ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಶಿವಗಂಗದ ಜಯಣ್ಣ ಅವರು ಕಾಡಿನ ಮಧ್ಯೆ ಕಳೆದುಹೋಗಿದ್ದ ಪುರಾತನ ಲಿಂಗವನ್ನು ಗುರುತಿಸಿ, ಭಕ್ತಿಭಾವದಿಂದ ರಾಮೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡುವ ಮೂಲಕ 'ರಾಮೇಶ್ವರ ಜಯಣ್ಣ' ಎಂದೇ ಪ್ರಸಿದ್ಧರಾದರೆಂದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ನುಡಿದರು.
ತಾಲ್ಲೂಕಿನ ಶಿವಗಂಗ ಗ್ರಾಮದಲ್ಲಿ ರಾಮೇಶ್ವರ ದೇವಸ್ಥಾನ ನಿರ್ಮಾಣವಾಗಿ 50 ವರ್ಷ ತುಂಬಿದ ಪ್ರಯುಕ್ತ ಜಯಣ್ಣನವರ ಮನೆತನದವರು, ಗ್ರಾಮಸ್ಥರು ಹಾಗೂ ಮಹಾದೇವಪುರದ ಸಾರ್ವಜನಿಕರು ಆಯೋಜಿಸಿದ್ದ ದೇವಸ್ಥಾನದ 'ಸುವರ್ಣ ಮಹೋತ್ಸವ' ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ರಾಮೇಶ್ವರ ಜಯಣ್ಣನವರು ಚಿತ್ರದುರ್ಗದ ಮುರುಘರಾಜೇಂದ್ರ ಮಠದ ನಿಷ್ಠಾವಂತ ಭಕ್ತರಾಗಿ, ಸಮಾಜ ಸೇವಕರಾಗಿ, ಕೊಡುಗೈ ದಾನಿಯಾಗಿ ಹಾಗೂ ಪಂಚಾಚಾರ್ಯ ಕಲ್ಯಾಣ ಮಂಟಪದ ಸಂಸ್ಥಾಪಕರಲ್ಲೊಬ್ಬರಾಗಿ ಸಲ್ಲಿಸಿದ ಅನನ್ಯ ಸೇವೆಯನ್ನು ಈ ವೇಳೆ ಸ್ಮರಿಸಿದರು.
1500 ವರ್ಷಗಳಷ್ಟು ಹಳೆಯದಾದ ರಾಮೇಶ್ವರ ಲಿಂಗ:
ವಿಶ್ರಾಂತ ಪ್ರಾಧ್ಯಾಪಕ ಹಾಗೂ ಶಾಸನ ತಜ್ಞ ಡಾ. ಬಿ. ರಾಜಶೇಖರಪ್ಪ ಮಾತನಾಡಿ, "ಇಲ್ಲಿನ ರಾಮೇಶ್ವರ ಲಿಂಗದ ಲಕ್ಷಣಗಳನ್ನು ಗಮನಿಸಿದರೆ ಇದು ಬಾದಾಮಿ ಚಾಲುಕ್ಯರ ಕಾಲಕ್ಕಿಂತಲೂ ಪೂರ್ವದ್ದಾಗಿದ್ದು, ಸುಮಾರು 1500 ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದೆ. ಗಿಡಗಂಟಿಗಳ ಮಧ್ಯೆ ಮರೆಯಾಗಿದ್ದ ಈ ಪವಿತ್ರ ಲಿಂಗವನ್ನು ಐದು ದಶಕಗಳ ಹಿಂದೆ ಜಯಣ್ಣನವರು ಗುರುತಿಸಿ ಮಂದಿರ ನಿರ್ಮಿಸಿದರು. ಪ್ರಸ್ತುತ ಅವರ ಸಹೋದರರು ಈ ದೇವಸ್ಥಾನದ ಪೂಜಾ ನಿರ್ವಹಣೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ," ಎಂದರು.
ಚಿತ್ರದುರ್ಗದ ಹಿರಿಯ ನ್ಯಾಯವಾದಿ ಎಂ.ಸಿ. ತಿಪ್ಪೇಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಮೇಶ್ವರ ಜಯಣ್ಣನವರೊಂದಿಗಿನ ತಮ್ಮ ಒಡನಾಟ ಹಾಗೂ ಅವರ ನಿಷ್ಠಾವಂತ ಸೇವೆಯನ್ನು ಸ್ಮರಿಸಿದರು. ಮತ್ತೊಬ್ಬ ಮುಖ್ಯ ಅತಿಥಿ ರೇಣುಕಾರಾಧ್ಯ ಅವರು ಶೈವ ಮತ್ತು ವೀರಶೈವ ಸಿದ್ಧಾಂತಗಳ ಕುರಿತು ಸವಿವರವಾಗಿ ಮಾತನಾಡಿದರು.
ನಿವೃತ್ತ ಎಂಜಿನಿಯರ್ ಗುಂಡೇರಿ ಚಂದ್ರಶೇಖರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, "ನಾವು ಹೊಸದುರ್ಗ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಶಿವದೇವಸ್ಥಾನವನ್ನು ನಿರ್ಮಿಸಲು ಜಯಣ್ಣನವರೇ ನಮಗೆ ಮುಖ್ಯ ಸ್ಪೂರ್ತಿಯಾಗಿದ್ದರು," ಎಂದು ನೆನೆದರು. ವೇದಿಕೆಯಲ್ಲಿ ದೇವಿರಮ್ಮ, ಎಸ್.ಆರ್. ಜಯಪ್ರಕಾಶ್ ಹಾಗೂ ಆರ್. ಶಂಭುಲಿಂಗಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಜ್ಯೋತಿ ಪ್ರಾರ್ಥನೆ ಮಾಡಿದರು. ಡಾ. ಪಿ. ಯಶೋಧಾ ಅವರು ಸ್ವಾಗತಿಸಿದರು. ಆರ್. ಸೌಭಾಗ್ಯ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಜಯಣ್ಣನವರು ದೇವಸ್ಥಾನ ನಿರ್ಮಿಸಿದ ರೋಚಕ ಹಿನ್ನೆಲೆಯನ್ನು ಸಭೆಯ ಮುಂದಿಟ್ಟರು. ಪ್ರೊ. ಎಸ್.ಎಂ. ಕೊಟ್ರೇಶಪ್ಪ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ಮಹೋತ್ಸವದ ಅಂಗವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು, ಬಂಧು-ಮಿತ್ರರು ಹಾಗೂ ದೂರದ ಊರುಗಳಿಂದ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



