ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಚಲನಚಿತ್ರರಂಗವನ್ನು ವಿದ್ಯಾವಂತ ವರ್ಗ ಸರಿಯಾಗಿ ಅಧ್ಯಯನ ಮಾಡಿಲ್ಲ ಮತ್ತು ಅದರಿಂದಲೇ ಈ ಕ್ಷೇತ್ರ ವಿಸ್ತಾರವಾಗಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ಹಿರಿಯ ಸಾಹಿತಿ, ನಿರ್ದೇಶಕ ಡಾ.ಕೆ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
ನಗರದಲ್ಲಿ ಡಿ.ಆರ್.ನಾಗರಾಜ್ ಬಳಗದ ವತಿಯಿಂದ ಆಯೋಜಿಸಿದ್ದ 'ಡಿ.ಆರ್.ಎನ್ ತಿಂಗಳ ಮಾತುಕತೆ' ಕಾರ್ಯಕ್ರಮದಲ್ಲಿ 'ಬಡವರ ರಾಜಕುಮಾರ' ಪುಸ್ತಕದ ಲೇಖಕ ಮಂಜುನಾಥ ಅದ್ದೆ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ಕನ್ನಡ ಚಿತ್ರರಂಗ ಕುರಿತು ಶೈಕ್ಷಣಿಕ ದೃಷ್ಟಿಕೋನದಿಂದ ನಡೆದಿರುವ ಸಂಶೋಧನೆ ಕಡಿಮೆ, ಯು.ಆರ್.ಅನಂತಮೂರ್ತಿ, ಲಂಕೇಶ್, ಬರಗೂರು ರಾಮಚಂದ್ರಪ್ಪ ಅವರಂತಹ ಸಾಹಿತಿಗಳು ಮಾತ್ರ ಇದನ್ನು ಗಂಭೀರವಾಗಿ ಅಧ್ಯಯನ ಮಾಡಿ ಜನರಿಗೆ ತಲುಪಿಸಿದ್ದರು. ಆದರೆ, ಕನ್ನಡದ ಬುದ್ಧಿಜೀವಿ ವರ್ಗ ಯಾವಾಗಲೂ ಸಿನಿಮಾ ರಂಗವನ್ನು ಉಪೇಕ್ಷಿಸಿದೆ. ಅಂತಹ ಸಂದರ್ಭದಲ್ಲಿ ಕನ್ನಡದಲ್ಲೇ ಮೊದಲ ಬಾರಿಗೆ ಸಿನಿಮಾ ಮೀಮಾಂಸೆಯನ್ನು ಬರೆದವರು ಡಿ.ಆರ್. ನಾಗರಾಜ್ ಎಂದು ಅಭಿಪ್ರಾಯಪಟ್ಟರು.
ಸಾಮಾನ್ಯವಾಗಿ ಆರ್ಥಿಕ ಸಂಪನ್ಮೂಲವಿಲ್ಲದವರನ್ನು ಬಡವರು ಈ ಎನ್ನಲಾಗುತ್ತದೆ. ಆದರೆ, 'ಬಡವರ ರಾಜಕುಮಾರ' ಪುಸ್ತಕದಲ್ಲಿ ಬಡವರನ್ನು ಭಿನ್ನ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಬದುಕಿನ ಘನತೆಯನ್ನು ಉಳಿಸಿಕೊಂಡು ಮಾನವ ಕುಲಕ್ಕೆ ಒಳಿತನ್ನು ಬಯಸುವುದೇ ಮಾನವೀಯತೆ ಎನ್ನುವುದನ್ನು ರಾಜ್ ಕುಮಾರ್ ತಮ್ಮ ಪಾತ್ರಗಳ ಮೂಲಕ ಸಾರಿದ್ದಾರೆ. ಅಲ್ಲದೆ, ಬದಲಾಗುತ್ತಿದ್ದ ಕಾಲಕ್ಕನುಗುಣವಾಗಿ ತಮ್ಮ ಪಾತ್ರಗಳನ್ನು ಉನ್ನತೀಕರಿಸಿಕೊಂಡವರು ರಾಜ್ ಕುಮಾರ್. ಈ ದೃಷ್ಟಿಯಿಂದ 'ಬೇಡರ ಕಣ್ಣಪ್ಪ' ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿತು ಎಂದರು.
ಬಸವಣ್ಣ, ಬುದ್ಧ, ಗಾಂಧಿ, ಅಂಬೇಡ್ಕರ್ ಅವರುಗಳು ಜನರೊಂದಿಗೆ ಬೆರೆತು ಬದುಕಿದವರು. ಹಾಗಾಗಿಯೇ ಜನರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು ಮತ್ತು ಅವರೊಂದಿಗೆ ಸುಲಭವಾಗಿ ಜನರು ಬೆರೆಯಲು
ಸಾಧ್ಯವಾಯಿತು. ಇದರಿಂದಲೇ ಇಂದಿಗೂ ಈ ಮಹನೀಯರು ಜನರ ಸ್ಮರಣೆಯಲ್ಲಿ ಉಳಿದಿದ್ದಾರೆ. ಅದೇ ರೀತಿ ರಾಜ್ಕುಮಾರ್ ಕೂಡ ಜನರೊಂದಿಗೆ ಬೆರೆತಿದ್ದರಿಂದಲೇ ಅವರ ಚಿತ್ರಗಳು ಇಂದಿಗೂ ಜನಪ್ರಿಯವಾಗಿ ಉಳಿದುಕೊಂಡಿವೆ ಎಂದು ವಿಶ್ಲೇಷಿಸಿದರು.
ವಿಮರ್ಶಕ ಡಾ.ಎಚ್.ಡಿ. ಉಮಾಶಂಕರ್ ಮಾತನಾಡಿ, ಸಮಾಜ ವಿಘಟನೆಯಾಗುವ ಸಂದರ್ಭದಲ್ಲಿ ತೆರೆಕಂಡ 'ಬಂಗಾರದ ಮನುಷ್ಯ' ಚಿತ್ರವು ಮನುಷ್ಯರನ್ನು ಮತ್ತು ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿತು. ಬಡವರ ರಾಜಕುಮಾರ ಪುಸ್ತಕವು ಶೂದ್ರ ರಾಜಕಾರಣವನ್ನು ಮತ್ತೆ ನೆನಪಿಸುವ ಕೃತಿಯಾಗಿದೆ, ಭಾರತ ಮತ್ತು ಕನ್ನಡ ಚಲನಚಿತ್ರರಂಗ ಬೆಳೆದು ಬಂದ ಹಾದಿಯನ್ನು ಉತ್ತಮವಾಗಿ ನಿರೂಪಿಸುವ ಕೃತಿ ಇದಾಗಿದೆ ಎಂದರು.
ಕೃತಿಯ ಲೇಖಕ ಮಂಜುನಾಥ ಅದ್ದೆ ಮಾತನಾಡಿ, ಹಲವಾರು ಬಡವರು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಾಧ್ಯವಾಗುವ ಮಾರ್ಗದರ್ಶಿಯಾಗಿರುವ ಚಿತ್ರಗಳನ್ನು ರಾಜ್ ಕುಮಾರ್ ನಾಡಿಗೆ ನೀಡಿದ್ದಾರೆ. ಅವರಿಗೆ ಬಡತನವೇ ಅನೇಕ ಬದುಕಿನ ಪಾಠಗಳನ್ನು ಕಲಿಸಿತ್ತು. ಹಾಗಾಗಿಯೇ ಅವರು 'ಬಡವರ ರಾಜಕುಮಾರ'ನಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಕೆ.ವೈ. ನಾರಾಯಣಸ್ವಾಮಿ, ಚಿಂತಕ ಯದುನಂದನ್ ಕಿಲಾರ, ಸಾಹಿತಿಗಳಾದ ನವೀನ್ ಸೂರಿಂಜೆ, ವಿಕಾಸ್ ಮೌರ್ಯ, ವಿ.ಆರ್.ಕಾರ್ಪೆಂಟರ್, ಕನ್ನಡಪರ ಹೋರಾಟಗಾರ ಹರೀಶ್ ಬೈರಪ್ಪ, ನಿರ್ದೇಶಕರಾದ ಉದಯ್ ಸೋಸಲೆ, ಟಿ.ಎಚ್.ಲವಕುಮಾರ್, ಡಾ.ಡಿ.ಆರ್. ನಾಗರಾಜ್ ಬಳಗದ ಕಾರ್ಯದರ್ಶಿ ದಯಾನಂದಗೌಡ, ಪ್ರಕಾಶ್ ಮಂಟೇದ, ಕೊನಘಟ್ಟ ವೆಂಕಟೇಶ್, ಹೇಮಂತ್ ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.



