ಚಂದ್ರವಳ್ಳಿ ನ್ಯೂಸ್, ಮೈಸೂರು :
"ಹದಿಹರೆಯವು ಭಾವನೆಗಳು ಅತಿಯಾಗಿ ಬೆಳೆಯುವ ಸೂಕ್ಷ್ಮ ವಯಸ್ಸು. ಈ ಹಂತದಲ್ಲಿ ಆವೇಗಕ್ಕೆ ಮಣಿಯದೆ ವಿವೇಕದಿಂದ ನಡೆದುಕೊಂಡಾಗ ಮಾತ್ರ ಯುವಕರು ತಪ್ಪು ನಿರ್ಧಾರಗಳಿಂದ ದೂರವಿದ್ದು, ಜೀವನ, ಕುಟುಂಬ ಮತ್ತು ಸಮಾಜವನ್ನು ಸುಸ್ಥಿರವಾಗಿ ಕಟ್ಟಿಕೊಳ್ಳಬಹುದು."
ಆವೇಗದ ಅಲೆಗೆ ಮನಸೊಡದಿರು
ವಿವೇಕ ದೀಪ ನಿನ್ನೊಳು ಬೆಳಗಿಸು
ಕ್ಷಣದ ಭಾವಕೆ ಜೀವ ಕೊಡದಿರು
ಬಾಳಿನ ದಾರಿಗೆ ಜ್ಞಾನ ಬೆಸೆಯಿಸು.
ಹದಿಹರೆಯದ ವಯಸ್ಸು ಮನಸ್ಸಿಗೂ ಸರಿಯಾಗಿ ಅರ್ಥವಾಗದ ಕನಸುಗಳ ಹೊತ್ತು. ಆ ಕನಸುಗಳು ಆಗಸದಲಿ ಹಾರಾಡುವ ನವ್ಯ ರೂಪದ ಹೊಂಗನಸು ಗಳಂತೆ ಮನಸ್ಸನ್ನು ಸೆಳೆಯುತ್ತವೆ. ಈ ಭಾವನೆಗಳ ಓಟಕ್ಕೆ ವಿವೇಕದ ಹಿಡಿತ ಇರದಿದ್ದರೆ ಜೀವನದಲ್ಲಿ ಭಾರಿ ಆಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ತರುಣ ತರುಣಿಯರು ಶುದ್ಧ ಮನಸ್ಸು, ಸಂಯಮ ಮತ್ತು ವಿವೇಕದ ಬೆಳಕನ್ನು ಬೇಗನೆ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ.
ಆವೇಗವು ಕ್ಷಣಿಕ, ವಿವೇಕವು ಶಾಶ್ವತ. ಆವೇಗಕ್ಕೆ ಮಣಿದರೆ ಹಾನಿ, ವಿವೇಕಕ್ಕೆ ನಡೆದುದರೆ ಬೆಳಕು.ಆಲೋಚನೆ , ನಮ್ಮಿಂದ ಸಾಧ್ಯವಿದೆ ಯೋಚಿಸೋಣ
ಹದಿಹರೆಯವು ಮಾನವ ಜೀವನದ ಅತ್ಯಂತ ಸೂಕ್ಷ್ಮ, ಸಂವೇದನಾಶೀಲ ಮತ್ತು ನಿರ್ಣಾಯಕ ಘಟ್ಟವಾಗಿದೆ. ಈ ವಯಸ್ಸಿನಲ್ಲಿ ದೇಹದ ಬೆಳವಣಿಗೆ ವೇಗವಾಗಿ ನಡೆಯುವಂತೆಯೇ, ಮನಸ್ಸಿನ ಭಾವನೆಗಳು, ಆಸೆಗಳು ಮತ್ತು ಕನಸುಗಳೂ ಅತಿವೇಗವಾಗಿ ಬೆಳೆಯುತ್ತವೆ. ಹೊಸತನದ ಆಕರ್ಷಣೆ, ಸ್ವಾತಂತ್ರ್ಯದ ಹಂಬಲ ಮತ್ತು ಸಂಬಂಧಗಳತ್ತ ಇರುವ ಕುತೂಹಲ ಈ ಹಂತದಲ್ಲಿ ಬಹಳ ಪ್ರಬಲವಾಗಿರುತ್ತದೆ. ಆದರೆ ಅನುಭವದ ಕೊರತೆ, ಭಾವನೆಗಳ ಅತಿರೇಕ ಮತ್ತು ವಿವೇಕದ ಅಪಕ್ವತೆ ಅನೇಕ ಬಾರಿ ತಪ್ಪು ನಿರ್ಧಾರಗಳಿಗೆ ಕಾರಣವಾಗುತ್ತದೆ. ಇದೇ ಕಾರಣದಿಂದ ಹದಿಹರೆಯವು ಬದುಕನ್ನು ರೂಪಿಸುವ ಕಾಲವೂ ಹೌದು, ಬದುಕನ್ನು ಹಾಳುಮಾಡುವ ಕಾಲವೂ ಹೌದು.
ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅನೇಕ ದುರ್ಘಟನೆಗಳ ಹಿಂದೆ ಈ ಹದಿಹರೆಯದ ಆವೇಗ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರೀತಿ, ಪ್ರೇಮ, ಸ್ನೇಹ ಮತ್ತು ಸಂಬಂಧಗಳ ಹೆಸರಿನಲ್ಲಿ ಆತ್ಮಹತ್ಯೆ, ಕೊಲೆ, ಹಲ್ಲೆ, ದೌರ್ಜನ್ಯ, ಮೋಸ ಮತ್ತು ಕುಟುಂಬದ ನಾಶದಂತಹ ಘಟನೆಗಳು ದಿನನಿತ್ಯ ವರದಿಯಾಗುತ್ತಿವೆ. ಒಂದು ಕ್ಷಣದ ಆವೇಗ, ಒಂದು ತಪ್ಪು ಭಾವನೆ ಅಥವಾ ಒಂದು ಅಸಹನೆ ಇಡೀ ಬದುಕನ್ನೇ ಕತ್ತಲೆಗೆ ತಳ್ಳುತ್ತಿರುವುದು ಆತಂಕಕಾರಿ ಸತ್ಯ. ಇವು ಕೇವಲ ವೈಯಕ್ತಿಕ ಸಮಸ್ಯೆಗಳಲ್ಲ, ಇಡೀ ಸಮಾಜದ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ವಿಚಾರಗಳಾಗಿವೆ.
ಹಿಂದಿನ ಕಾಲದಲ್ಲಿ ಹದಿಹರೆಯದ ಮಕ್ಕಳ ಬದುಕಿನಲ್ಲಿ ಕುಟುಂಬ ಮತ್ತು ಸಮಾಜದ ಹಿರಿಯರ ಪಾತ್ರ ಬಹಳ ದೊಡ್ಡದಾಗಿತ್ತು. ಅವರು ಬದುಕಿನ ಪಾಠಗಳನ್ನು ತಮ್ಮ ಅನುಭವದಿಂದ ಕಲಿಸುತ್ತಿದ್ದರು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಯುವ ಮನಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರುತ್ತಿವೆ. ನೈಜ ಜೀವನಕ್ಕಿಂತ ಕಲ್ಪಿತ ಜೀವನ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದೆ. ಪ್ರೀತಿ ಎಂದರೆ ಸದಾ ರೋಮ್ಯಾಂಟಿಕ್ ದೃಶ್ಯಗಳು, ಹಠ ಮತ್ತು ಅತಿರೇಕದ ವರ್ತನೆ ಎಂಬ ತಪ್ಪು ಸಂದೇಶಗಳು ಹೆಚ್ಚಾಗಿ ಹರಡುತ್ತಿವೆ.

ಸಿನಿಮಾ ಮತ್ತು ಮನರಂಜನಾ ಮಾಧ್ಯಮಗಳು ಸಹ ಕೆಲವೊಮ್ಮೆ ಪ್ರೀತಿಯ ನ್ನು ಅತಿರೇಕದ ಭಾವನೆಯಾಗಿ ಚಿತ್ರಿಸುತ್ತವೆ. ನಾಯಕನ ಹಠವನ್ನು ಪ್ರೀತಿ ಎಂದು, ನಿರಾಕರಣೆಯ ನಂತರದ ಹಿಂಬಾಲಿಕೆಯನ್ನು ಧೈರ್ಯ ಎಂದು, ಪ್ರತೀಕಾರವನ್ನು ಶೌರ್ಯ ಎಂದು ತೋರಿಸುವ ದೃಶ್ಯಗಳು ಯುವ ಮನಸ್ಸಿ ನಲ್ಲಿ ತಪ್ಪುಕಲ್ಪನೆಗಳನ್ನು ಹುಟ್ಟಿಸುತ್ತವೆ. ಆದರೆ ನಿಜವಾದ ಜೀವನವು ಪರದೆಯ ಕಥೆಯಂತೆ ನಡೆಯುವುದಿಲ್ಲ. ಪ್ರತಿಯೊಂದು ತಪ್ಪು ನಿರ್ಧಾರಕ್ಕೂ ನಿಜವಾದ ಪರಿಣಾಮಗಳು ಇರುತ್ತವೆ. ಜೀವನದಲ್ಲಿ ಮಾಡಿದ ಪ್ರತಿಯೊಂದು ಹೆಜ್ಜೆಯೂ ಭವಿಷ್ಯವನ್ನು ನಿರ್ಧರಿಸುತ್ತದೆ.
ಇಂದು ಪತ್ರಿಕೆಗಳನ್ನು ತೆರೆದಾಗ ಅಥವಾ ಸುದ್ದಿವಾಹಿನಿಗಳನ್ನು ನೋಡಿದಾಗ, ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಹಿಂಸಾತ್ಮಕ ಘಟನೆಗಳು ಗಮನ ಸೆಳೆಯುತ್ತವೆ. ನಿರಾಕರಣೆಯನ್ನು ಸಹಿಸದ ಯುವಕರು ಹಿಂಸೆಗೆ ಇಳಿಯುವುದು, ಕ್ಷಣಿಕ ಕೋಪದಲ್ಲಿ ಜೀವ ಕಳೆದುಕೊಳ್ಳುವುದು ಅಥವಾ ಸಂಬಂಧಗಳ ಹೆಸರಿನಲ್ಲಿ ಕುಟುಂಬಗಳನ್ನು ನಾಶಮಾಡುವುದು ಹೆಚ್ಚಾಗಿದೆ. ಇವು ಕೇವಲ ಘಟನೆಗಳಲ್ಲ, ಸಮಾಜದ ಮನೋವೈಕಲ್ಯದ ಪ್ರತಿಬಿಂಬಗಳಾಗಿವೆ.
ಪ್ರೀತಿ ಎಂಬುದು ಸ್ವಾಮ್ಯವಲ್ಲ. ಪ್ರೀತಿ ಎಂದರೆ ಗೌರವ, ಜವಾಬ್ದಾರಿ ಮತ್ತು ಪರಸ್ಪರ ಒಪ್ಪಿಗೆ. ಆದರೆ ಇಂದಿನ ಕೆಲವು ಯುವ ಮನಸ್ಸುಗಳಲ್ಲಿ ಪ್ರೀತಿ ಇದೊಂದು ಹಕ್ಕು ಎಂಬ ತಪ್ಪು ಭಾವನೆ ಮೂಡಿದೆ. ನನ್ನನ್ನು ಒಪ್ಪಿಕೊಳ್ಳದಿದ್ದರೆ ಬದುಕು ಇಲ್ಲ ಎಂಬ ಮನೋಭಾವವು ಅತ್ಯಂತ ಅಪಾಯಕಾರಿ. ನಿರಾಕರಣೆ ಯನ್ನು ಶಾಂತವಾಗಿ ಸ್ವೀಕರಿಸುವುದು,ಎದುರಾಳಿಯ ನಿರ್ಧಾರವನ್ನು ಗೌರವಿಸುವುದು ನಿಜವಾದ ಪ್ರಬುದ್ಧತೆಯ ಲಕ್ಷಣವಾಗಿದೆ.
ಹದಿಹರೆಯದಲ್ಲಿ ಕಾಣುವ ಆಕರ್ಷಣೆ ಬಹುಪಾಲು ಶಾಶ್ವತವಲ್ಲ. ಅದು ಕ್ಷಣಿಕ ಭಾವನೆಯ ಫಲ. ಆದರೆ ಅದೇ ಭಾವನೆಯನ್ನು ಶಾಶ್ವತ ನಿರ್ಧಾರವೆಂದು ಭಾವಿಸುವುದು ದೊಡ್ಡ ತಪ್ಪು. ಇಂದಿನ ಸಂತೋಷಕ್ಕಾಗಿ ನಾಳೆಯ ಬದುಕನ್ನು ಪಣಕ್ಕಿಡುವುದು ಜಾಣತನವಲ್ಲ. ಬದುಕು ಬಹಳ ದೊಡ್ಡದು. ಒಂದು ಘಟನೆ ಇಡೀ ಬದುಕನ್ನು ನಿರ್ಧರಿಸುವುದಿಲ್ಲ ಎಂಬ ಅರಿವು ಯುವಜನತೆಯಲ್ಲಿ ಮೂಡಬೇಕು.
ಒಬ್ಬ ವಿದ್ಯಾರ್ಥಿನಿಯ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಓದಿನಲ್ಲಿ ಅತ್ಯುತ್ತಮವಾಗಿದ್ದ ಆಕೆ ವೈದ್ಯೆಯಾಗಬೇಕೆಂಬ ಕನಸು ಹೊಂದಿದ್ದಳು. ಆದರೆ ಸಾಮಾಜಿಕ ಜಾಲತಾಣದ ಮೂಲಕ ಬಂದ ಪರಿಚಯ ಮತ್ತು ಆಕರ್ಷಣೆಗೆ ಮಾರುಹೋದಳು. ನಿಧಾನವಾಗಿ ಓದಿನ ಮೇಲೆ ಗಮನ ಕಡಿಮೆಯಾಯಿತು. ಕುಟುಂಬದ ವಿಶ್ವಾಸ ಕಳೆದುಕೊಂಡಳು. ಕೊನೆಗೆ ಸಂಬಂಧವೂ ಮುರಿದು ಹೋಯಿತು.ಆದರೆ ಅಲ್ಲಿ ಕಳೆದುಹೋದದ್ದು ಕೇವಲ ಒಂದು ಸಂಬಂಧವಲ್ಲ, ಒಂದು ಪ್ರಕಾಶಮಾನ ಭವಿಷ್ಯ.
ಮತ್ತೊಂದು ಉದಾಹರಣೆಯಲ್ಲಿ ಒಬ್ಬ ಯುವಕ ತನ್ನ ಪ್ರೀತಿಯನ್ನು ನಿರಾಕರಿಸ ಲ್ಪಟ್ಟ ಕಾರಣಕ್ಕೆ ಕೋಪಗೊಂಡು ದುಡುಕಿ ಕೊಲಗೈವ ನಿರ್ಧಾರ ತೆಗೆದು ಕೊಂಡನು. ಸ್ನೇಹಿತರ ಪ್ರಭಾವವೂ ಸೇರಿ ಅವನು ಮಾಡಿದ ಒಂದು ತಪ್ಪು ಕೃತ್ಯ ಅವನನ್ನು ಕಾನೂನು ಸಮಸ್ಯೆ ಮತ್ತು ಕಾರಾಗೃಹದತ್ತ ತಳ್ಳಿತು. ಒಂದು ಕ್ಷಣದ ಕೋಪ ಇಡೀ ಕುಟುಂಬಗಳ ಜೀವನವನ್ನೇ ಕತ್ತಲೆಗೆ ತಳ್ಳಿತು. ಇಂತಹ ಘಟನೆಗಳು ಎಚ್ಚರಿಕೆಯ ಸಂದೇಶವಾಗಿವೆ.
ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಜಾಗೃತಿ ಅಗತ್ಯ. ಹೆಣ್ಣು ಮಕ್ಕಳು ಕೇವಲ ಕುಟುಂಬದ ಸದಸ್ಯರು ಮಾತ್ರವಲ್ಲ, ಸಮಾಜದ ಭವಿಷ್ಯದ ಆಧಾರ. ಅವರ ಆತ್ಮಗೌರವ, ಶಿಕ್ಷಣ ಮತ್ತು ವಿವೇಕವೇ ಅವರ ಶಕ್ತಿ. ಕ್ಷಣಿಕ ಆಕರ್ಷಣೆಗೆ ಮಾರುಹೋಗದೆ ತಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಅಗತ್ಯ. ಯಾರ ಮೇಲಾದರೂ ನಂಬಿಕೆ ಇಡುವ ಮೊದಲು ಅವರ ವ್ಯಕ್ತಿತ್ವವನ್ನು ಅಳೆಯುವುದು ವಿವೇಕ. ಸಿಹಿ ಮಾತುಗಳು ಸದಾ ಸತ್ಯವಾಗಿರುವುದಿಲ್ಲ ಎಂಬ ಅರಿವು ಇರಬೇಕು.
ಹುಡುಗರಿಗೂ ಇದೇ ರೀತಿಯ ಜವಾಬ್ದಾರಿ ಇದೆ. ನಿಜವಾದ ಪುರುಷತ್ವ ಎಂದರೆ ಕೋಪವಲ್ಲ, ನಿಯಂತ್ರಣ. ಮಹಿಳೆಯರನ್ನು ಗೌರವಿಸುವ ಗುಣವೇ ನಿಜವಾದ ಶಕ್ತಿ. ಪ್ರೀತಿ ನಿರಾಕರಿಸಲ್ಪಟ್ಟಾಗ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಯಬೇಕು. ಪ್ರತೀಕಾರ ಅಥವಾ ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಸಂಯಮ ಮತ್ತು ತಾಳ್ಮೆಯೇ ನಿಜವಾದ ಗೆಲುವು.
ಪೋಷಕರು ಮಕ್ಕಳಿಗೆ ಕೇವಲ ಆರ್ಥಿಕ ಸೌಲಭ್ಯಗಳನ್ನು ನೀಡುವುದಲ್ಲ, ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳೊಂದಿಗೆ ಮಾತನಾಡುವ ಸಂಸ್ಕೃತಿಯನ್ನು ಬೆಳೆಸಬೇಕು. ಶಿಕ್ಷಕರು ಅಂಕಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ಬೋಧಿಸಬೇಕು. ಸಮಾಜವು ಯುವಕರಿಗೆ ಒಳ್ಳೆಯ ಆದರ್ಶಗಳನ್ನು ನೀಡಬೇಕು. ಮಾಧ್ಯಮಗಳು ಪ್ರಚೋದನೆಯ ಬದಲು ಜಾಗೃತಿಯನ್ನು ಮೂಡಿಸಬೇಕು. ಸರ್ಕಾರ ಮತ್ತು ಕಾನೂನು ವ್ಯವಸ್ಥೆ ಗಂಭೀರ ಅಪರಾಧಗಳಿಗೆ ತ್ವರಿತ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಒಟ್ಟಿನಲ್ಲಿ ಹದಿಹರೆಯದ ವಯಸ್ಸು ಬದುಕನ್ನು ಕಟ್ಟಿಕೊಳ್ಳುವ ಅತ್ಯಂತ ಅಮೂಲ್ಯ ಕಾಲವಾಗಿದೆ. ಈ ವಯಸ್ಸಿನಲ್ಲಿ ಆವೇಗಕ್ಕಿಂತ ವಿವೇಕಕ್ಕೆ, ಭಾವನೆಗಿಂತ ಬುದ್ಧಿಗೆ, ಹಠಕ್ಕಿಂತ ತಾಳ್ಮೆಗೆ ಹೆಚ್ಚಿನ ಸ್ಥಾನ ನೀಡಬೇಕು. ಒಂದು ಕ್ಷಣದ ತಪ್ಪು ನಿರ್ಧಾರ ಇಡೀ ಜೀವನವನ್ನೇ ಹಾಳುಮಾಡಬಹುದು. ಆದರೆ ಒಂದು ಸರಿಯಾದ ನಿರ್ಧಾರ ಬದುಕನ್ನು ಬೆಳಗಿಸಬಹುದು.
ಆದ್ದರಿಂದ ಹದಿಹರೆಯ ವಯಸ್ಸಿನ ಆವೇಗಕ್ಕೆ ವಿವೇಕದ ಅಂಕುಶ ಅಗತ್ಯ. ವಿವೇಕ, ಸಂಯಮ ಮತ್ತು ಸಂಸ್ಕಾರದಿಂದ ಯುವ ಮನಸ್ಸುಗಳು ರೂಪುಗೊಂಡಾಗ ಮಾತ್ರ ವ್ಯಕ್ತಿ, ಕುಟುಂಬ ಮತ್ತು ಸಮಾಜ ಸುರಕ್ಷಿತವಾಗಿರುತ್ತದೆ. ಅಂತಹ ಸಮಾಜವೇ ಸುಸಂಸ್ಕೃತ ರಾಷ್ಟ್ರದ ಅಡಿಪಾಯವಾಗುತ್ತದೆ.
ಲೇಖನ : ಕಾಶಿಗೌ, ಲೇಖಕರು ಹಾಗೂ ಸಾಹಿತಿ. ವಿಶ್ರಾಂತ ಪ್ರಾಂಶುಪಾಲರು, ಮೈಸೂರು.



