i
ಪಿಡಿಒ 3.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೆಸ್ಟೋರೆಂಟ್ ಪರವಾನಗಿ ನವೀಕರಿಸಲು 5 ಲಕ್ಷಕ್ಕೆ ಬೇಡಿಕೆ ಇಟ್ಟು, 3.50 ಲಕ್ಷ ಲಂಚ ಪಡೆಯುವಾಗ ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಪಿಡಿಒ ಎಂ.ಜಿ.ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್ ಜನರಲ್ ಲೈಸನ್ಸ್ ಹೊಂದಿರುವ ನರಸಿಂಹಮೂರ್ತಿ ಎಂಬುವವರು ಪರವಾನಗಿ ನವೀಕರಣಕ್ಕೆ ಪಿಡಿಒ ಬಳಿ ಹೋಗಿದ್ದರು.
ಪರವಾನಗಿ ನವೀಕರಿಸಿಕೊಡಲು 5 ಲಕ್ಷ ಲಂಚದ ಹಣಕ್ಕೆ ಪಿಡಿಒ ಬೇಡಿಕೆ ಇಟ್ಟಿದ್ದರು. ಕೊನೆಗೂ 3.50 ಲಕ್ಷಕ್ಕೆ ಮಾತುಕತೆಯಾಗಿತ್ತು. ನರಸಿಂಹಮೂರ್ತಿ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರ ಪಿಡಿಒ ನಿರಂಜನ್ ಅವರು ದೊಡ್ಡಬಳ್ಳಾಪುರ ತಾಲೂಕು ಪಂಚಾಯ್ತಿ ಆವರಣದಲ್ಲಿರುವ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರ ಕೊಠಡಿಯಲ್ಲಿ 3.50 ಲಕ್ಷ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ದೂರುದಾರ ನರಸಿಂಹಮೂರ್ತಿ ಮಾತನಾಡಿ, ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ, ಬಾರ್ ವ್ಯವಹಾರ ಬಿಟ್ಟರೆ ನನಗೆ ಬೇರೆ ಉದ್ಯೋಗ ಗೊತ್ತಿಲ್ಲ, ಇದ್ದ ಜಮೀನು ಮಾರಾಟ ಮಾಡಿ ಬಾರ್ ಪರವಾನಗಿ ಪಡೆದಿದ್ದೇನೆ. ಅರಳು ಮಲ್ಲಿಗೆ ಪಂಚಾಯ್ತಿ ಪಿಡಿಒ ನನ್ನ ಕೆಲಸ ಮಾಡಲು ಕಳೆದ ಎರಡು ವರ್ಷಗಳಿಂದ ಸತಾಯಿಸುತ್ತಿದ್ದಾನೆ. ಕ್ಷೇತ್ರದ ಶಾಸಕರು, ತಾಲ್ಲೂಕು ಪಂಚಾಯಿತಿ ಅಧಿಕಾರಿ ಇಒ ಸೇರಿದಂತೆ ಯಾರೇ ಹೇಳಿದರು ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.
ಪಿಡಿಓ ನನ್ನ ಬಾರ್ ಪರವಾನಗಿಗೆ ಸಂಬಂದಿಸಿದಂತೆ ಈವರೆಗೆ ವಾಣಿಜ್ಯ ಪರವಾನಗಿ ನೀಡಲು ಮೂರು ಲಕ್ಷ, ರೆಸ್ಟೋರೆಂಟ್ ಪರವಾನಗಿಗೆ 2.50 ಲಕ್ಷ ತಗೊಂಡಿದ್ದಾನೆ. ಈಗ ನವೀಕರಣ ಮಾಡಿಕೊಡಲು ಐದು ಲಕ್ಷ ಕೇಳಿದ್ದ ಎಂದು ಆರೋಪಿಸಿದ ಅವರು, ಚೌಕಾಸಿ ಮಾಡಿದ್ದಕ್ಕೆ 3.50 ಲಕ್ಷ ಕೊಡಬೇಕು ಎಂದು ಕೇಳಿದ್ದರು. ಲೋಕಾಯುಕ್ತರ ಮೂಲಕ ಹಣ ತಂದು ಕೊಟ್ಟಿದ್ದೇನೆ, ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಪಿಡಿಒ ಅವರನ್ನು ಹಿಡಿದು ಬಂಧಿಸಿದ್ದಾರೆ ಎಂದರು.