ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತದ ಯೋಗ ಹಾಗು ಆಯುರ್ವೇದದ ವಿಷಯದ ಬಗ್ಗೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಜಗತ್ತಿನ ಹಲವು ದೇಶಗಳು ಇವನ್ನು ಸ್ವೀಕರಿಸಿವೆ. ಇದೇ ರೀತಿ ವಾಸ್ತು ಶಾಸ್ತ್ರವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಮಂಗಲ ಗೇಟ್ ನಲ್ಲಿ ಎಲ್. ಜಿ.ಮಹಲ್ ನಲ್ಲಿ ನಡೆದ ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತುಶಾಸ್ತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಮನೆಯಲ್ಲಿ ಗಾಳಿ ಬೆಳಕು ಸೂರ್ಯನ ಕಿರಣ ಹೇಗೆ ಪ್ರವೇಶಿಸಬೇಕು.
ಇತ್ಯಾದಿ ಮಹತ್ವದ ವಿಚಾರಗಳನ್ನು ಈ ಹಿಂದೆಯೇ ನಮ್ಮ ಋಷಿಮುನಿಗಳು ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆಯೇ ವಾಸ್ತು ಶಾಸ್ತ್ರ ನಿಂತಿದೆ. ಯುವಪೀಳಿಗೆ ಆಧುನಿಕ ತಂತ್ರಜ್ಞಾನವನ್ನು ಸಂಪರ್ಕವಾಗಿ ಬಳಸಿಕೊಂಡು ಜತೆಗೆ ನಮ್ಮ ವಾಸ್ತುಶಾಸ್ತ್ರದ ಬಗ್ಗೆಯೂ ಅರಿವು, ಅನುಕೂಲವಾಗುವಂತೆ ಮಾಡಬೇಕು ಎಂದರು.
ಪೂತಮಾನಸ ಜ್ಯೋತಿಷ್ಯಶಾಸ್ತ್ರದ ವ್ಯವಸ್ಥಾಪಕ ಡಾ.ಕೆ.ಗಿರೀಶ್ ಮಾತನಾಡಿ, ಜ್ಯೋತಿಷ್ಯಶಾಸ್ತ್ರ ಎನ್ನುವುದು ತಾಯಿ ಇದ್ದಂತೆ, ವಾಸ್ತು ಅದರ ಮಗುವಿನಂತೆ. ತಾಯಿ ಹಾಗೂ ಮಗುವಿನ ಸಂಬಂಧಕ್ಕೆ ಎಷ್ಟು ಮಹತ್ವವಿದೆಯೋ ಅದೇ ರೀತಿ ಜ್ಯೋತಿಷ್ಯ ಹಾಗೂ ವಾಸ್ತುವಿನ ಸಂಬಂಧ ಮಹತ್ವದ್ದಾಗಿದೆ. ಮನೆಯ ವಾಸ್ತು ಸರಿಯಾಗಿದ್ದರೆ ಮನೆಗಳಲ್ಲಿ ಆರೋಗ್ಯ, ಯಶಸ್ಸು ನೆಮ್ಮದಿ ನೆಲೆಸಿರುತ್ತದೆ. ವಾಸ್ತುಶಾಸ್ತ್ರ ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ. ಸೂಕ್ತವಾಗಿ ವಾಸ್ತುವನ್ನು ಅಳವಡಿಸಿ ಕೊಂಡರೆ ಎಲ್ಲರಿಗೂ ಯಶಸ್ಸು ಒಲಿಯುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಗಜೇಂದ್ರಬಾಬು, ಶಾಸಕ ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಿ.ಚುಂಚೇಗೌಡ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಟಿ.ವೆಂಕಟರಮಣಯ್ಯ, ಬಿಜೆಪಿ ಮುಖಂಡ ಮರಿಸ್ವಾಮಿ, ಕೆಐಎಂಎಸ್ ಮಾಜಿ ಅಧ್ಯಕ್ಷ ಮುನೇಗೌಡ, ಜ್ಯೋತಿಷಿಗಳಾದ ದಿನೇಶ್ ಗುರೂಜಿ, ಡಾ.ಹರೀದಾಸ್, ಡಾ.ಅನಂತ ರಾಘವನ್, ಕುಮಾರ್ ವಶಿಷ್ಟ ಹಾಜರಿದ್ದರು.



