ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕರ್ನಾಟಕ ರಾಜ್ಯದ ಹಿತದೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ನವದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.
ಕೇಂದ್ರ ಸರ್ಕಾರದ ಬಳಿ ಬಾಕಿ ಇರುವ ರಾಜ್ಯದ 13 ಪ್ರಮುಖ ಯೋಜನೆಗಳು, ಅನುದಾನಗಳು ಹಾಗೂ ವಿಧೇಯಕಗಳಿಗೆ ಶೀಘ್ರ ಅನುಮೋದನೆ ದೊರಕಿಸಿಕೊಡಲು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಶ್ರಮಿಸುವಂತೆ ಅವರು ಮನವಿ ಮಾಡಿದರು.
ಕೇಂದ್ರದ ಅಂಕಿತಕ್ಕೆ ಕಾಯುತ್ತಿರುವ 13 ಪ್ರಮುಖ ಯೋಜನೆಗಳು ಹಾಗೂ ಅನುದಾನಗಳು:
೧೫ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿ ಅನುದಾನ:
೨೦೨೫–೨೬ನೇ ಸಾಲಿಗೆ ಸಂಬಂಧಿಸಿದಂತೆ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹೨,೧೮೬.೨೦ ಕೋಟಿ ನೆರವು ಇಂದಿಗೂ ಬಾಕಿ ಉಳಿದಿದ್ದು, ರಾಜ್ಯದ ಎಲ್ಲಾ ಸ್ಪಷ್ಟನೆಗಳ ಹೊರತಾಗಿಯೂ ಬಿಡುಗಡೆಯಾಗಿಲ್ಲ.
ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ:
ಹೊಸಕೋಟೆ, ದೇವನಹಳ್ಳಿ, ರಾಮನಗರ ಸೇರಿದಂತೆ ೨೮೮ ಕಿ.ಮೀ. ಸಂಪರ್ಕಿಸುವ ಯೋಜನೆಗೆ ರಾಜ್ಯ ಸರ್ಕಾರ ಭೂಸ್ವಾಧೀನದ ಶೇ. ೩೦ ವೆಚ್ಚ ಮತ್ತು GST ವಿನಾಯಿತಿ ನೀಡಿದ್ದು, ಬಾಕಿ ೯,೬೧೩ ಕೋಟಿ ಮೌಲ್ಯದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಬೇಕಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆ:
೧೪೮ ಕಿ.ಮೀ. ಉದ್ದದ ಈ ಯೋಜನೆಗೆ ಅಗತ್ಯವಿರುವ ೧೫೩ ರೈಲ್ವೆ ಕೋಚ್ಗಳ ಖರೀದಿಗೆ ಕೇಂದ್ರ ರೈಲ್ವೇ ಇಲಾಖೆ ಹಾಗೂ ಸಚಿವ ಸಂಪುಟದ ಅಂತಿಮ ಅನುಮೋದನೆ ಕಾಯಲಾಗುತ್ತಿದೆ.
ರಾಯಚೂರಿನಲ್ಲಿ ‘ಏಮ್ಸ್’ ಸ್ಥಾಪನೆ:
ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೇವೆ ಬಲಪಡಿಸಲು ರಾಯಚೂರಿನಲ್ಲಿ AIIMS ಸ್ಥಾಪನೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಅನುಮೋದನೆ ಬಾಕಿ ಇದೆ.
ಕೋಲಾರ ರೈಲ್ವೇ ಕೋಚ್ ಕಾರ್ಖಾನೆ: ೫೦:೫೦ ವೆಚ್ಚ ಹಂಚಿಕೆಯಡಿ ರಾಜ್ಯ ಸರ್ಕಾರ ಭೂಮಿ ಹಸ್ತಾಂತರಿಸಿದ್ದರೂ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ.
ಹೆಚ್ಎಎಲ್ (HAL) ವಿಮಾನ ನಿಲ್ದಾಣ ಪುನರಾರಂಭ: ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯದ ನಿರ್ಧಾರ ನಿರೀಕ್ಷಿಸಲಾಗಿದೆ.
ಸಾಗರಮಾಲಾ ೨.೦ ಕಾರ್ಯಯೋಜನೆ:
ಕರಾವಳಿ ಪ್ರಗತಿ ಹಾಗೂ ಪ್ರವಾಸೋದ್ಯಮಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ ಸಲ್ಲಿಸಿರುವ ೧೬,೫೬೧ ಕೋಟಿ ಮೌಲ್ಯದ ೧೭೬ ಯೋಜನೆಗಳಿಗೆ ಕೇಂದ್ರದ ಸಮ್ಮತಿ ಅಗತ್ಯವಿದೆ.
ತೆಂಗು ಹಾಗೂ ಅಡಿಕೆ ಬೆಳೆಗಾರರಿಗೆ ನೆರವು:
ಕೀಟ ಬಾಧೆಯಿಂದ ಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಕೃಷಿ ಸಚಿವಾಲಯದಿಂದ ೧,೪೩೮.೫೯ ಕೋಟಿಗೂ ಅಧಿಕ ನೆರವು ಕೋರಲಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ:
CAMPA ಯೋಜನೆಯಡಿ ೩೦೦ ಕೋಟಿ ಅನುದಾನಕ್ಕಾಗಿ ಸಲ್ಲಿಕೆಯಾಗಿರುವ ಮನವಿಗೆ ಪರಿಸರ ಸಚಿವಾಲಯದ ಅನುಮೋದನೆ ಬೇಕಿದೆ.
ರಕ್ಷಣಾ ಇಲಾಖೆಯ ಭೂಮಿ ವರ್ಗಾವಣೆ:
ಬೆಂಗಳೂರಿನಲ್ಲಿ ೪೦ ಎಕರೆ ಹಾಗೂ ಬೆಳಗಾವಿಯಲ್ಲಿ ೬೬೮ ಎಕರೆ ರಕ್ಷಣಾ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಪ್ರಸ್ತಾವನೆ ಅನುಮೋದನೆಯಾಗಬೇಕಿದೆ.
ಹೈಸ್ಪೀಡ್ ರೈಲು ಮಾರ್ಗ: ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಮಾರ್ಗಗಳನ್ನು ಅತಿ ವೇಗದ ರೈಲು ಜಾಲಕ್ಕೆ ಸೇರಿಸಲು ಒಪ್ಪಿಗೆ ಕೋರಲಾಗಿದೆ.
ಪೊಲೀಸ್ ವ್ಯವಸ್ಥೆ ಆಧುನೀಕರಣ:
ICJS ೨.೦ ಯೋಜನೆಗೆ ೨೭೦.೭೧ ಕೋಟಿ ಹಾಗೂ ASUMP ಯೋಜನೆಗೆ ೨೮೦ ಕೋಟಿ ಅನುದಾನ ಗೃಹ ಸಚಿವಾಲಯದಿಂದ ಬಿಡುಗಡೆಯಾಗಬೇಕಿದೆ.
ಕೇಂದ್ರ ಗೃಹ ಸಚಿವಾಲಯದಲ್ಲಿ ಬಾಕಿ ಇರುವ ರಾಜ್ಯದ ವಿಧೇಯಕಗಳು:
೧. ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೧೫ ೨. ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ, ೨೦೨೪
೩. ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೨೫.
೪. ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೨೫
"ರಾಜ್ಯದ ಸಮಗ್ರ ವಿಕಾಸ ಮತ್ತು ಕನ್ನಡಿಗರ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಬಾಕಿ ಇರುವ ಈ ಎಲ್ಲಾ ಪ್ರಸ್ತಾವನೆಗಳಿಗೆ ಶೀಘ್ರ ಮಂಜೂರಾತಿ ಕೊಡಿಸಲು ಪಕ್ಷಾತೀತವಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ."
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ.



