i
ಬರ ಪರಿಹಾರ, ಬೆಳೆ ವಿಮೆ ತಾರತಮ್ಯ ಖಂಡಿಸಿ ರೈತರ ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬರ ಪರಿಹಾರ ಮತ್ತು ಬೆಳೆ ವಿಮೆ ತಾರತಮ್ಯ ಸರಿಪಡಿಸಿ ಅನ್ಯಾಯಕ್ಕೆ ಒಳಗಾಗಿರುವ ಎಲ್ಲ ರೈತರ ಖಾತೆಗೆ ಹಣ ಜಮೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಚಿತ್ರದುರ್ಗ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮೀಕಾಂತ್ ಲಿಂಗಾವರಹಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಡಳಿತ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಬರ ಪರಿಹಾರದ ಸಹಾಯವಾಣಿ ಕೇಂದ್ರ ಸ್ಥಾಪನೆ ಮಾಡಿದ್ದು, ಸಹಾಯವಾಣಿ ತಾಲ್ಲೂಕಿನ ಅಧಿಕಾರಿಗಳನ್ನು ಕೇಳಿದರೆ ನಿಮ್ಮ ದಾಖಲೆಗಳನ್ನು ಕೊಡಿ. ಚೆಕ್ ಮಾಡಿ ಹೇಳುತ್ತೇವೆಂದು ಎಫ್ಐಡಿ ಕಾರ್ಡ್ ಚೆಕ್ ಮಾಡಿ ನಿಮ್ಮ ಪಹಣಿಯಲ್ಲಿ ಕೊಳವೆ ಮೂಲದ ನೀರಾವರಿ ಎಂದಿದೆ ಹೀಗಾಗಿ ಪರಿಹಾರ ಹಣ ಬರುವುದಿಲ್ಲ, ಖುಷ್ಕಿ ಜಮೀನಿಗೆ ಮಾತ್ರ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ. ಖುಷ್ಕಿ ಜಮೀನು ಇರುವ ಎಫ್ಐಡಿ ಕಾರ್ಡ್ ಕೊಟ್ಟರೆ ನೀರಾವರಿ ಜಮೀನನೆಂದು ನಮೂದಾಗಿದೆಂದು ಹೇಳಿ ಕಳುಹಿಸಿರುತ್ತಾರೆ. ವಸ್ತುಸ್ಥಿತಿ ಎಂದರೆ ಬಹುತೇಕ ರೈತರ ಜಮೀನಿನಲ್ಲಿ ಬೋರ್ವೆಲ್ ಇಲ್ಲ, ಕರೆಂಟ್ ಕಂಬಗಳು ಇಲ್ಲ, ಕರೆಂಟ್ ಇಲ್ಲ, ನೀವೆ ಬಂದು ನೋಡಿ ಸ್ವಾಮಿ ಎಂದು ಹೇಳಿದರೆ ಅಧಿಕಾರಿಗಳು ಸರ್ಕಾರಕ್ಕೆ ಹೋಗಿ ಕೇಳಿ ನಾವು ಏನು ಮಾಡಲು ಬರುವುದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿರುವುದು ಯಾವ ನ್ಯಾಯ ಎಂದ ಆರೋಪಿಸಿದರು. ಸರ್ಕಾರ ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಬರ ಪರಿಹಾರ ಹಣವನ್ನು ತಾರತಮ್ಯ ಮಾಡಿ ಒಂದೊಂದು ಹಳ್ಳಿಗೆ ಒಂದೊಂದು ರೀತಿಯಲ್ಲಿ ಪರಿಹಾರ ನೀಡಿಕೆಯಲ್ಲಿ ರೈತರನ್ನು ವಿಮಾ ಕಂಪನಿಗಳು ವಂಚಿಸಿವೆ. ೧೦-೧೫ ರೈತರಿಗೆ ಪರಿಹಾರ ನೀಡಿದರೆ, ಇತರರಿಗೆ , 3, 4, 5 ಸಾವಿರದಂತೆ ಪರಿಹಾರ ನೀಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತನವಾಗಿದೆ. ಬೆಳೆ ವಿಮೆ ಕಟ್ಟಿದಂತಹ ಕೆಲ ರೈತರಿಗೆ ಪಾರ್ಸಂಟೆಜ್ ನಿಗದಿ ಮಾಡಿ ವಿಮೆ ನೀಡಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಸರ್ಕಾರದ ಮಾರ್ಗಸೂಚಿಯಂತೆ ಕೂಡಲೇ ಅನ್ಯಾಯಕ್ಕೆ ಒಳಗಾಗಿರುವ ಎಲ್ಲ ರೈತರಿಗೂ ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗೋಮಾಳ, ಅರಣ್ಯ ಭೂಮಿ, ಬಗರ್ ಹುಕುಂ, ಹುಲ್ಲು ಬನ್ನಿ ಖರಾಬ್, ಸೇಂದಿ ವನ ಸೇರಿದಂತೆ ಇತರೆ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡಿರುವಂತಹ ರೈತರಿಗೂ ಹಾಗೂ ಪೌತಿ ಖಾತೆ ಹೊಂದಿರುವಂತಹ ರೈತ ಕುಟುಂಬದವರಿಗೂ, ಎಲ್ಲ ವರ್ಗದ (ಒಣ ಬೇಸಾಯ ಮತ್ತು ನೀರಾವರಿ ಮಾಡಿರುವ) ರೈತರಿಗೂ ಬರ ಬಂದಿರುವ ಕಾರಣ ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ತೊಗರಿ, ರಾಗಿ, ಸಜ್ಜೆ, ಹತ್ತಿ ಹೂವಿನ ಸಸಿಗಳು ಸೂರ್ಯಕಾಂತಿ ಮತ್ತು ತೋಟಗಾರಿಕೆ ಬೆಳೆಗಳು ಬೆಳೆಯುವಂತಹ ಎಲ್ಲಾ ರೈತರಿಗೂ ಪ್ರತಿ ಹೆಕ್ಟೇರ್ಗೆ ೩೫,೦೦೦ ಗಳನ್ನು ಶೀಘ್ರವಾಗಿ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ.ವಾಸುದೇವಾ ಮೇಟಿ ಬಣದ ರಾಜ್ಯಾಧ್ಯಕ್ಷ ಡಾ.ವಾಸುದೇವ ಮೇಟಿ, ಕಾರ್ಯಾಧ್ಯಕ್ಷ ಓಂಕಾರಪ್ಪ, ಚಿತ್ರದುರ್ಗ ತಾ.ಅಧ್ಯಕ್ಷ ಶಿವಮೂರ್ತಿ, ಹೊಳಲ್ಕೆರೆ ತಾ.ಅಧ್ಯಕ್ಷ ನಾಗರಾಜ್, ಶ್ರೀಧರ್ರೆಡ್ಡಿ, ಸಿದ್ದೇಶ್ ಯಾದವ್, ಸತ್ಯಪ್ಪ, ಮೋಹನ್, ಕುಮಾರ್ ಸೇರಿದಂತೆ ಇತರೆ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.