![](https://www.chandravallinews.com/wp-content/uploads/2024/05/WhatsApp-Image-2024-05-14-at-8.15.30-PM.jpeg)
i
ಎಂಎಲ್ ಸಿ ಚುನಾವಣೆಯಲ್ಲಿ ಶಿಕ್ಷಕರಲ್ಲದವರನ್ನು ತಿರಸ್ಕರಿಸಿ, ಶಿಕ್ಷಕರನ್ನೇ ಆಯ್ಕೆ ಮಾಡಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರಲ್ಲದವರನ್ನು ಆಯ್ಕೆ ಮಾಡಬಾರದು. ಅಂತಹವರನ್ನು ತಿರಸ್ಕರಿಸಬೇಕು. ಶಿಕ್ಷಕರನ್ನು ಮಾತ್ರ ಆಯ್ಕೆ ಮಾಡಬೇಕೆಂದು ಆ ಕ್ಷೇತ್ರದಿಂದ ಸ್ಪರ್ಧಿಸಿರುವ ತೀರ್ಥಹಳ್ಳಿಯ ಅರುಣ್ ಹೊಸಕೊಪ್ಪ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಶಿಕ್ಷಕರಲ್ಲ. ಅಂತಹವರಿಗೆ ಶಿಕ್ಷಕರ ಸಮಸ್ಯೆಯ ಅರಿವಿರುವುದಿಲ್ಲ. ಶಿಕ್ಷಕರಾಗಿ ಅನುಭವವಿರುವವರಿಗೆ ನೈಜ ಸಮಸ್ಯೆಯ ಅರಿವು ಮತ್ತು ಅದನ್ನು ಹೇಗೆ ಪರಿಹರಿಸಬೇಕೆನ್ನುವುದು ತಿಳಿದಿರುತ್ತದೆ ಎಂದ ಅವರು, ತಾನು ೨೦೧೨ ಮತ್ತು ೨೦೧೮ರ ಎರಡೂ ಚುನಾವಣೆಯಲ್ಲಿ ಕಣಕ್ಕಿಳಿದಿದ್ದೆ. ಆದರೆ ಹಿನ್ನಡೆಯಾಗಿದೆ. ಆದರೂ ಶಿಕ್ಷಕರ ಸಂಪರ್ಕವನ್ನು ಕಡಿದುಕೊಂಡಿಲ್ಲ. ಒಂದು ವರ್ಷದಿಂದ ಈ ಚುನಾವಣೆಯ ತಯಾರಿ ನಡೆಸಿದ್ದೇನೆ ಎಂದರು.
ಅಧ್ಯಾಪಕನಾಗಿ ಹಲವು ವರ್ಷ ಕೆಲಸ ಮಾಡಿರುವ ತಾನು ಶಿಕ್ಷಕರ ಸಮಸ್ಯೆಯನ್ನು ಸರಿಪಡಿಸಲು ಬದ್ಧನಾಗಿದ್ದೇನೆ. ಅದಕ್ಕೆ ಮತದಾರರು ಒಂದು ಬಾರಿ ಅವಕಾಶ ಕೊಡಬೇಕು. ನಾಳೆ ಮೇ ೧೬ರಂದು ತಾನು ನಾಮಪತ್ರ ಸಲ್ಲಿಸಲಿದ್ದೇನೆ. ಈ ಬಾರಿ ಸ್ಪರ್ಧೆ ತನ್ನ ಮತ್ತು ಹಾಲಿ ಸದಸ್ಯರಾಗಿರುವ ಬೋಜೇಗೌಡರ ಮಧ್ಯೆ ಮಾತ್ರ ಇದೆ. ಶಿಕ್ಷಕರು ಯಾವ ಜಾತಿ, ಪಕ್ಷವನ್ನು ನೋಡುವುದಿಲ್ಲ. ಉತ್ತಮ ಕೆಲಸಗಾರರನ್ನು ಮತ್ತು ಸಮಸ್ಯೆಗೆ ಸ್ಪಂದಿಸುವವರನ್ನು ಮಾತ್ರ ಆಯ್ಕೆ ಮಾಡುತ್ತರೆಂಬ ವಿಶ್ವ್ವಾಸವಿದೆ ಎಂದರು.
ಶಿಕ್ಷಕ ಮತದಾರರು ಶಿಕ್ಷಕರನ್ನೇ ಗೆಲ್ಲಿಸುವ ಮನಸ್ಸು ಮಾಡಬೇಕು. ಕಾಂಗ್ರೆಸ್ನಿಂದಲೂ ಶಿಕ್ಷಕರಾದವರೇ ಕಣಕ್ಕಿಳಿದಿದ್ದಾರೆ. ಇನ್ನೊಬ್ಬ ಪಕ್ಷೇತರರಿದ್ದ್ದಾರೆ. ತನ್ನನ್ನು ಆಯ್ಕೆ ಮಾಡದಿದ್ದರೂ ಪರವಾಯಿಲ್ಲ, ಶಿಕ್ಷಕರಲ್ಲದವರನ್ನು ತಿರಸ್ಕರಿಸಿ ಎಂದು ಕರೆ ನೀಡಿದ ಅವರು, ರಾಷ್ಟ್ರೀಯ ಪಕ್ಷಗಳ ಉಮೇದುವಾರರು ಎಂದು ಯಾರನ್ನೂ ಮತದಾರ ಆಯ್ಕೆ ಮಾಡುವುದಿಲ್ಲ. ಇಲ್ಲಿ ವ್ಯಕ್ತಿ, ವ್ಯಕ್ತಿತ್ವ ಮುಖ್ಯವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.