನ್ನು ಹೋಗಲಾಡಿಸಿದರು. ಇಂತಹ ವ್ಯಕ್ತಿಯನ್ನು ಯಾವುದೇ ಮತ-ಜಾತಿಗಳಿಗೆ ಸೀಮಿತಗೊಳಿಸಿ ನೋಡಬಾರದು. ಬಸವ ಪಂಥ ಅಂಧಕಾರ ತುಂಬಿದ ಜಗತ್ತಿಗೆ ಕರುಣೆಯ ಸಿಂಚನಗೈದ ಮಹಾನ್ ಮಾನವತಾವಾದಿಯಾಗಿದ್ದಾರೆ. ಅವರ ಕಾಯಕ ತತ್ವವವನ್ನು ಆಚರಣೆಗೆ ತರುವುದೇ ಇಂದಿನ ಜನಾಂಗವು ವಿಶ್ವದ ಈ ಮಹೋನ್ನತ ವ್ಯಕ್ತಿಗೆ ನೀಡುವ ಗೌರವದ ಕೊಡುಗೆಯಾಗಿದೆ.
ಬಸವಣ್ಣ ಅರ್ಥಶಾಸ್ತ್ರಜ್ಞರಾಗಿ ಕಾಯಕದ ಮಹಿಮೆಯನ್ನು ಸಾದರಪಡಿಸಿದರು. ಇಂದಿನ ದಲಿತ ಸಾಹಿತ್ಯದ ಸೃಷ್ಟಿಗೆ ಸ್ಪೂರ್ತಿಯ ಸೆಲೆಯಾದರು. ಮಹಿಳೆಯನ್ನು ನಿಜರೂಪದ ತಾಯಿಯನ್ನಾಗಿ ಕಂಡರು. ಮಹಿಳೆಯರ ಸಮಾನತೆಯ ರಕ್ಷಣೆಗೆ ನಿಂತರು. ದಲಿತರನ್ನು ಅನುಭವ ಮಂಟಪದಲ್ಲಿ ಅವರ ಬೌದ್ಧಿಕ ಸಾಮರ್ಥ್ಯಕ್ಕೆ ಬಸವಣ್ಣನವರೇ ಶರಣು ಹೊಡೆದರು. ದಲಿತರ ಬದುಕು ಮತ್ತು ಸಂಸ್ಕೃತಿಗೆ ನಿರ್ಮಲ ಭಾವನೆಯಿಂದ ಗೌರವಿಸಿದ ಮಹಾಸಾಧಕರೇ ಬಸವಣ್ಣನವರು.
ಹಾಲ-ನೇಮ, ಹಾಲ-ಕೆನೆಯ ನೇಮ
ಕೆನೆ ತಪ್ಪಿದ ಬಳಿಕ ಕಿಚ್ಚಡಿ ನೇಮ
ಬೆಣ್ಣೆಯ ನೇಮ, ಬೆಲ್ಲದ ನೇಮ
ಅಂಬಲಿಯ ನೇಮದವರನಾರನೂ ಕಾಣೆ
ಕೂಡಲ ಸಂಗನ ಶರಣರಲ್ಲಿ
ಅಂಬಲಿ ನೇಮದಾತ ಮಾದಾರ ಚನ್ನಯ್ಯ
ಬಸವಣ್ಣ ಮೇಲಿನ ವಚನಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಜಾತಿಗಳ ತಾರತಮ್ಯ ಭಾವದ ಅಂತಃಕರಣ ಬೆಸೆಯುವ ಆಲೋಚನೆಗೈದಿದ್ದಾರೆ. ತರ್ಕ, ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಯನ್ನು ಆಧಾರವಾಗಿಟ್ಟುಕೊಂಡು ಎಲ್ಲ ಕಾಲಕ್ಕೂ ಅನ್ವಯವಾಗುವಂತೆ ಪರಿಗ್ರಹಿಸಿದ್ದಾರೆ. ಜೊತೆಗೆ ಜಾಗತಿಕ ಸಂಸ್ಕೃತಿಗೆ ಘನತೆಯನ್ನು ಗೌರವವನ್ನು ದಯಪಾಲಿಸಿದ ಕಾರಣಿಕ ಮಹಾಪುರಷರಾಗಿ ಉಳಿಯದೆ, ಪರಿವರ್ತನೆಯ ಯುಗಪುರುಷರಾಗಿ ಬೆಳೆದಿದ್ದಾರೆ. ಸಾಮಾನ್ಯವಾಗಿ ಯುಗ ಪ್ರವರ್ತಕರು ಸಾಮಾಜಿಕ-ಧಾರ್ಮಿಕ-ಆರ್ಥಿಕ-ಸಾಹಿತ್ಯಿಕ ಹೀಗೆ ಜೀವನದ ಯಾವುದೇ ಒಂದು ಕ್ಷೇತ್ರಕ್ಕೆ ಹೊಸ ತಿರುವು ತಂದು ಕೊಟ್ಟಿದ್ದಾರೆ. ಅವರು ಎಲ್ಲಾ ಕ್ಷೇತ್ರಗಳಿಗೂ ಮಹಾಬೆಳಕು ನೀಡಿದ ಬುದ್ಧಪ್ರಜ್ಞೆಯ ಎತ್ತರದ ನಿಲುವುಗಳನ್ನು ಹೊಂದಿದ ಘನವ್ಯಕ್ತಿತ್ವದಂತಹ ಮಹಾಪುರುಷ ಬಸವಣ್ಣ ಭಾರತೀಯ ಸಮಾಜಕ್ಕೆ ಅರಿವಿನ ಮಹಾಮನೆಯಾಗಿ ಮಹಾಬೆಳಕಾಗಿದ್ದಾರೆ.
ಹಾವು ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆಯೆ ನುಡಿವರಯ್ಯಾ ಕೂಡಲ ಸಂಗಮದೇವಾ!
ಬಸವಣ್ಣನವರು ಆತನ ಅನುಭಾವದ ಸರಳ-ಸಂಕ್ಷಿಪ್ತ ವಚನಗಳನ್ನು ಬರೆದು-ತಿಳಿಸಿ ಜನಸಾಮಾನ್ಯನಂತೆ ಬೆರೆತು ಬದುಕಿದ ಅಪರೂಪದ ಸಿದ್ದಿ ಪುರುಷರಾಗಿದ್ದು, ದೇಶದ ಸಾಂಸ್ಕೃತಿಕ ಮತ್ತು ನಾಗರೀಕತೆಯ ಸಂಗತಿಗೆ ಇದು ಒಂದು ಉತ್ತಮ ಅವತರಣಿಕೆಯ (ಪ್ರಿಯಾಂಬಲ್) ಅಂಶವಾಗಿದೆ. ಬಸವನ ಚಿಂತನೆಗಿಂತ ಐದು ಸಾವಿರ ವರುಷಗಳ ಹಿಂದೆ ನಡೆದ ಸಿಂಧೂ ನದಿಯ ನಾಗರಿಕತೆಯಿಂದ ಈವೊತ್ತಿನವರೆಗೆ ಜರುಗಿದ ಸಾಮಾಜಿಕ ಸ್ಥಿತ್ಯಂತರಗಳ ವಿಷಯಗಳನ್ನು ಗಮನಿಸಿದರೆ ಭಾರತೀಯ ನೆಲದಲ್ಲಿ ಸಾಕಷ್ಟು ಸಾಮಾಜಿಕ ಬದಲಾವಣೆಗಳ ಇಣುಕು ನೋಟವನ್ನು ಕಾಣಬಹುದು.
ಲೇಖನ-ಪ್ರೊ.ಎಚ್.ಲಿಂಗಪ್ಪ…