ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಶಿಕ್ಷಕರ ಶ್ರಮ ಮತ್ತು ಅಭಿಮಾನದ ಸಂಕೇತವಾಗಿ ತಲೆಯೆತ್ತಿದ 'ಗುರುಭವನ' ಇಂದು ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ಆಡಳಿತಾತ್ಮಕ ಹಗ್ಗಜಗ್ಗಾಟಕ್ಕೆ ಸಿಲುಕಿ ಸೊರಗುತ್ತಿದೆ.
ಸರ್ಕಾರ, ಶಾಸಕರು, ಸಂಸದರ ಅನುಧಾನ ಸೇರಿದಂತೆ ಸಾವಿರಾರು ಶಿಕ್ಷಕರ ದೇಣಿಗೆಯಿಂದ ನಿರ್ಮಾಣವಾದ ಈ ಬೃಹತ್ ಕಟ್ಟಡ, ಮೂಲಭೂತ ಸೌಕರ್ಯಗಳಿಲ್ಲದೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಿಕ್ಷಕರ ಬೆವರಿನ ಹನಿ; ವ್ಯವಸ್ಥೆಯ ನಿರ್ಲಕ್ಷ್ಯದ ಬಲಿ
ಹಿರಿಯೂರು ತಾಲೂಕಿನ ಶಿಕ್ಷಕರು ತಮ್ಮ ವೇತನದಿಂದ 500 ರೂ.ನಿಂದ 5,000 ರೂ.ವರೆಗೆ ದೇಣಿಗೆ ನೀಡಿ, ಸಾರ್ವಜನಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ನಗರದ ಪ್ರಧಾನ ರಸ್ತೆಯಲ್ಲಿ 98×150 ಅಡಿ ವಿಸ್ತೀರ್ಣದ ಭವ್ಯ ಗುರುಭವನವನ್ನು ನಿರ್ಮಿಸಿದ್ದರು.
1996ರಲ್ಲಿ ಅಡಿಗಲ್ಲು ಬಿದ್ದ ಈ ಕಟ್ಟಡ, 15 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2011ರಲ್ಲಿ ಉದ್ಘಾಟನೆಗೊಂಡಿತು. ಆದರೆ ಇಂದು ಈ ಕಟ್ಟಡದ ಸ್ಥಿತಿ ಶೋಚನೀಯವಾಗಿದೆ.
ಭವನದ ಇಂದಿನ ದುಸ್ಥಿತಿ:
ಮಳೆಯ ಹನಿ - ಗುರುಭವನ ಧ್ವನಿ: ಸಭಾಂಗಣದ ಮೇಲ್ಛಾವಣಿಯ ಶೀಟುಗಳು ತೂತಾಗಿದ್ದು, ಮಳೆ ಬಂದರೆ ಇಡೀ ಭವನ ಜಲಾವೃತವಾಗುತ್ತಿದೆ.

ಕಿಟಕಿಗಳೋ ಅಥವಾ ಬರಿ ಚೌಕಟ್ಟುಗಳೋ?:
ಭವನದ ಬಹುತೇಕ ಕಿಟಕಿಗಳಿಗೆ ಗಾಜುಗಳೇ ಇಲ್ಲ. ಗಾಜುಗಳು ಒಡೆದುಹೋಗಿವೆಯೋ ಅಥವಾ ಅಳವಡಿಕೆಯಲ್ಲೇ ಗೋಲ್ಮಾಲ್ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ವಿದ್ಯುತ್ ಅತಂತ್ರ: ಇಲ್ಲಿಯವರೆಗೆ ಶಾಶ್ವತ ವಿದ್ಯುತ್ ಸಂಪರ್ಕವಿಲ್ಲದೆ, ಟಿಪಿ ಕನೆಕ್ಷನ್ ಮೂಲಕವೇ ದಿನದೂಡಲಾಗುತ್ತಿದೆ.
ನಿರ್ವಹಣೆಯ ಕೊರತೆ: ಎರಡು ಅಂತಸ್ತುಗಳ ಈ ಕಟ್ಟಡದಲ್ಲಿ ಸಭಾಂಗಣ ಮತ್ತು ಭೋಜನಾಲಯವಿದ್ದರೂ, ಮೂಲ ಸೌಕರ್ಯಗಳಿಲ್ಲದ ಕಾರಣ ಸಾರ್ವಜನಿಕರು ಮದುವೆ ಅಥವಾ ಶುಭ ಸಮಾರಂಭಗಳಿಗೆ ಇದನ್ನು ಬಾಡಿಗೆಗೆ ಪಡೆಯಲು ಹಿಂಜರಿಯುತ್ತಿದ್ದಾರೆ.
ಕಂದಾಯದ ಹಗ್ಗಜಗ್ಗಾಟ: ಅತಂತ್ರದಲ್ಲಿ ಭವಿಷ್ಯ
ಗುರುಭವನದ ಅವನತಿಗೆ ಪ್ರಮುಖ ಕಾರಣ ನಗರಸಭೆ ಮತ್ತು ಶಿಕ್ಷಣ ಇಲಾಖೆಯ ನಡುವಿನ ಕಂದಾಯ ಬಾಕಿ ವಿವಾದ.
ನಗರಸಭೆಯ ವಾದ: ಗುರುಭವನವನ್ನು ವಾಣಿಜ್ಯ ಉದ್ದೇಶಕ್ಕೆ (ಬಟ್ಟೆ ಅಂಗಡಿಗಳಿಗೆ) ಬಾಡಿಗೆ ನೀಡಲಾಗುತ್ತಿದೆ. ಆದ್ದರಿಂದ 2025ರವರೆಗೆ ಬಾಕಿ ಇರುವ 18,55,189 ರೂ.ಗಳ ಕಂದಾಯವನ್ನು ಪಾವತಿಸಬೇಕು ಎಂದು ನಗರಸಭೆ ಪಟ್ಟು ಹಿಡಿದಿದೆ.
ಶಿಕ್ಷಣ ಇಲಾಖೆಯ ವಾದ:
ಇದು ಸಂಪೂರ್ಣ ವಾಣಿಜ್ಯ ಕಟ್ಟಡವಲ್ಲ, ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸುವ ಕಟ್ಟಡ. ಆದ್ದರಿಂದ ಕಂದಾಯದಲ್ಲಿ ವಿನಾಯಿತಿ ನೀಡಿ, ಕೇವಲ ಬಾಡಿಗೆ ನೀಡಿರುವ ನೆಲಮಹಡಿಗೆ ಮಾತ್ರ ಸೇವಾ ಶುಲ್ಕ ನಿಗದಿಪಡಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾಲ್ಕು ಬಾರಿ ಮನವಿ ಮಾಡಿದ್ದಾರೆ.
ಪರಿಣಾಮ: ಕಂದಾಯ ಪಾವತಿಯಾಗದ ಕಾರಣ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ಇದರಿಂದಾಗಿ ಇಡೀ ಕಟ್ಟಡ ನಿರುಪಯುಕ್ತವಾಗುವ ಹಾದಿಯಲ್ಲಿದೆ.
"ಗುರುಭವನವು ಸಂಪೂರ್ಣ ಸರ್ಕಾರಿ ಕಟ್ಟಡವಾಗಿದ್ದು, ಮೇಲಿನ ಅಂತಸ್ತನ್ನು ಇಲಾಖೆಯ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ. ಕೇವಲ ಭೋಜನಾಲಯದ ಭಾಗವನ್ನು ತಾತ್ಕಾಲಿಕವಾಗಿ ಬಾಡಿಗೆ ನೀಡಲಾಗಿದೆ. ಈಗಾಗಲೇ ಧ್ವನಿವರ್ಧಕದ ಸಮಸ್ಯೆ ಮತ್ತು ಫ್ಯಾನ್ಗಳ ರಿಪೇರಿ ಮಾಡಿಸಲಾಗಿದೆ. ನಗರಸಭೆಯ ಕಂದಾಯ ಸಮಸ್ಯೆ ಬಗೆಹರಿದ ಕೂಡಲೇ ಉಳಿದೆಲ್ಲಾ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲಾಗುವುದು."
ಸಿ.ಎಂ. ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ.
ಸಾರ್ವಜನಿಕರ ಆಗ್ರಹ
ಗುರುಭವನದ ಖಾತೆಯಲ್ಲಿ ಸರಿಸುಮಾರು 1 ಕೋಟಿ 30 ಲಕ್ಷ ರೂ. ಬಾಡಿಗೆ ಮೊತ್ತ ಜಮೆಯಾಗಿದೆ ಎಂಬ ಮಾಹಿತಿ ಇದೆ. ಇಷ್ಟೊಂದು ದೊಡ್ಡ ಮೊತ್ತದ ಹಣವಿದ್ದರೂ, ಶಿಕ್ಷಕರ ಶ್ರಮದ ಕಟ್ಟಡವೊಂದು ಮಳೆಗೆ ಸೋರುತ್ತಿರುವುದು ವಿಪರ್ಯಾಸ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ನಗರಸಭೆಯೊಂದಿಗಿನ ಗೊಂದಲ ಬಗೆಹರಿಸಿ, ಈ 'ಅಕ್ಷರ ದೇಗುಲ'ವನ್ನು ಪುನಶ್ಚೇತನಗೊಳಿಸಬೇಕಿದೆ. ಹಿರಿಯೂರಿನ ಹೆಮ್ಮೆಯ ಗುರುಭವನ ಮತ್ತೆ ಕಳೆಗಟ್ಟುವುದೇ? ಕಾದು ನೋಡಬೇಕಿದೆ.
“ನಗರದಲ್ಲಿರುವ ಶಿಕ್ಷಕರ ಭವನದಿಂದ 2025-26 ಮತ್ತು 2026-27ನೇ ಸಾಲಿನಲ್ಲಿ ಒಟ್ಟು 18,55,189 ಲಕ್ಷ ರೂ. ಕಂದಾಯ ಬಾಕಿ ಇದೆ. "ನಗರಸಭೆ ವತಿಯಿಂದ ಶಿಕ್ಷಕರ ಭವನದ ಪದಾಧಿಕಾರಿಗಳಿಗೆ ಕಂದಾಯ ಪಾವತಿಸುವಂತೆ ಈಗಾಗಲೇ ಸಾಕಷ್ಟು ಬಾರಿ ತಿಳುವಳಿಕೆ ನೀಡಲಾಗಿದೆ. ಆದರೂ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ನಿಗದಿತ ಸಮಯದಲ್ಲಿ ಕಂದಾಯ ಪಾವತಿಸುವುದು ಕೇವಲ ನಿಯಮವಲ್ಲ, ಅದು ಜವಾಬ್ದಾರಿಯೂ ಆಗಿದೆ".
ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.


