ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ನಿಜವಾದ ಹೋರಾಟ ಕಾಂಗ್ರೆಸ್ ಸರ್ಕಾರದ ವಿರುದ್ಧವಲ್ಲ, ಬದಲಾಗಿ ಬಿಜೆಪಿ ವಿರುದ್ಧ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮಿಷ್ಟದಂತೆ ಯಾವುದೇ ಆರೋಪ ಮಾಡಲು ಸ್ವತಂತ್ರರು. ಆದರೆ ಅವರ ಅಸಲಿ ಉದ್ದೇಶ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವವನ್ನು ಮುಗಿಸುವುದಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ವಿರುದ್ಧವೇ ಹೋರಾಟ: ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದ ಡಿ ಕೆ ಶಿವಕುಮಾರ್, "ಅವರು ನಮ್ಮ ವಿರುದ್ಧ ಹೋರಾಡುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ತಲೆಎತ್ತಬಾರದು ಎಂಬ ಏಕೈಕ ಉದ್ದೇಶದಿಂದ ಬಿಜೆಪಿ ವಿರುದ್ಧವೇ ಹೋರಾಟ ನಡೆಸುತ್ತಿದ್ದಾರೆ" ಎಂದರು.
ದಾಖಲೆ ಬಿಡುಗಡೆ ಹೆದರಿಕೆಯಿಲ್ಲ: 'ದೇಶವೇ ಅಲ್ಲೋಲ ಕಲ್ಲೋಲವಾಗುವ ದಾಖಲೆ ಬಿಡುಗಡೆ ಮಾಡುತ್ತೇನೆ' ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, "ಬಹಳ ಸಂತೋಷ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ" ಎಂದು ಲಘುವಾಗಿ ತಳ್ಳಿಹಾಕಿದರು.
ವಿಪಕ್ಷಗಳ ಪಾದಯಾತ್ರೆಗೆ ಟಾಂಗ್: ಬಿಜೆಪಿ-ಜೆಡಿಎಸ್ ಕೈಗೊಳ್ಳಲಿರುವ ಪಾದಯಾತ್ರೆ ಬಗ್ಗೆ ಮಾತನಾಡಿ, "ಮೊದಲು ಅವರು ಪಾದಯಾತ್ರೆ ಆರಂಭಿಸಲಿ. ನಾವು ರಾಜಕಾರಣಿಗಳು, ಆ ನಂತರ ನಾವೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ. ಮಳೆ-ಬೆಳೆ, ರೈತರ ಹಿತರಕ್ಷಣೆ ಹಾಗೂ ಕಸ್ತೂರಿರಂಗನ್ ವರದಿ ಜಾರಿ ಕುರಿತು ಶಾಸಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು" ಎಂದು ಸ್ಪಷ್ಟಪಡಿಸಿದರು.




