![](https://www.chandravallinews.com/wp-content/uploads/2024/05/GNM-2-1.jpeg)
i
ಗೌತಮ ಬುದ್ಧಗೆ ನಮನ-ಜಿ.ಎನ್.ಮಲ್ಲಿಕಾರ್ಜುನಪ್ಪ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
*ಗೌತಮ ಬುದ್ಧಗೆ ನಮನ*
ಹುಣ್ಣಿಮೆ ಎಂದರೆ ಪೂರ್ಣ ಚಂದಿರ
ರವಿ ಮರೆಯ ಧರೆಯ ಮೇಲೆ
ತಿಂಗಳ ಬೆಳಕಿನ ತುಂಬು ಹಂದರ
ಮಧುಚಂದ್ರಕೆ ತೆರೆದ ಬಯಲ ಮಂದಿರ.
ಚಕೋರ ಚಕೋರಿಯರ
ಭಾವ ಮಂಚದ ತೂಗುಯ್ಯಾಲೆಯೊಳು
ತೊಟ್ಟಿಕ್ಕಿದ ಜೇನು ಮಳೆ
ಅರಸಿದ ಚಿಣ್ಣರ ಹೂವು ಬೆಳೆ.
ಅರಸಿ ಅಂಗನೆಯ ಬಸಿರಿಳಿದು
ಅವನಿಯಪ್ಪುಗೆಯಲಿ ಕಣ್ತೆರೆದ
ಕರುಳ ಕುಡಿಯ ಕಂಗಳಲಿ
ತೇಲುವ ಚಂದ್ರನ ಪೂರ್ಣ ಕಳೆ.
ಕತ್ತಿಮೊನೆಯೊಳು ಕಟ್ಟಿದ ಅರಸೊತ್ತಿನ
ಸುಪ್ಪತ್ತಿಗೆಯ ಸುಖಕ್ಕಿಂತ
ದುಃಖತಪ್ತರ ಕಣ್ಣ ನೀರೊರೆಸುವ
ಪರಮ ಪರಿಯ ಜ್ಞಾನೋದಯ.
ಅತುಳಾಸೆಗಳ ಕಗ್ಗತ್ತಲಲ್ಲಿ
ಆಳರಸರರ್ಭಟಗಳ ಗುಡುಗು ಸಿಡಿಲ್ಗಳ
ಮಿಂಚು ಬೆಳಕಿನಲಿ
ಮೈತ್ರಿ ಕಾರುಣ್ಯಗಳ ನವಿಲ ನಡೆ.
ಮೇದಿನಿಯ ಮೇಲಣ ಫಲಭೊಗಗಳಲ್ಲಿ
ಹಂಚಿಕೆ ನ್ಯಾಯವಿಲ್ಲದಲ್ಲಿ
ಬುದ್ಧನಿಲ್ಲ ಬಸವನಿಲ್ಲ ಪ್ರಬುದ್ಧ ಭೀಮನಿಲ್ಲ
ಇರುವುದೊಂದೇ, ಬಡಿದು ತಿಂಬುವ ದಾಳ.
ಮಾತು ಮಾತಿಗೆ ಉದುರಿ ಬಿದ್ದ
ಸತ್ಯ ಶಾಂತಿ ತ್ಯಾಗ ಮೂರ್ತಿ ಮಂತ್ರ
ಸ್ವಾರ್ಥ ಸಾಧನೆಗೆ ಹೆಣೆದು ಕುತಂತ್ರ
ತಂದುಕೊಂಡುದೆಲ್ಲವು ತಿರುಮಂತ್ರ.
ನಿಸರ್ಗವೆಂಬ ಸಗ್ಗ ಕಣ್ಣೆದುರಿರಲು
ಹೋರುವ ಹೆಗಲು ಬಲವಾಗಿರಲು
ಮಾಡುವ ಮಾಟವೆ ಮೋಕ್ಷವಾಗಿರಲು
ಕಲ್ಪಿತ ಲೋಕದ ಹಂಗೇನು?
ಶೀಲವಿಲ್ಲದ ಸಾಧನೆ ಸಿದ್ಧಿಯಲ್ಲ
ಸಿದ್ಧಿಯೆಂಬುದು ಕೊಂಡು ತರುವ ಸರಕಲ್ಲ
ಕಣ್ಣು ಮುಚ್ಚಿ ಕುಳಿತು ಮಾಡಿದ
ಮನನವೆಲ್ಲವು ಧ್ಯಾನವಲ್ಲ.
ತನು ಶದ್ಧಿ, ಮನ ಶುದ್ಧಿ
ಸಕಲ ಮೂಲ ಕ್ರಿಯಾಶುದ್ಧಿಗಳನೇ
ಶೀಲವೆಂದ ಗೌತಮ ಬುದ್ಧ
ಸಮಾಧಿ ಸಿದ್ಧಿಗದು ಬದ್ಧ.
ಹೊರಗಿನದೆಲ್ಲ ಮರೆದು ತನ್ನ ತಾನರಿದು
ಬೇಕು ಬೇಡಗಳ ತೊರೆದು
ಕಾಡದೆ ಬೇಡದೆ ಬಂದುದನೇ ಪೊರೆದು
ಆದುದೇ ಸ್ಥಿತಿ ಸಿದ್ದ ಸಮಾಧಿ.
ಸಮಾಧಿ ಸಿದ್ಧ ಚಿತ್ತ ಯೋಗದಲಿ
ಜಗದ ನಡೆಗೆ ಸನ್ಮಾರ್ಗಗೈವ ಗರು ನಡೆ
ಇಹದಲ್ಲಿಯೆ ಎಲ್ಲ ಮಹವ ಕಂಡು
ಪರಿ ನಿರ್ವಾಣಗೊಳ್ಳುವ ಸಂಬುದ್ಧ ನಡೆ.
****
ಕವಿತೆ ರಚನೆ– *ಡಾ.ಜಿಎನ್ನೆಂ* – ದೂ.೯೪೪೯೦೭೭೦೦೩