ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾ ಏನ್ ತಪ್ಪೇಳಿದ್ನೇ ಅದ್ಯಾಕಂಗ ಗಾಳಿ ಹೋದಂಗೆ ಹೋಗ್ತಿಯಾ..
ರತ್ನವ್ವ ಹೋದ ಜಾಡನ್ನೇ ನೋಡ್ತಾ ಗೌಡ. ಇನ್ನು ಮುಗೀತು ಮೂರು ದಿನ ಮಗ್ಲು ಸಿಗಾಕಿಲ್ಲ ನನ್ಗೆ.
ಉಸಿರಿಕೊಳ್ಳುತ್ತಲೇ ಬಡಪ್ಪನ ಕಡೆ ತಿರುಗಿ ಹೇಳೋ ಬಡಕಯ್ಯ ಅದೇನ್ ಅಂತ ನಿನ್ದು ಅಲ್ಲಿಗೆ ನಿಲ್ಲಿಸಿಬಿಟ್ಯಲ್ಲ. ನೀವು ಎಲ್ಲಿ ತಪ್ಪು ತಿಳ್ಕಂಡು ಬೈದು ಬಿಡ್ತೀರೋ ಅಂತ... ಬೊಗಳಿ ಹೋಗತ್ತಾ.... ಈಟೊತ್ಗೇ ಏನ್ ನಿಂದು? ಗೌಡ್ರು ಕೋಪಾನ ಕಂಡಿದ್ದ ಸೂರವ್ವ, ಗಂಡನ ಕಡೆ ತಿರುಗಿ ಹೇಳಬಾರದತ್ತ ನಿನ್ದೇನು ಅಂತ ಹಂಗ್ಯಾಕ ನುಲಿತಿದಿ.
ಸೂರವ್ವನ ಮುಖ ನೋಡ್ದವ್ನೇ ಬಡಪ್ಪ ಗೌಡನ ಕಡೆ ತಿರುಗಿ ದಿಟ್ಟಿಸಿದ. ಕೇಳುವ ಆತುರ ಗೌಡನಿಗೂ ಇತ್ತೇನೋ ಕುರ್ಚಿಯಿಂದ ಸ್ವಲ್ಪ ಮುಂದಕ್ಕೆ ಬಾಗಿ ಹೇಳುವಂತೆ ಸನ್ನೆ ಮಾಡಿದ.
ಬುದ್ದಿಯೋರ ಮುದ್ದಾಪುರದ ಗುಡ್ಡ ಯಳಗೋಡು ಎದುರಿನ ಸಣ್ಣಗುಡ್ಡದ ಮಧ್ಯೆ ಮಳೆಗಾಲ ಬಂತಂದ್ರೆ ಜಿನಿಗೆ ಹಳ್ಳ ತುಂಬಿ ಹರಿತೈತೆ. ಈಗಿನ ಮಳೆಗಾಲ್ದಾಗ ಯಾವ ಮಳೆ ಬರ್ತದೋ ಬರಲ್ವೋ, ಕಂಚೋಬಳಸ್ವಾಮಿಗೆ ಬಿಟ್ಟಿದ್ದು.
ಎಂತವೋ ಒಂದೆರಡು ಮಳೆ ತಗಲಿ ಆ ಹಳ್ಳ ಹರಿಯೋದಂತು ಖರೆ, ಹಿಂಗ ಮಾಡುವ ಅಂತೀವ್ನಿ. ಗೌಡನಿಗೂ ಉತ್ಸಹ ಬಂದಂತಾಗಿ ಕೇಳಲೇಬೇಕೆನಿಸಿತು. ಹೌದು ಎರಡು ಗುಡ್ಡಗಳ ಮಧ್ಯೆ ಜೋಗಿಕಾಡಿನ ಓಬಳದೇವ್ರಗುಡ್ಡದ ಜಿನಿಗಿ ಹಳ್ಳ ಹರಿತದ, ಅದಕ್ಕ ಏನು ಮಾಡ್ಬೇಕಂತ ಈಗ!. ನೀವು ಮನಸ್ಸು ಮಾಡಿದ್ರೆ ಇದು ಆಗೇ ಆಗ್ತದೆ ಬುದ್ದಿ.
ಜಿನಿಗಿ ಹಳ್ಳಕ್ಕೆ... ಬಲವಾದ ಅಡ್ಡಕಟ್ಟೆ ಹಾಕ್ಸಿದ್ರೆ... ಗುಡ್ಡಗಳು ಅಡ್ಡವಾಗಿ ನೀರು ಹಿಂದಕ್ಕೆ ಒದಿತದೆ, ನೆಲ ತನ್ಸು ಬಂದು ಸೇದೋಬಾವಿಗಳು, ಬೋರ್ ವೆಲ್ ಗಳಿಗೂ ಜಲ ಬರ್ತದೆ, ಪಕ್ಷಿ ದನ ಕರುಗಳಿಗೂ ಒಂದಿಷ್ಟು ಮೇವು ನೀರು ಆಯ್ತದೆ, ಹಳ್ಳದ ಬದ್ವು ಹೊಲ್ಗಳಿಗೂ ನೀರುಣ್ಸಿ ಒಂದಿಷ್ಟು ರಾಗಿ,ಜ್ವಾಳನೋ ಏನಾರ ಅಕ್ಕಡಿನೋ ಇಟ್ಕಬೋದು.
ಗುಳೇವು ಹೋಗೋ ಹಟ್ಟಿ ಜನಕ್ಕೂ ಇಲ್ಲೇ ಕೂಲಿ ಸಿಗ್ತವೆ. ದೊಡ್ಡ ಮನ್ಸು ಮಾಡಿ ಸಹಾಯ ಮಾಡಿ, ನೀವು ಕೊಟ್ಟಿದ್ನ ದುಡ್ಡು ತೀರಿಸ್ತೀವಿ. ಇಲ್ಲಾ ಅನ್ದೆ ನಡ್ಸಿಕೊಡಿ ಬುದ್ದೀ. ಕೃಷ್ಣೆಗೌಡನಿಗೆ ಇದ್ದಕ್ಕಿದ್ದಂತೇ ಕುಂಡೆಗೆ ಚೇಳೊಂದು ಕುಟುಕಿದಂತಾಗಿತ್ತು. ತಿರ್ಕಂಡು ತಿನ್ನವೆಲ್ಲಾ ಸಲಹೆ ಕೊಡಾಕ ಬಂದಾವೆ ಅಂದುಕೊಂಡವ್ನೆ ಸಿಡಿಮಿಡಿಯಾದ, ಕೋಪ ನೆತ್ತಿಗೇರಿತ್ತು. ಅಲ್ಲಲೇ ನನ್ನೇನು ನೋಟ್ ಪ್ರಿಂಟ್ ನ ಮಿಷನ್ ಇಟ್ಕೊಂಡಿದ್ದೀನಿ ಅಂತ ಮಾಡ್ಕಂಡಿದಿಯೇನೋ ಮಂಗ್ಯಾ, ನೀವು ಹೇಳೇಳ್ದಂಗೆ ನಿಮಗೆ ಕಟ್ಟೆ ಕಟ್ಟಿಸಿ ಕೊಡಾಕೆ.
ನಿಮ್ಮಜ್ಜನ ಗಂಟೇನಾದ್ರೂ ನನ್ನತ್ರ ಮಡ್ಗಿಯೇನಲೇ. ಮೊನ್ನೆ ಕಾಳಿಲ್ಲ ಅಂತ ಹೆಬ್ಬಟ್ಟು ಒತ್ತಿ ಎಣಿಸ್ಕಂಡು ಹೋಗಿದ್ದು ಮರ್ತೇನು. ಬೋಳಿಮಗನೆ ನಾಳೆ ಮುದ್ದಿಗೆ ಕೂಲಿನೋ..ನಾಲಿನೋ.. ಕೇಳ್ತಾನೆನೋ ಅಂದ್ಕಂಡ್ರೆ ಊರು ಉದ್ಧಾರ ಮಾಡಕ್ ಬಂದವ್ನೆ. ತಿಮ್ಮಾ ಹೊರಗ ತಳ್ಳೋ ಈ ನಾಯಿಗಳ್ನ, ಮುರುಕು ಗುಡುಸ್ಲಾಗಿದ್ರು ಅರಮನೆ ಕನಸಿಗೇನು ಕಡಿಮೆ ಇಲ್ಲ ಸೂಳೆಮಕ್ಳಿಗೆ...
ಮಾತಾಡ್ತಲೇ ಸಮಯ ವ್ಯರ್ಥವಾಗಿದ್ದಕ್ಕೆ ರೋಸಿದ ಕೃಷ್ಣೇಗೌಡ ಕುರ್ಚಿಯನ್ನ ಬದಿಗೆ ಸರಿಸಿ ಹೊರಗಡೆ ಸರಸರನೆ ನಡೆದ ಸೂರವ್ವ ಬಡಪ್ಪನ ಹೆಗಲಿಗೆ ಒರಗಿಕೊಂಡೇ ನಿಂತಿದ್ಲು ಗೌಡ ಹೋದ ದಿಕ್ಕನ್ನೇ ನೋಡ್ತಾ.
ಇದೆಲ್ಲವನ್ನೂ ಒಳಬಾಗ್ಲಿನಿಂದ್ಲೇ ಆಲಿಸ್ತಿದ್ದ ಗೌಡ್ತಿ ರತ್ನವ್ವ, ತಳ್ಳಲು ಮುಂದೆ ಬಂದ ತಿಮ್ಮನ್ನ ತಡೆದು, ವರಾಂಡಕ್ಕೆ ಬರುತ್ತಲೇ. ಬಡಕಣ್ಣಾ ಹಟ್ಟಿಯಾಗೆ ಯಾರಿಗೂ ಇಲ್ಲದು ನಿನಗ್ಯಾಕ್ ಬಂತೂ ಈ ಕನ್ಸು, ಬರಗಾಲ ಬಂದು ವರಗೈತೆ, ಬದುಕೋದು ಹೆಂಗೆ ಅಂತ ಯೋಚ್ಸೋದು ಬಿಟ್ಟು, ಗೌಡ್ರನ್ನ ಸಿಟ್ಟು ಮಾಡ್ಕೊಂಡು ಹೋಗೋ ಹಾಗೆ ಮಾಡ್ದೇ.
ಹೊಟ್ಟಿಗಿಷ್ಟು ರಾಗಿನೋ ಜ್ವಾಳನೋ ಕೇಳ್ತಿರೇನೋ ಅನ್ಕೊಂಡಿದ್ದೆ. ಬೇಜಾರು ಮಾಡ್ಕೋಬೇಡಿ, ಅವರು ಸಿಟ್ನಾಗೆ ಹಂಗೆಯ. ಆಗ್ಲೇ ನನ್ಗಂದದ್ದು ನೀವೇ ಕೇಳಿದ್ರಲ್ಲ, ಒಸಿ ತಡ್ಕಳಿ ರಾತ್ರಿದು ಏನಾರ ಉಳಿದೈತೋ ನೋಡಿ ತಿಮ್ಮನ್ತಾವ ಕಳಿಸ್ತೀನಿ ತಗೊಂಡು ಹೋಗುವ್ರಂತೆ. ಆಳು ತಿಮ್ಮನ್ನ ಕೂಗಿ ಕರೆಯುತ್ತಲೇ ಒಳ ನಡೆದ್ಲು ರತ್ನವ್ವ.
ಲೇಖನ: ಕುಮಾರ್ ಬಡಪ್ಪ, ಚಿತ್ರದುರ್ಗ. ನಾಳೆಗೆ.......


