ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಧ್ಯಪ್ರದೇಶದ ರಾಜ್ಯಸಭೆ ಚುನಾವಣೆಯ ನಾಮಪತ್ರ ತಿರಸ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನೆಡೆಯಾಗಿದೆ. ನಾಮಪತ್ರ ತಿರಸ್ಕೃತವಾದ ಬಳಿಕ ಸಾಮಾನ್ಯವಾಗಿ ಪರಿಹಾರಕ್ಕಾಗಿ ಚುನಾವಣಾ ಆಯೋಗದ ಮೊರೆ ಹೋಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ಶುಕ್ರವಾರ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್ ಚಂದೂರ್ಕರ್ ಅವರಿದ್ದ ಪೀಠವು, "ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವೇ?" ಎಂದು ಪ್ರಶ್ನಿಸಿದೆ. ಅಲ್ಲದೆ, ಇದೇ ರೀತಿಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ಮಧ್ಯಪ್ರವೇಶಿಸಿರುವ ಯಾವುದಾದರೂ ಪೂರ್ವ ನಿದರ್ಶನಗಳಿವೆಯೇ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿದೆ.
"ನಾಮಪತ್ರ ತಿರಸ್ಕರಿಸಿದ ನಿರ್ಧಾರ ಎಷ್ಟೇ ತಪ್ಪಾಗಿದ್ದರೂ, ಅದರ ವಿರುದ್ಧದ ಪರಿಹಾರ ಸಾಮಾನ್ಯವಾಗಿ ಬೇರೆ ವೇದಿಕೆಯಲ್ಲಿ ದೊರೆಯುತ್ತದೆ. ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಿರುವ ಯಾವುದೇ ತೀರ್ಪು ಇದೆಯೇ?" ಎಂದು ನ್ಯಾಯಪೀಠವು ಪ್ರಶ್ನಿಸಿತು.
ವಾದ-ಪ್ರತಿವಾದಗಳೇನು?:
ಕಾಂಗ್ರೆಸ್ ಪರ ವಕೀಲರ ವಾದ: ನಟರಾಜನ್ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, "ಅಭ್ಯರ್ಥಿಗಳು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಪಡುವ ಅಪರಾಧ ಪ್ರಕರಣಗಳ ವಿವರಗಳನ್ನು ಮಾತ್ರ ಬಹಿರಂಗಪಡಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ ಸಮನ್ಸ್ಜಾರಿಯಾಗಿದ್ದು, ನಾಮಪತ್ರ ತಿರಸ್ಕರಿಸಿರುವುದು ಸರಿಯಲ್ಲ" ಎಂದು ವಾದಿಸಿದರು.
ರಿಟರ್ನಿಂಗ್ ಅಧಿಕಾರಿಯ ಸ್ಪಷ್ಟನೆ: ರಿಟರ್ನಿಂಗ್ಅಧಿಕಾರಿ ಅರವಿಂದ್ ಶರ್ಮಾ ಅವರು ತಮ್ಮ ಆದೇಶದಲ್ಲಿ, ನಾಮಪತ್ರದೊಂದಿಗೆ ಸಲ್ಲಿಸಲಾದ ಫಾರ್ಮ್26 ಅಫಿಡವಿಟ್ನಲ್ಲಿ ನ್ಯಾಯಾಲಯದ ದೂರಿನ ಮಾಹಿತಿಯನ್ನು ನಟರಾಜನ್ಉಲ್ಲೇಖಿಸಿಲ್ಲ. ಅವರು ಅಪೂರ್ಣ ಅಫಿಡವಿಟ್ಸಲ್ಲಿಸಿರುವುದರಿಂದ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ತಿರಸ್ಕಾರಕ್ಕೆ ಕಾರಣವಾದ ದೂರು:
ಮಧ್ಯಪ್ರದೇಶ ವಿಧಾನಸಭೆಯ ಮೂಲಗಳ ಪ್ರಕಾರ, ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿಯನ್ನು ನಟರಾಜನ್ ಅವರು ಚುನಾವಣಾ ಅಫಿಡವಿಟ್ನಲ್ಲಿ ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕೆವಾತ್ ದೂರು ದಾಖಲಿಸಿದ್ದರು. ಜನಪ್ರತಿನಿಧಿತ್ವ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ಪ್ರಕರಣದ ಮಾಹಿತಿಯನ್ನು ಮರೆಮಾಚಿದ ಕಾರಣಕ್ಕೆ, ಈ ದೂರಿನ ಆಧಾರದ ಮೇಲೆ ನಾಮಪತ್ರ ಪರಿಶೀಲನೆ ವೇಳೆ ರಿಟರ್ನಿಂಗ್ ಅಧಿಕಾರಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.



