ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನನ್ನ ನೆಚ್ಚಿನ ಓದುಗರುಗಳಿಗೆ ಗುರು ಪೌರ್ಣಮಿಯ ಶುಭಾಶಯಗಳು, ಇಂದಿನ ಈ ಸಂದರ್ಭದಲ್ಲಿ ನನ್ನ ನೆಚ್ಚಿನ ಗುರು ಹಿರಿಯರುಗಳನ್ನು ನೆನೆಯುತ್ತಾ....
2008-09ನೇ ಶೈಕ್ಷಣಿಕ ಸಾಲಿನಲ್ಲಿ *ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗ ನಗರದ ಐತಿಹಾಸಿಕ ಸರ್ಕಾರಿ ವಿಜ್ಞಾನ ಕಾಲೇಜಿನ ಸಿಬಿಜೆಎಡ್ ವಿಭಾಗಕ್ಕೆ ನಾನು ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಂಡೆ, ಆಗ ಬಣಕಾರ್ ಅವರು ಪದವಿ ವಿದ್ಯಾರ್ಥಿಗಳಿಗೆ ಸೂಕ್ಷ್ಮಾಣು ಜೀವಶಾಸ್ತ್ರ ಬೋಧನೆ ಮಾಡುತ್ತಿದ್ದರು.
ನಾನು ಸಿಬಿಜೆಎಡ್ ವಿದ್ಯಾರ್ಥಿಯಾಗಿದ್ದರಿಂದ ನನಗೆ ಅವರು ಅಷ್ಟೇನೂ ಪರಿಚಯವಿರಲಿಲ್ಲ ಆದರೆ ಬಿಎಂಬಿ ವಿಭಾಗದ ಸೂಕ್ಷ್ಮಾಣು ಜೀವಶಾಸ್ತ್ರದ ಕೆಲವು ವಿದ್ಯಾರ್ಥಿಗಳು ನನ್ನ ಸ್ನೇಹಿತರಾಗಿದ್ದರು. ಅವರುಗಳೊಂದಿಗೆ ನಾನು ಸೂಕ್ಷ್ಮಾಣು ಜೀವಶಾಸ್ತ್ರದ ಪ್ರಯೋಗಾಲಯಕ್ಕೆ ಹೋಗಿ ಬಂದು ಮಾಡುತ್ತಿದ್ದೆ ಆಗ ನಾನು ಬಣಕಾರ್ ಸರ್ ಅವರನ್ನು ನೋಡಿದ್ದೆ ಅಷ್ಟೇ.
ನಾನು ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವಾಗ ನಮ್ಮ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿ ಆರಂಭಗೊಂಡಿತು. ಅಲ್ಲಿ ಎಬಿಬಿ ಅವರು ವಿಭಾಗದ ಸಂಯೋಜಕರಾಗಿದ್ದರು. ನಂತರದ ದಿನಗಳಲ್ಲಿ ನನಗೆ ತಿಳಿಯಿತು ಶ್ರೀಯುತರು ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾರಂಭಕ್ಕೆ ಇವರೇ ಕಾರಣಕರ್ತರೆಂದು.
ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೊರತೆಯಾಗಬಾರದೆಂಬ ಮಹಾದಾಸೆಯಿಂದ ಒಂದು ಸಸ್ಯಶಾಸ್ತ್ರ ಎಂಬ ವಿಭಾಗವನ್ನೇ ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಗೆ ಇವರ ಕೊಡುಗೆ ಅಪಾರವಾದದ್ದು.
ನನ್ನ ಪದವಿ ವ್ಯಾಸಂಗ ಮುಗಿದ ನಂತರ ಸ್ನಾತಕೋತ್ತರ ಪದವಿಗೆ ಇಂದು ಇದೇ ಕಾಲೇಜಿನ ಸಸ್ಯಶಾಸ್ತ್ರ ವಿಭಾಗಕ್ಕೆ ಸೇರಿಕೊಂಡೆ. ಆಗ ನಾನು ಎಬಿಬಿ ಅವರ ವಿದ್ಯಾರ್ಥಿಯಾದೆ. ಇದೇ ಕಾಲೇಜಿನಲ್ಲಿ ನಾನು ಪದವಿ ಮುಗಿಸಿದ್ದರಿಂದ ಗುರುಗಳ ಸ್ವಲ್ಪ ಹಿಂದಿನ ಪರಿಚಯವಿತ್ತು.
ನಾನೇನು ಅಂತಹ ರ್ಯಾಂಕ್ ಪಡೆಯುವ ವಿದ್ಯಾರ್ಥಿಯಾಗಿರಲಿಲ್ಲ ಕೇವಲ ಹಾಜರಾತಿಗೆ ಸಲುವಾಗಿ ಮಾತ್ರ ಎಬಿಬಿ ಅವರ ತರಗತಿಗಳಿಗೆ ಹಾಜರಾಗುತ್ತಿದ್ದೆ ಆಗ ನನಗೆ ತಿಳಿಯತು ಗುರುಗಳ ಜ್ಞಾನ ಭಂಡಾರ.
ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ನಿರಂತರವಾಗಿ ಇವರ ತರಗತಿಗೆ ಹಾಜರಾಗುತ್ತಿದ್ದರು ಕಾರಣ ಇವರ ಬೋಧನಾ ಪದ್ಧತಿ, ಶೈಲಿ ಹಾಗೂ ವಿಷಯ ವಿಶ್ಲೇಷಣೆ ಎಲ್ಲಾ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗಿತ್ತು.
ಪಾಠ ಬೋಧನೆಯ ಜೊತೆಗೆ ವಿಭಾಗದ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಾ ಕಿರಿಯ ಹಾಗೂ ಅತಿಥಿ ಉಪನ್ಯಾಸಕರಿಗೆ ಎಬಿಬಿ ಅವರು ಸ್ಪೂರ್ತಿಯಾಗಿದ್ದರು.
ಪಠ್ಯಕ್ರಮದಲ್ಲಿ ಯಾವುದೇ ಕೊರತೆಯಾಗಬಾರದೆಂಬ ಹಿತದೃಷ್ಟಿಯಿಂದ ಭಾನುವಾರಗಳಂದು ತರಗತಿ ತೆಗೆದುಕೊಂಡು ಎಲ್ಲಾ ಸೆಮಿಸ್ಟರ್ಗಳ ಎಲ್ಲಾ ಪಠ್ಯಕ್ರಮಗಳನ್ನು ಪೂರೈಸಿ, ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಕಲಿಕೆಗೆ ಸಹಕರಿಸುತ್ತಿದ್ದರು.
ಮತ್ತೊಂದು ಪ್ರಮುಖ ವಿಷಯವೇನೆಂದರೆ ನಾನು ಇವರಲ್ಲಿ ಕಂಡದ್ದು ಮತ್ತು ಕಲಿತದ್ದು *ಕರ್ತವ್ಯ ನಿಷ್ಠೆ, ಶಿಸ್ತು ಮತ್ತು ಸಮಯ ಪಾಲನೆ* ಅಷ್ಟರಮಟ್ಟಿಗೆ ಶಿಸ್ತಿನ ವ್ಯಕ್ತಿ.
ನನ್ನ ಈ ಉಪನ್ಯಾಸಕ ವೃತ್ತಿಗೆ ನೀವು ಸಹ ಸ್ಪೂರ್ತಿಯಾಗಿದ್ದೀರಿ. ಒಂದು ತರಗತಿಯ ಕೊಠಡಿ ಉತ್ತಮ ಸಮಾಜವನ್ನು ನಿರ್ಮಿಸುತ್ತದೆ ಎಂದು ನಾನು ಕೇಳಿದ್ದೆ ಅದು ನಿಮ್ಮಂತ ಗುರು ವೃಂದದವರಿಂದ ಮಾತ್ರ ಸಾಧ್ಯ ಎಂಬುದು ನನ್ನ ಅಭಿಪ್ರಾಯ.
ನನ್ನ ಎಲ್ಲಾ ಸಹಪಾಠಿಗಳನ್ನು ಮತ್ತು ನನ್ನ ಸ್ನಾತಕೋತ್ತರ ಶಿಕ್ಷಣದ ನೆಚ್ಚಿನ ಗುರುಗಳಾದ ಪ್ರೊ. ರಂಗಸ್ವಾಮಿ, ಡಾ. ಲಿಂಗಣ್ಣಯ್ಯ, ಡಾ. ರಮೇಶ್, ಡಾ. ಜ್ಯೋತಿ, ಡಾ. ಅರುಣ ಇವರುಗಳನ್ನು ಸಹ ಈ ಗುರುಪೂರ್ಣಮಿಯ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ.
ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿರುವ ನಮ್ಮೆಲ್ಲರ ಗುರುಗಳ ಜೀವನ ಸುಖಕರವಾಗಿರಲಿ ಎಂದು ಬಯಸುತ್ತೇನೆ.
ಲೇಖನ: ವೇಣುಕುಮಾರ್. ಎಂ, ಭರಂಪುರ.



