ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆಯಲ್ಲಿ ಭದ್ರಾ ಜಲಾಶಯದ ನೀರಿನ ವಿಚಾರವಾಗಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗೆ 3 ಟಿಎಂಸಿ ನೀರು ಹರಿಸಿದ್ದನ್ನು ವಿರೋಧಿಸಿ ಮತ್ತು ಅಚ್ಚುಕಟ್ಟು ಭಾಗದ ನಾಲೆಗಳಿಗೆ ತಕ್ಷಣ ನೀರು ಬಿಡುವಂತೆ ಆಗ್ರಹಿಸಿ ರೈತರು ನಡೆಸಿದ ಪ್ರತಿಭಟನೆಯು ಹಿಂಸಾಚಾರ ಹಾಗೂ ವಾಗ್ವಾದಕ್ಕೆ ಸಾಕ್ಷಿಯಾಗಿದೆ. ಈ ಹೋರಾಟದ ಕಾವು ಜಿಲ್ಲೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರೈತರ ಆಕ್ರೋಶಕ್ಕೆ ಅಸಲಿ ಕಾರಣವೇನು?:
ಮಳೆ ಇಲ್ಲದೆ ತೆಂಗು, ಕಬ್ಬು ಹಾಗೂ ಅಡಿಕೆ ತೋಟಗಳು ಒಣಗಿ ಹೋಗುತ್ತಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಐಸಿಸಿ ಸಭೆ ನಡೆಸದೆ ಕೇವಲ ಮೇಲ್ದಂಡೆ ಯೋಜನೆಗೆ ನೀರು ಹರಿಸಿರುವ ಸರ್ಕಾರ, ಅಚ್ಚುಕಟ್ಟು ಪ್ರದೇಶದ ರೈತರಿಗೆ ದ್ರೋಹ ಎಸಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 48 ತಡೆದು ಉಗ್ರ ಪ್ರತಿಭಟನೆ ನಡೆಸಿದ ರೈತರು, ತುಂಗಾ ನಡಿಯಿಂದ ನೀರು ಲಿಫ್ಟ್ ಮಾಡುವ ಕಾಮಗಾರಿಗೆ ಹಣ ಬಿಡುಗಡೆ ಮಾಡದೆ ಸರ್ಕಾರ ಘೋರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ರಸ್ತೆ ತಡೆ ಹಾಗೂ ಪೊಲೀಸ್-ರೈತರ ಮಾತಿನ ಚಕಮಕಿ:
ಸರ್ವೀಸ್ ರಸ್ತೆಯಲ್ಲಿ ಒಲೆ ಹಚ್ಚಿ ಅಡುಗೆ ಮಾಡಿ ಪ್ರತಿಭಟನೆ ಮುಂದುವರಿಸಲು ಮುಂದಾದ ರೈತರನ್ನು ಪೊಲೀಸರು ತಡೆದಾಗ ಮಾತಿನ ಚಕಮಕಿ ತಾರಕಕ್ಕೇರಿತು. "ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸಲಾಗುತ್ತಿದೆ" ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪೊಲೀಸರ ವಿರುದ್ಧ ಗುಡುಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಜಿ ಸಚಿವರಾದ ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಬಿ.ಜಿ. ಅಜಯ್ ಕುಮಾರ್ ಸೇರಿದಂತೆ ಪ್ರಮುಖ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಉಂಟಾದ ತಳ್ಳಾಟ-ನೂಕಾಟದಲ್ಲಿ ರೈತ ಶಿವಯೋಗಿ ಹಾಗೂ ಪಿಐ ಸುರೇಶ್ ಸಗರಿ ಅವರಿಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಯಿತು. ಗಾಯಗೊಂಡ ರೈತನನ್ನು ಅದೇ ಸ್ಥಿತಿಯಲ್ಲಿ ಪೊಲೀಸ್ ವಾಹನದಲ್ಲಿ ಕರೆದೊಯ್ದದ್ದು ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. "ಜಿಲ್ಲಾಡಳಿತ ನಮ್ಮ ಕಣ್ಣಿನಲ್ಲಿ ನೀರು ಬರುತ್ತದೆ ಎಂದುಕೊಂಡಿದ್ದೆವು, ಆದರೆ ರಕ್ತ ತರಿಸಿದೆ" ಎಂದು ರೈತರು ಕಣ್ಣೀರಿಟ್ಟರು.
ರೈತ ಒಕ್ಕೂಟಗಳ ನಡುವೆಯೇ ಭಿನ್ನ ನಿಲುವು:
ಒಂದೆಡೆ ನೀರು ಬಿಡುವಂತೆ ಉಗ್ರ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದ ಭಾರತೀಯ ರೈತ ಒಕ್ಕೂಟ ಬೇರೆಯೇ ವರಸೆ ತೆಗೆದುಕೊಂಡಿದೆ. "ಈಗಾಗಲೇ ಸಮಯ ಮೀರಿ ಹೋಗಿದೆ, ಭತ್ತದ ಸಸಿಗಳು ಒಣಗಿ ನಾಟಿ ಮಾಡಲು ಆಗುವುದಿಲ್ಲ. ಸುಮ್ಮನೇ ನೀರು ಪೋಲು ಮಾಡುವುದು ಬೇಡ, ಈಗ ನೀರು ಹರಿಸುವುದನ್ನು ಬಿಟ್ಟು 120 ದಿನಗಳ ಕಾಲ ಬೇಸಿಗೆಗೆ ನೀರು ಉಳಿಸಿ ಕೊಡಿ" ಎಂದು ರೇಣುಕಾಚಾರ್ಯ ಬಣಕ್ಕೆ ಟಾಂಗ್ ನೀಡಿದ್ದಾರೆ. ಒಕ್ಕೂಟಗಳ ಈ ಭಿನ್ನಾಭಿಪ್ರಾಯ ದಾವಣಗೆರೆ ರೈತರ ಪಾಲಿಗೆ 'ಗಂಡ ಹೆಂಡತಿಯರ ಜಗಳದಲ್ಲಿ ಕೂಸು ಬಡವಾಯಿತು' ಎನ್ನುವಂತಾಗಿದೆ.
ಅಧಿಕಾರಿಗಳ ಸ್ಪಷ್ಟನೆ: ಹಲ್ಲೆ ಆರೋಪ ಹಾಗೂ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಎಎಸ್ಪಿ ಪರಮೇಶ್ವರ್ ಹೆಗಡೆ, "ಕಾನೂನು ಮತ್ತು ಸುರಕ್ಷತೆಯ ದೃಷ್ಟಿಕೋನದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದೇವೆ. ಈ ವೇಳೆ ಕೆಲವು ಅಚಾತುರ್ಯಗಳು ಅಥವಾ ಸಮಸ್ಯೆಗಳಾಗಿರಬಹುದು. ನಾವು ಶಾಂತಿಯುತ ಪ್ರತಿಭಟನೆ ನಡೆಸುವಂತೆ ಮಾತ್ರ ಸೂಚಿಸಿದ್ದೆವು" ಎಂದು ತಿಳಿಸಿದ್ದಾರೆ.
ಸದ್ಯ ಜಲಾಶಯದಲ್ಲಿ 175 ಅಡಿಯಷ್ಟು ನೀರಿದ್ದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸದಿರುವುದು ಹಾಗೂ ರೈತ ಮುಖಂಡರ ಬಂಧನದಿಂದ ದಾವಣಗೆರೆಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.




