i
ಶಿಗ್ಗಾಂವಿ ಮಾದರಿ ಕ್ಷೇತ್ರ ಮಾಡುವುದು ನನ್ನ ಗುರಿ-ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಹಾವೇರಿ(ಶಿಗ್ಗಾಂವಿ):
ಶಿಗ್ಗಾಂವಿಯಲ್ಲಿ ನಾನು ಸಮಗ್ರ ಅಭಿವೃದ್ಧಿ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. 3 ವರ್ಷದಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಮಡಲಿ ಹಾಗೂ ಹಿರೇಮಲ್ಲೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು.
ಶಿಗ್ಗಾಂವ್ ಕ್ಷೇತ್ರದ ಮೊದಲ ಶಾಸಕರಾದ ಆರ್ ಸಿ ಪಾಟೀಲರನ್ನು ಕೊಟ್ಟದ್ದು ಮಡಲಿ ಗ್ರಾಮ. ಅವರು ಒಬ್ಬ ಸಜ್ಜನ, ದಕ್ಷ, ಪ್ರಾಮಾಣಿಕ ರಾಜಕಾರಣಿ ಆಗಿದ್ದರು. ಅವತ್ತು ಅಭಿವೃದ್ಧಿಯ ಅವಕಾಶಗಳು ಕಡಿಮೆ ಇದ್ದರೂ ಇಡೀ ತಾಲ್ಲೂಕಿನಲ್ಲಿ ಒಳ್ಳೆಯ ಆಡಳಿತ ತಂದರು. ಈ ಭಾಗದಲ್ಲಿ ರಾಜಕೀಯ ಪ್ರಜ್ಞೆ ಇರುವವರನ್ನು ಕೊಟ್ಟ ಕ್ಷೇತ್ರವಾಗಿದೆ. ನಾನು ಶಾಸಕನಾಗುವ ಮುಂಚಿನಿಂದಲೂ ಈ ಊರಿಗೆ ನಾನು ಬರುತ್ತಿದ್ದೇನೆ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆದ ಕಾರಣ ಕಳೆದ ಒಂದೂವರೆ ವರ್ಷದಿಂದ ಇಲ್ಲಿಗೆ ಬರಲು ಆಗಿಲ್ಲ. 2018ರಲ್ಲಿ ನೀವು ಕೊಟ್ಟ ಮತದ ಶಕ್ತಿಯಿಂದ ನಾನು ಶಾಸಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ರಾಜ್ಯಕ್ಕೆ ಏನೇ ಸೇವೆ ಮಾಡಿದ್ದರೂ ಅದಕ್ಕೆ ಕಾರಣಕರ್ತರು ನೀವೇ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಡಬಲ್ ಎಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿದೆ ಕೋವಿಡ್ ಬಂದರೂ ಬಹುತೇಕ ಜನರು ಎರಡು ಡೋಸ್ ಲಸಿಕೆ ತೆಗೆದುಕೊಂಡಿರುವುದರಿಂದ ಮಾಸ್ಕ್ ಹಾಕುವ ಪರಿಸ್ಥಿತಿ ಇಲ್ಲ. ನಾವು ಮಾಡಿರುವ ಕೆಲಸದ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 54 ಲಕ್ಷ ರೈತರಿಗೆ 16000 ಕೋಟಿ ರೂ. ನೇರವಾಗಿ ಹಣ ವರ್ಗಾವಣೆ ಆಗಿದೆ. ನಾನು ಸಿಎಂ ಆದ ಕೂಡಲೇ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಶಿಗ್ಗಾವಿ ಸವಣೂರು ತಾಲೂಕಿನ 8 ಸಾವಿರ ರೈತರ ಮಕ್ಕಳಿಗೆ ಅನುಕೂಲವಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಮ್ಮ ಆಶೀರ್ವಾದ ದಿಂದ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಎಲ್ಲ ಸಮುದಾಯಗಳಿಗೂ ನ್ಯಾಯ ಕೊಟ್ಟಿದ್ದೇನೆ- ನಿಮ್ಮ ಸ್ವಾಗತ ಉತ್ಸಾಹ ನೋಡಿದಾಗ ಕಳೆದ ಬಾರಿಗಿಂತ ಹೆಚ್ಚು ಮತ ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ. ಕಾಂಕ್ರೀಟ್ ರಸ್ತೆ, ಹೈವೇ ರಸ್ತೆಗಳ ಸಂಪರ್ಕ ಜಾಲ, ಎಲ್ಲಾ ಸಮುದಾಯಳಿಗೆ ಸಭಾ ಭವನ, ಮನೆಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಕೊಡುವ ಯೋಜನೆ ಆಗಿದೆ. ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು 438 ಕೋಟಿ ವೆಚ್ಚದಲ್ಲಿ ನನ್ನ ಕ್ಷೇತ್ರದ 136 ಗ್ರಾಮಗಳಿಗೆ ತರುತ್ತಿದ್ದೇವೆ. 7-8 ತಿಂಗಳಲ್ಲಿ ಇದು ಮುಕ್ತಾಯವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಾದರಿ ಕ್ಷೇತ್ರ ಮಾಡುವುದು ನನ್ನ ಗುರಿ- ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರ ಮಾಡುವುದು ನನ್ನ ಗುರಿ. ಇಲ್ಲಿಗೆ ಐಟಿಐ, ಜಿಟಿಡಿಸಿ, 250 ಬೆಡ್ ಗಳ ಆಸ್ಪತ್ರೆ, ಟೆಕ್ಸ್ ಟೈಲ್ ಪಾರ್ಕ್ ತಂದಿದ್ದೇವೆ. ಇಲ್ಲಿಗೆ ಹತ್ತಿರದಲ್ಲೇ ಮತ್ತೊಂದು ಇಂಡಸ್ಟ್ರಿಯಲ್ ಪಾರ್ಕ್ ಮಾಡುವ ಉದ್ದೇಶ ಇದೆ. ಇದರಿಂದ ಯುವಕರಿಗೆ ಸಾವಿರಾರು ಉದ್ಯೋಗ ಕಲ್ಪಿಸಿಕೊಡಬಹುದು. ಇದಕ್ಕೆ ನಿಮ್ಮ ಮತ ನಿಮ್ಮ ಆಶೀರ್ವಾದ ಬಹಳ ಮುಖ್ಯ. ಇದರಿಂದ ರಾಜ್ಯದಲ್ಲಿ ಜನಪರ, ಜನಕಲ್ಯಾಣ ಹಾಗೂ ಸುಭಿಕ್ಷವಾದ ಸರ್ಕಾರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.