![](https://www.chandravallinews.com/wp-content/uploads/2024/05/WhatsApp-Image-2024-05-22-at-8.38.19-PM.jpeg)
i
ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಆಗ್ರಹ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹೊಳಲ್ಕೆರೆ ರಸ್ತೆ ಕನಕ ವೃತ್ತದ ಹತ್ತಿರವಿರುವ ಹಳ್ಳದ ಏರಿಯಾದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಯಲ್ಲಿ ತುಂಬಿಕೊಂಡಿದ್ದ ಮಣ್ಣನ್ನು ಜೆ.ಸಿ.ಬಿ. ಮೂಲಕ ತೆಗೆಸಿ ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಲಾಯಿತು.ಅರಣ್ಯ ಇಲಾಖೆಯ ನಿವೃತ್ತ ನೌಕರರೊಬ್ಬರು ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ಬಂದಾಗ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುತ್ತದೆ. ಸಾಕಷ್ಟು ಬಾರಿ ಹಳ್ಳದ ಏರಿಯಾ ನಿವಾಸಿಗಳು ರಾಜ ಕಾಲುವೆ ಒತ್ತುವರಿ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೂ ಮನವಿ ನೀಡಿದ್ದಾರೆ. ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ೨೦೨೨-೨೩ ನೇ ಸಾಲಿನಲ್ಲಿಯೇ ಹಳ್ಳದ ಏರಿಯಾದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎನ್ನುವುದು ಅಲ್ಲಿನ ನಿವಾಸಿಗಳ ಅಳಲು. ಪೌರಾಯುಕ್ತರ ಭೇಟಿ: ನಗರಸಭೆ ಪೌರಾಯುಕ್ತೆ ರೇಣುಕಾ ಅವರು ಹಳ್ಳದ ಏರಿಯಾದಲ್ಲಿ ಮುಂದೆ ನಿಂತು ಜೆಸಿಬಿ ಮೂಲಕ ರಾಜ ಕಾಲುವೆಯಲ್ಲಿನ ಮಣ್ಣನ್ನು ತೆಗೆಸಿದರು. ಚಂದ್ರವಳ್ಳಿ ಕೆರೆ ತುಂಬಿ ಕೋಡಿ ಬಿದ್ದರೆ ನೀರು ನುಗ್ಗಿ ಅನಾಹುತವಾಗುವುದನ್ನು ತಪ್ಪಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ ಕಾಲುವೆ ಒತ್ತುವರಿಯಾಗಿರುವುದರ ಕುರಿತು ಸರ್ವೆ ನಡೆಸುವಂತೆ ಸರ್ವೆ ಇಲಾಖೆಗೆ ಕೇಳಿಕೊಂಡಿದ್ದೇವೆ. ಇದುವರೆವಿಗೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ರಾಜಕಾಲುವೆಯಲ್ಲಿನ ಮಣ್ಣು ತೆಗೆಸುತ್ತಿದ್ದೇವೆ. ಮುಂದೆ ಸರ್ವೆ ಆದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಪರಿಸರ ಇಂಜಿನಿಯರ್ ಜಾಫರ್, ಬಾಳೆಕಾಯಿ ಶ್ರೀನಿವಾಸ್, ಸುಭಾನುಲ್ಲಾ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.