![](https://www.chandravallinews.com/wp-content/uploads/2024/06/WhatsApp-Image-2024-06-10-at-4.12.07-AM-1024x594.jpeg)
i
ಬಾವಿ ಮುಚ್ಚಿಸಿದ ಶಾಸಕ ಎನ್.ವೈ.ಗೋಪಾಲಕೃಷ್ಣ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮ ದೇವಿ ನೆಲೆಸಿರುವ ಪುಣ್ಯ ಕ್ಷೇತ್ರದಲ್ಲಿ ಪ್ರತಿವರ್ಷ ವಿಶೇಷವಾದ ಜಾತ್ರೆ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ನಡೆಯುವುದು. ಆದರೆ, ಪ್ರತಿವರ್ಷವೂ ಈ ಜಾತ್ರೆಗೆ ಹೋಗುವ ಭಕ್ತರು, ವಾಹನ ಸವಾರರು ಅಪಾಯವನ್ನು ಲೆಕ್ಕಿಸದೆ ದೇವಿಯ ಮೇಲಿನ ಭಕ್ತಿಯಿಂದ ದರ್ಶನಕ್ಕೆ ತೆರಳುತ್ತಿದ್ದರು. ತಳಕು, ಘಟಪರ್ತಿ, ಹೊನ್ನೂರು, ಗೌರಸಮುದ್ರ ಮೂಲಕ ಹಾದುಹೋಗುವ ರಸ್ತೆಯ ಪಕ್ಕದಲ್ಲಿ ಪುರಾತನ ಕಾಲದ ಆಳಾವಾದ ಕಲ್ಲಿನ ಕಟ್ಟಡ ಬಾವಿಯೊಂದು ಅಪಾಯಕ್ಕಾಗಿ ಕಾಯುತ್ತಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಬಾವಿಗೆ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಕಳೆದ ಮೇ ಅಂತ್ಯದಲ್ಲಿ ಭಾಗದಲ್ಲಿ ಸುರಿದ ಮಳೆಗೆ ತಡೆಗೋಡೆ ಹಾಗೂ ಬಾವಿಯ ಎರಡೂ ಕುಸಿದು ಬಿದ್ದು ರಸ್ತೆಯಲ್ಲಿ ಸಂಚಾರ ಮಾಡಲು ಪ್ರಾಣವನ್ನು ಕೈಯಲ್ಲಿಡಿದು ಸಾಗಬೇಕಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ, ಸದಸ್ಯರಾದ ಶಶಿಕುಮಾರ್, ಭಾಗ್ಯಮ್ಮಬೋಮ್ಮಣ್ಣ, ಎಂ.ಚಂದ್ರಣ್ಣ, ಟಿ.ಒ.ಬಾಬು, ಜಿ.ಬಿ.ಮೂರ್ತಿ ಮುಂತಾದವರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣರವರಿಗೆ ಭೇಟಿ ಮಾಡಿ ಬಾವಿ ಕುಸಿದ ಬಗ್ಗೆ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಮನವಿ ಮಾಡಿ ಬಾವಿಯನ್ನು ಮುಚ್ಚಿಸುವಂತೆ ವಿನಂತಿಸಿದರು. ಗ್ರಾಮಸ್ಥರ ಒತ್ತಾಯದಂತೆ ಶಾಸಕ ಕೂಡಲೇ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿ ಬಾವಿಯನ್ನು ಮುಚ್ಚುವಂತೆ ಆದೇಶಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಭಾಸ್ಕರ್ ಮತ್ತು ಸಿಬ್ಬಂದಿ ವರ್ಗ ಶಾಸಕರ ಸೂಚನೆಯಂತೆ ಇಲಾಖೆ ಅಧಿಕಾರಿಗಳ ಅನುಮತಿ ಪಡೆದು ಭಾನುವಾರ ಅಪಾಯಕ್ಕಾಗಿ ಕಾಯುತ್ತಿದ್ದ ಬಾವಿಯನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರು. ತಮ್ಮ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಶಾಸಕ ಎನ್.ವೈ.ಗೋಪಾಲಕೃಷ್ಣರವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ, ಗ್ರಾಮಸ್ಥರು, ಭಕ್ತರು ಅಭಿನಂದನೆ ಸಲ್ಲಿಸಿದ್ಧಾರೆ. ಪಿಡಿಒ ಹನುಮಂತರಾಯ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.