i
ಗರ್ಭಿಣಿಯರಿಗೆ ಸಕಾಲಕ್ಕೆ ಪರೀಕ್ಷೆ ಮಾಡಿಸಿ ತಾಯಿ ಮತ್ತು ಶಿಶುಗಳ ಮರಣ ತಗ್ಗಿಸಿ-ಡಾ. ಬಿ.ವಿ. ಗಿರೀಶ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಲಕಾಲಕ್ಕೆ ಗರ್ಭಿಣಿಯರು ತಪಾಸಣೆ ಮಾಡಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದಲ್ಲಿ ತಾಯಿ ಮರಣ ತಪ್ಪಿಸಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗರ್ಭಿಣಿ ತಾಯಂದಿರುಗಳಿಗೆ ಮಾಹಿತಿ ಶಿಕ್ಷಣ ನೀಡಿ ಮಾತನಾಡಿದ ಅವರು, ಪ್ರತಿ ತಿಂಗಳು 9ನೇ ತಾರೀಕು ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದು ಎಲ್ಲಾ ಗರ್ಭಿಣಿ ತಾಯಂದಿರು ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು. 1 ಲಕ್ಷ ಜೀವಂತ ಜನನಕ್ಕೆ ರಾಜ್ಯದಲ್ಲಿ ತಾಯಿ ಮರಣ ದರ 70 ಇದೆ ಚಿತ್ರದುರ್ಗ ಜಿಲ್ಲೆಯಲ್ಲಿ ತಾಯಿ ಮರಣ ದರ 69 ಇದ್ದು ಯಾವುದೇ ತಾಯಿಯು ಗರ್ಭವತಿ ಎಂಬ ಕಾರಣದಿಂದ ಮರಣ ಹೊಂದಬಾರದು. ತಾಯಿ ಮರಣ ತಗ್ಗಿಸಲು ಗರ್ಭಿಣಿ ಎಂದಾಕ್ಷಣ ಆದಷ್ಟು ಬೇಗ ವೈದ್ಯರಲ್ಲಿ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಮತ್ತು ಮಕ್ಕಳ ತಜ್ಞ ಡಾ.ತಿಮ್ಮೇಗೌಡ ಮಾತನಾಡಿ ಸರ್ಕಾರದ ಯೋಜನೆಗಳು ಗ್ರಾಮಾಂತರ ಪ್ರದೇಶದ ಕಟ್ಟ ಕಡೆಯ ತಾಯಿಗೂ ತಲುಪಿಸುವ ನಿಟ್ಟಿನಲ್ಲಿ ಜನನಿ ಸುರಕ್ಷಾ ಯೋಜನೆ, ಜೆಎಸ್ಎಸ್ ಕೆ ಇವು ಸರ್ಕಾರದ ಉಪಯುಕ್ತ ಯೋಜನೆಗಳಾಗಿದ್ದು ಗರ್ಭಿಣಿ ತಾಯಂದಿರುಗಳು ಪ್ರತಿ ತಿಂಗಳು ಒಂಬತ್ತನೇ ತಾರೀಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಟ್ಟು ಇದರ ಪ್ರಯೋಜನ ಪಡೆಯಬೇಕೆಂದರು. ಮಧುಮೇಹ, ರಕ್ತದೊತ್ತಡ, ಅಸ್ತಮಾ, ಹಿಂದಿನ ಹೆರಿಗೆ ಸಿಜರಿನ್ ಆದವರು, ಅವಳಿ ಮಕ್ಕಳ ಹೊಂದಿದವರು, ಇಂಥವರಿಗೆ ಪ್ರತಿ ತಿಂಗಳು 24ನೇ ತಾರೀಖಿನಂದು ವಿಶೇಷ ಗರ್ಭಿಣಿಯರ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು, ರಕ್ತ ಹೀನತೆ ತಡೆಯಲು ಕಬ್ಬಿನಾಂಶಗಳ ಮಾತ್ರೆ ಇತರೆ ಸೇವಾ ಸೌಲಭ್ಯಗಳನ್ನು ಪಡೆದು ತಾಯಂದಿರು ಆರೋಗ್ಯವಂತ ಮಗುವನ್ನು ಹೆತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಪವಿತ್ರ ಮಾತನಾಡಿ ಕೇಂದ್ರ ಸ್ಥಾನದಲ್ಲಿ ಇರುವ ನಾವು ನಿಮ್ಮೊಂದಿಗಿದ್ದೇವೆ, ತಮ್ಮ ಗ್ರಾಮಗಳ ಸಮೀಪವೇ ಹೆರಿಗೆ ಸೇವಾ ಸೌಲಭ್ಯ ಇರುವುದು ತಮಗೆಲ್ಲ ಸಂತೋಷದ ವಿಷಯ ಗ್ರಾಮಾಂತರ ಪ್ರದೇಶದಲ್ಲಿ ಹೆರಿಗೆ ಮಾಡಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರೆ ತಗ್ಗಿಸಿ ತುರ್ತು ಸಂದರ್ಭದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗೆ ಕಳುಹಿಸಲು ಆಂಬುಲೆನ್ಸ್ ವ್ಯವಸ್ಥೆ ಇರುವುದರಿಂದ ಯಾರೂ ಭಯಭೀತರಾಗದೆ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಕೂಡ ಹೆರಿಗೆ ಸೌಲಭ್ಯ ಇರುವ ಪ್ರಯುಕ್ತ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ ತೊಡಕಿನ ಗರ್ಭಿಣಿಯರು ಆಸ್ಪತ್ರೆಯಲ್ಲಿ ಮೂರು ಬಾರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪರೀಕ್ಷೆ ಒಳಪಟ್ಟರೆ ಒಟ್ಟು 300 ರೂ.ಗಳನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಸೇವಾ ಸಿಂಧು ಪೋರ್ಟಲ್ ನಿಂದ ಅರ್ಜಿ ಸಲ್ಲಿಸಿದವರಿಗೆ ಜಮಾ ಮಾಡಲಾಗುವುದು. 18 ವರ್ಷದ ಒಳಗಡೆ ಇಳಿ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅಪಾಯ ತಂದುಕೊಳ್ಳಬೇಡಿ ಅಂತರದ ಹೆರಿಗೆ ಕುಟುಂಬ ಯೋಜನೆ, ಚಿಕ್ಕ ಕುಟುಂಬದ ಆದರ್ಶ ಪಾಲಿಸಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾಹಿತಿ ನೀಡಿ ಗರ್ಭಿಣಿ ತಾಯಂದಿರು ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ ದಾಖಲೆಗಳನ್ನು ಒಂದೆಡೆ ಜೋಪಾನವಾಗಿ ಇಟ್ಟುಕೊಂಡು ಪ್ರತಿದಿನ ಮಧ್ಯಾಹ್ನ ಎರಡು ತಾಸು ಎಡ ಮೊಗ್ಗುಲಲ್ಲಿ ಮಲಗುವುದರ ಮುಖಾಂತರ ಗರ್ಭದಲ್ಲಿ ಬೆಳೆಯುವ ಮಗುವಿಗೂ ಕೂಡ ವಿರಾಮ ಸಿಗುವಂತೆ ಅವಕಾಶ ಮಾಡಿಕೊಡಬೇಕು. ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ ಹಸಿ ತರಕಾರಿಗಳಾದ ಕ್ಯಾರೆಟ್, ಮೂಲಂಗಿ, ಸೌತೆಕಾಯಿ, ಈರುಳ್ಳಿ, ಮೆಂತೆ ಸೊಪ್ಪು ಹಾಗೂ ಮೊಳಕೆ ಕಾಳುಗಳು ಮತ್ತು ದಾವಣಗೆರೆ ಮಿಕ್ಸ್ ಶೇಂಗಾ, ಬೆಲ್ಲ, ಹುರಿ ಗಡಲೆ, ವಡ್ರಾಗಿ ಹಿಟ್ಟು, ಸಮ ಪ್ರಮಾಣದಲ್ಲಿ ಬೆರೆಸಿ ಗಂಜಿ ಮಾಡಿಕೊಂಡು ಇಲ್ಲವೇ ಉಂಡೆ ಮಾಡಿಕೊಂಡು ಪ್ರತಿದಿನ ಬಳಕೆ ಮಾಡಿದರೆ ಕೆಂಪು ರಕ್ತ ಕಣಗಳ ವೃದ್ಧಿಯಾಗುವುದಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೆರಿಗೆ ಸಮಯದಲ್ಲಿ ಯಾವುದೇ ಅಡ್ಡಿ ಆತಂಕ ಬರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ತುಳಸಿ ರಂಗನಾಥ್, ಫಾರ್ಮಸಿ ಅಧಿಕಾರಿ ಮೋಹನ್ ಕುಮಾರ್, ಶುಶ್ರೂಷತಾಧಿಕಾರಿ ತಾರಾ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಪರ್ವೀನ್, ಸುಶೀಲ, ಆಶಾ ಕಾರ್ಯಕರ್ತೆಯರು ಮೂವತ್ತಕ್ಕೂ ಹೆಚ್ಚು ಗರ್ಭಿಣಿ ತಾಯಂದಿರು ಭಾಗವಹಿಸಿದ್ದರು.