ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಭಾರೀ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಹಲವು ಪ್ರಭಾವಿ ಹಾಗೂ ಹಿರಿಯ ನಾಯಕರಿಗೆ ಈ ಬಾರಿ ಶಾಕ್ ನೀಡಲಾಗಿದ್ದು, ಒಟ್ಟು 12 ಜನ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ.
ಹೈಕಮಾಂಡ್ನ ಈ ನಿರ್ಧಾರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಅಸಮಾಧಾನ ಭುಗಿಲೇಳುವ ಸ್ಪಷ್ಟ ಮುನ್ಸೂಚನೆ ಸಿಕ್ಕಿದೆ.
ಸಚಿವ ಸ್ಥಾನ ಕಳೆದುಕೊಂಡ 12 ಹಿರಿಯ ನಾಯಕರ ಪಟ್ಟಿ:
ಡಾ. ಹೆಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್, ಕೆ. ವೆಂಕಟೇಶ್, ಡಾ. ಎಂ.ಸಿ. ಸುಧಾಕರ್, ಶರಣಬಸಪ್ಪ ದರ್ಶನಾಪುರ, ಆರ್.ಬಿ. ತಿಮ್ಮಾಪುರ, ರಹೀಮ್ ಖಾನ್, ಎನ್.ಎಸ್. ಭೋಸರಾಜು, ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್.
ಹೈಕಮಾಂಡ್ ‘ಹೊಸ ಸಮೀಕರಣ’ ತಂತ್ರ:
ಪಕ್ಷದ ಸಂಘಟನೆ ಮತ್ತು ಸರ್ಕಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಬೃಹತ್ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.
ನಾಯಕರ ಮುಂದಿನ ನಡೆ ಏನು?
ಹಿರಿಯ ನಾಯಕರು ಹಾಗೂ ಪ್ರಭಾವಿ ಸಚಿವರಿಗೆ ಕೋಕ್ ನೀಡಲಾಗಿರುವುದರಿಂದ, ಸಚಿವ ಸ್ಥಾನ ವಂಚಿತರಾದ ಈ 12 ನಾಯಕರ ಮುಂದಿನ ರಾಜಕೀಯ ನಡೆ ಏನು ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.
ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ಅಧಿಕೃತ ಖಾತೆ ಹಂಚಿಕೆಯಾಗಲಿದ್ದು, ಪೂರ್ಣ ಚಿತ್ರಣ ಹೊರಬೀಳಲಿದೆ. ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ನಾಯಕರ ಅಸಮಾಧಾನ ಶಮನಗೊಳಿಸಲು ಪಕ್ಷದಲ್ಲಿ ಅವರಿಗೆ ಬೇರೆ ಕ್ರಿಯಾಶೀಲ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಯಿದೆ.



