ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಿನ ಹೆಮ್ಮೆಯ ಹಿರಿಯ ಚಿತ್ರ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ ಶಿವಪ್ರಸಾದ್(78) ಅವರು ಜೂನ್30 ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಲ್ಲಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಕೇವಲ ಕಲಾ ಕ್ಷೇತ್ರ ಮಾತ್ರವಲ್ಲದೆ, ರೈತ ಹಾಗೂ ದಲಿತ ಚಳವಳಿಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದ್ಅವರ ಅಗಲಿಕೆಗೆ ನಾಡಿನ ಗಣ್ಯರು, ಕಲಾವಿದರು ಹಾಗೂ ಕಲಾ ರಸಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂಜಿನಿಯರಿಂಗ್ ಬಿಟ್ಟು ಕಲೆಯತ್ತ ಮುಖ ಮಾಡಿದ್ದ ಪ್ರತಿಭೆ:
1947ರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಕೆ.ಟಿ ಶಿವಪ್ರಸಾದ್ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ ಅಪಾರ ಆಸಕ್ತಿ ಇತ್ತು. ಆದರೆ, ಅಂದಿನ ಕೌಟುಂಬಿಕ ಹಾಗೂ ಸಾಮಾಜಿಕ ಸನ್ನಿವೇಶಗಳಿಂದಾಗಿ ಅವರು ಇಂಜಿನಿಯರಿಂಗ್ಕಾಲೇಜಿಗೆ ಸೇರಬೇಕಾಗಿ ಬಂತು.
ಆದರೆ, ಮನಸ್ಸಿನಲ್ಲಿದ್ದ ಕಲೆಯ ಮೇಲಿನ ಅದಮ್ಯ ಒಲವು ಅವರನ್ನು ಸುಮ್ಮನಿರಗೊಡಲಿಲ್ಲ. ಪರಿಣಾಮವಾಗಿ, ಇಂಜಿನಿಯರಿಂಗ್ಅಧ್ಯಯನವನ್ನು ಅರ್ಧಕ್ಕೇ ಕೈಬಿಟ್ಟ ಅವರು ಮುಂಬೈನ ಪ್ರತಿಷ್ಠಿತ ಸರ್ಜೆ.ಜೆ ಸ್ಕೂಲ್ಆಫ್ಆರ್ಟ್ಸೇರಿದರು. ಅಲ್ಲಿ ಕಠಿಣ ಪರಿಶ್ರಮದಿಂದ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು, ಕಲಾ ಜಗತ್ತಿಗೆ ಅಧಿಕೃತವಾಗಿ ಹೆಜ್ಜೆ ಇಟ್ಟರು.
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ವಿಶಿಷ್ಟ ಶೈಲಿ:
ಶಿವಪ್ರಸಾದ್ಅವರ ವಿಶಿಷ್ಟ ಕಲಾ ಶೈಲಿಯನ್ನು ಬ್ರಿಟನ್ನ ಖ್ಯಾತ ಮಾಡರ್ನಿಸ್ಟ್ಕಲಾಕಾರ ಲುಸಿಯನ್ಫ್ರಾಯ್ಡ್ಅವರ ಶೈಲಿಗೆ ಹೋಲಿಸಲಾಗುತ್ತಿತ್ತು. ಇವರ ಅದ್ಭುತ ಕಲಾಕೃತಿಗಳು ಕೇವಲ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಅಪಾರ ಪ್ರಶಂಸೆ ಗಳಿಸಿದ್ದವು.
ರಾಷ್ಟ್ರೀಯ ಪ್ರದರ್ಶನಗಳು: 1976ರಿಂದಲೇ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇವರ ಹಲವಾರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಯಶಸ್ವಿಯಾಗಿ ನಡೆದಿದ್ದವು. ಮುಂಬೈನ ಜಹಾಂಗೀರ್ಆರ್ಟ್ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್ಟುಡೇ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರ ಕಲಾಕೃತಿಗಳು ಕಲಾ ರಸಿಕರ ಮನ ಗೆದ್ದಿದ್ದವು.
ಅಂತರರಾಷ್ಟ್ರೀಯ ಹೆಜ್ಜೆಗುರುತು: ಭೋಪಾಲ್ಬಿನ್ನಾಲೆ (1988), ಬಾಂಬೆ ಆರ್ಟ್ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್ಕಾಂಗ್ಗ್ಯಾಲರಿಗಳಲ್ಲಿ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡು ಜಾಗತಿಕವಾಗಿ ಮನ್ನಣೆ ಪಡೆದಿದ್ದವು.
ಪ್ರಶಸ್ತಿ-ಪುರಸ್ಕಾರಗಳು:
ಚಿತ್ರಕಲಾ ಕ್ಷೇತ್ರಕ್ಕೆ ಹಾಗೂ ಕಲಾ ಲೋಕಕ್ಕೆ ಕೆ.ಟಿ. ಶಿವಪ್ರಸಾದ್ಅವರು ನೀಡಿದ ಮಹೋನ್ನತ ಕೊಡುಗೆ ಮತ್ತು ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು 2001ರಲ್ಲಿ ಇವರಿಗೆ ಪ್ರತಿಷ್ಠಿತ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿತ್ತು. ಇದರೊಂದಿಗೆ ಇನ್ನು ಹತ್ತಾರು ಗೌರವಗಳು ಹಾಗೂ ಪುರಸ್ಕಾರಗಳು ಇವರ ಮುಡಿಗೇರಿದ್ದವು.
ತಮ್ಮ ಕುಂಚದ ಮೂಲಕ ಸಮಾಜದ ವಿವಿಧ ಆಯಾಮಗಳನ್ನು ಬಿಂಬಿಸುತ್ತಿದ್ದ, ಪ್ರಗತಿಪರ ಚಿಂತನೆಗಳ ಹೆಮ್ಮೆಯ ಕಲಾವಿದನ ಅಗಲಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.



