ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದುರವಸ್ಥೆ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಮಗಳೂರಿನ ಯುವಕನೊಬ್ಬ ಅಪಘಾತಕ್ಕೀಡಾಗಿ ಸೂಕ್ತ ಚಿಕಿತ್ಸೆ ಸಿಗದೆ, ಮೂರು ಜಿಲ್ಲೆಗಳಲ್ಲಿ ಬರೋಬ್ಬರಿ 900 ಕಿಲೋಮೀಟರ್ ಆಂಬ್ಯುಲೆನ್ಸ್ನಲ್ಲೇ ಅಲೆಯಬೇಕಾದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ಕೇಳಿಬರುತ್ತಿವೆ.
ಎರಡು ಹಗಲು, ಒಂದು ರಾತ್ರಿ ನರಕಯಾತನೆ
ಚಿಕ್ಕಮಗಳೂರಿನ ಗಾಳಿಗಂಡಿ ನಿವಾಸಿ ರವಿ ಎಂಬ ಯುವಕ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದ ಕಾರಣ, ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಪರಿಣಾಮವಾಗಿ, ಗಾಯಾಳು ಯುವಕನನ್ನು ಕರೆದುಕೊಂಡು ಆಂಬ್ಯುಲೆನ್ಸ್ ಮೂರು ಜಿಲ್ಲೆಗಳ ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದೆ.
ಎರಡು ಹಗಲು ಮತ್ತು ಒಂದು ರಾತ್ರಿ ಆಂಬ್ಯುಲೆನ್ಸ್ನಲ್ಲೇ ನರಳಾಡಿದ ಯುವಕನಿಗೆ ಮಂಗಳೂರಿನ ಪ್ರಸಿದ್ಧ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲೂ ಸೂಕ್ತ ಚಿಕಿತ್ಸೆ ಲಭಿಸಿಲ್ಲ ಎನ್ನಲಾಗಿದೆ. ಅಂತಿಮವಾಗಿ ಬೇರೆ ದಾರಿಯಿಲ್ಲದೆ ಕುಟುಂಬಸ್ಥರು ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ-
ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಕ ಔಷಧಗಳಾಗಲಿ ಅಥವಾ ಆಧುನಿಕ ಚಿಕಿತ್ಸಾ ಪರಿಕರಗಳಾಗಲಿ ಲಭ್ಯವಿಲ್ಲದಿರುವುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಯುವಕನಿಗೆ ಸರಿಯಾದ ಸ್ಪಂದನೆ ನೀಡದ ಆರೋಗ್ಯ ವ್ಯವಸ್ಥೆಯ ನಡೆಗೆ ಸಾರ್ವಜನಿಕರು ಆಸಮಾಧಾನ ಹೊರಹಾಕಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ ಅಂಕೋಲಾದ ಚಂದ್ರಹಾಸ ಎಂಬ ಯುವಕ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಚಿಕ್ಕಮಗಳೂರಿನ ರವಿ ಎಂಬ ಯುವಕನಿಗೆ ಎದುರಾದ ಈ ದುಸ್ಥಿತಿ ರಾಜ್ಯದ ಆರೋಗ್ಯ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ-
ಈ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಗುತ್ತಿದ್ದು, "ಆಡಳಿತ ಪಕ್ಷವು ಕೇವಲ ಕುರ್ಚಿ ಕಿತ್ತಾಟದಲ್ಲೇ ಮುಳುಗಿದೆ, ಇವರಿಗೆ ಜನರ ಜೀವದ ಬೆಲೆಯೇ ಇಲ್ಲದಂತಾಗಿದೆ" ಎಂದು ಟೀಕಿಸಲಾಗಿದೆ.
"ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ರಾಜ್ಯದ ಆರೋಗ್ಯ ವ್ಯವಸ್ಥೆಗೇ ಅನಾರೋಗ್ಯ ಬಡಿದಿದೆ. ಸಿಎಂ ಸಿದ್ದರಾಮಯ್ಯನವರೇ, ಸರ್ಕಾರದ ಸಾಧನಾ ಸಮಾವೇಶದಲ್ಲಿ ಸರ್ಕಾರಿ ಆಸ್ಪತ್ರೆಗಳ ಈ ದುರವಸ್ಥೆಯನ್ನೂ ನಿಮ್ಮ ಸಾಧನಾ ಪಟ್ಟಿಗೆ ಸೇರಿಸುತ್ತೀರಾ?" ಎಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಶ್ನೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಗಳು ಹಳಿ ತಪ್ಪುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.



