![](https://www.chandravallinews.com/wp-content/uploads/2024/05/WhatsApp-Image-2024-05-22-at-8.38.20-PM-1024x536.jpeg)
i
ಶಿಕ್ಷಕರು, ಸರ್ಕಾರಿ ನೌಕರರ ವಿರೋಧಿ ಕಾಂಗ್ರೆಸ್ ಸೋಲಿಸಿ-ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿಕ್ಷಕರು, ಸರ್ಕಾರಿ ನೌಕರರ ವಿರೋಧಿಯಾಗಿರುವ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗೆಲ್ಲಬಾರದು, ಒಂದು ವೇಳೆ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯೆ ಹೆಚ್ಚಾದರೆ ಶಿಕ್ಷಕರು, ಸರ್ಕಾರಿ ನೌಕರರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಿದ್ದು ಪ್ರತಿಯೊಬ್ಬ ಶಿಕ್ಷಕರು, ಪದವೀಧರರು ಎಚ್ಚರಿಕೆಯಿಂದ ಮತದಾನ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೋಲಿಸಬೇಕೆಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ಚಿತ್ರದುರ್ಗ ನಗರದ ಹೊರ ವಲಯದ ಪಿಳ್ಳೇಕೇರನಹಳ್ಳಿ ಸೇರಿದಂತೆ ನಗರದ ವಿವಿಧ ಶಾಲಾ-ಕಾಲೇಜ್ ಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನಿಡುವಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಶಿಕ್ಷಕರು, ಸರ್ಕಾರಿ ನೌಕರರು ಸೇರಿದಂತೆ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಿದೆ ಇದನ್ನ ತಡೆಯಬೇಕಾದರೆ ಕಾಂಗ್ರೆಸ್ ವಿರುದ್ಧ ಮತದಾರರು ವೋಟ್ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನಸಭೆಯಲ್ಲಿ ಅಂಗೀಕಾರ ಮಾಡಿದ ಮಸೂದೆಯನ್ನು ವಿಧಾನ ಪರಿಷತ್ನಲ್ಲಿ ಅಂಗೀಕಾರ ಮಾಡಲು ಕಳುಹಿಸಲಾಗುತ್ತದೆ ಕಾಂಗ್ರೆಸ್ ಸರ್ಕಾರ ತಪ್ಪು ಮಸೂದೆಗಳನ್ನು ಜಾರಿ ತರುವಾಗ ಪರಿಷತ್ನಲ್ಲಿ ಪಕ್ಷದ ಸಂಖ್ಯಾ ಬಲ ಹೆಚ್ಚಾಗಿದ್ದರೆ ಅಂತಹ ಮಸೂದೆಗಳನ್ನು ತಿರಸ್ಕಾರ ಮಾಡಬಹುದು ಆದರೆ ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ ಹೆಚ್ಚಾದರೆ ಅವರು ಯಾವುದೇ ರೀತಿಯ ಜನ ವಿರೋಧಿ ಮಸೂದೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ನಿಮ್ಮ ಹಿತವನ್ನು ಕಾಯುವ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವುದರ ಮೂಲಕ ಅವರು ಮೊದಲ ಸುತ್ತಿನಲ್ಲಿಯೇ ಗೆಲುವು ಸಾಧಿಸುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿಯುವ ಸಲುವಾಗಿ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದೆ. ಈಗಾಗಲೇ ಬಿಟ್ಟಿ ಭಾಗ್ಯಗಳನ್ನು ನೀಡಿದ ನೆರೆಯ ದೇಶಗಳಾದ ಪಾಕಿಸ್ತಾನ, ಆಫಾನಿಸ್ತಾನ ಶ್ರೀಲಂಕದ ಸ್ಥಿತಿಯನ್ನು ಎಲ್ಲರು ಕಂಡಿದ್ದಾರೆ. ಬಿಟ್ಟಿ ಭಾಗ್ಯಗಳಿಗೆ ಮರುಳಾದರೆ ಭವಿಷ್ಯದಲ್ಲಿ ಸಂಕಷ್ಟಗಳು ಎದುರಾಗಲಿವೆ ಎಂದು ಎಚ್ಚರಿಸಿದ ಅವರು, ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಬೇಕಾದರೆ ನಿಮ್ಮ ಸಮಸ್ಯೆಗಳು ನಿವಾರಣೆ ಆಗಬೇಕು. ಹಾಗಾಗಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಬೆಂಬಲಿಸಿ ಗೆಲ್ಲಿಸಿದರೆ ಪರಿಷತ್ನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಲಿದ್ದಾರೆ. ಈಗಾಗಲೇ ಮೂರು ಬಾರಿ ಪರಿಷತ್ ಸದಸ್ಯರಾಗಿರುವ ನಾರಾಯಣಸ್ವಾಮಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಹಲವಾರು ಶಿಕ್ಷಕರ ಪರವಾದ ಕೆಲಸ ಮಾಡಿದ್ದಾರೆ. ಇನ್ನೂ ಮುಂದೆಯೂ ಮಾಡಬೇಕಾದರೆ ಅವರಿಗೆ ಮತ ಹಾಕುವಂತೆ ತಿಪ್ಪಾರೆಡ್ಡಿ ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಪೂರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕೋವಿಡ್ ಸಮಯದಲ್ಲಿ ಶಿಕ್ಷಕರ ಪರವಾಗಿ ಸರ್ಕಾರ ಹಲವಾರು ಸಹಾಯ ಮಾಡಲಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುವವರಿಗೆ ಬಿಜೆಪಿ ಸರ್ಕಾರ ತಲಾ ೫೦೦೦ ರೂ.ಗಳನ್ನು ನೀಡುವುದರ ಮೂಲಕ ಸಹಾಯ ಮಾಡಲಾಯಿತು. ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಗುರುತಿಸಿ ಅವರಿಗೆ ಸಹಾಯ ಮಾಡಲಾಯಿತು. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ೨೦೧೪ರಲ್ಲಿ ಶಿಕ್ಷಣದ ಬಗ್ಗೆ ತನ್ನ ಪ್ರಣಾಳಿಕೆಯಂತೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿತ್ತು. ಇದನ್ನು ಹಲವಾರು ರಾಜ್ಯಗಳು ಅನುಷ್ಠಾನ ಮಾಡಿದರೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಇದನ್ನು ತಿರಸ್ಕಾರ ಮಾಡಿ ತನ್ನದೆ ಆದ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಹೊರಟಿದೆ. ಇದರಿಂದ ಕಾಂಗ್ರೆಸ್ ಮಕ್ಕಳ ಭವಿಷ್ಯದ ಬಗ್ಗೆ ಚಲ್ಲಾಟವಾಡುತ್ತಿದೆ ಎಂದು ದೂರಿದರು.
೨೦೦೧-೦೨ರಲ್ಲಿ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ಧಾಗ ಅನುದಾನ ಶಾಲೆಗಳ ಅನುದಾನವನ್ನು ಹಂತ ಹಂತವಾಗಿ ತೆಗೆಯುವ ಬಗ್ಗೆ ಆಲೋಚನೆ ನಡೆದಿತ್ತು ಇದರ ಬಗ್ಗೆ ಹಲವಾರು ಹೋರಾಟಗಳಾದ ಹಿನ್ನಲೆಯಲ್ಲಿ ಇದನ್ನು ಕೈಬಿಡಲಾಯಿತಾದರೂ ಅನುದಾನ ಶಾಲೆಗಳಲ್ಲಿ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಿಲ್ಲ, ಅಲ್ಲದೆ ಹೊಸದಾಗಿ ಅನುದಾನ ಶಾಲೆಗಳನ್ನು ಪಟ್ಟಿಗೆ ಸೇರಿಸಲಿಲ್ಲ, ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಂತ ಹಂತವಾಗಿ ಅನುದಾನ ರಹಿತ ಶಾಲೆಗಳಿಗೆ ಮರು ಜೀವ ನೀಡಲಾಯಿತು. ಇದರಿಂದಾಗಿ ಮುಚ್ಚುವ ಹಂತಕ್ಕೆ ತಲುಪಿದ್ದ ನೂರಾರು ಶಾಲಾ ಕಾಲೇಜ್ ಗಳನ್ನು ಯಡೆಯೂರಪ್ಪರವರು ಅನುದಾನ ನೀಡುವುದರ ಮೂಲಕ ಉಳಿಸುವ ಕಾರ್ಯನ್ನು ಮಾಡಿದರು. ಇದರಿಂದಾಗಿ ಸಾವಿರಾರು ಶಿಕ್ಷಕರು, ಸಿಬ್ಬಂದಿಗಳಿಗೆ ಜೀವನ ಕಟ್ಟಿಕೊಳ್ಳಲು ಅನುಕೂಲವಾಯಿತು ಎಂದರು.
ವೈ.ಎ.ನಾರಾಯಣಸ್ವಾಮಿ ಗೆಲ್ಲಿಸಿದರೆ ಪರಿಷತ್ನಲ್ಲಿ ಶಿಕ್ಷಕರ ಪರವಾಗಿ ಮಾತನಾಡುವುದರ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಯಲ್ಲಿ ಅಗತ್ಯ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಮಾಡಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಬಿಜೆಪಿ ವಕ್ತಾರರಾದ ನಾಗಾರಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಕಲ್ಲೇಶಯ್ಯ, ಜಯಣ್ಣ, ನವೀನ ಚಾಲುಕ್ಯ, ಪರಶುರಾಮ್, ತಿಪ್ಪೇಸ್ವಾಮಿ, ವೃಷಬೇಂದ್ರ ಸ್ವಾಮಿ, ನೀಲಕಂಠಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರೆಡ್ಡಿ, ಕಾಂಚನ, ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವಿರೇಶ್, ಸಿಎನ್.ಸಿ ಕಾಲೇಜಿನ ಗೋಪಾಲಪ್ಪ, ಪ್ರಾಂಶುಪಾಲ ನಾಗರಾಜ್, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಪೃಥ್ವಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಪುರ್ ಸೇರಿದಂತೆ ಇತರರು ಸಂತ ಜೋಸೆಫ್ ಸ್ಕೂಲ್, ರೋಟರಿ ವಿದ್ಯಾಲಯ, ವಾಸವಿ ವಿದ್ಯಾ ಸಂಸ್ಥೆ, ಡಯಟ್ ಕಾಲೇಜು, ಶಿಕ್ಷಕರ ಸರ್ಕಾರಿ ಶಿಕ್ಷಣ ವಿದ್ಯಾಲಯಗಳಿಗೆ ಭೇಟಿ ನೀಡಿ ವೈ.ಎ.ನಾರಾಯಣಸ್ವಾಮಿ ಪರ ಬಿರುಸಿನ ಮತಯಾಚನೆ ಮಾಡಿದರು.