ಗೋವಾ-ದೆಹಲಿ ಇಂಡಿಗೋ ವಿಮಾನ ಎಂಜಿನ್ ದೋಷ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಪ್ರಾಣಾಪಾಯ, ತುರ್ತು ಭೂಸ್ಪರ್ಶ
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಗೋವಾದಿಂದ ನವದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದ ಎಂಜಿನ್ನಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಥಗಿತಗೊಂಡ ಪರಿಣಾಮ, ಪೈಲಟ್ ತಕ್ಷಣವೇ ಜಾಗರೂಕರಾಗಿ ವಿಮಾನವನ್ನು ಗೋವಾ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.
(ಸೆಪ್ಟೆಂಬರ್ 1) ಬೆಳಿಗ್ಗೆ 9:16ಕ್ಕೆ ಉತ್ತರ ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟಿದ್ದ 'ಇಂಡಿಗೋ 6E 2102' ವಿಮಾನದಲ್ಲಿ ಈ ಘಟನೆ ನಡೆದಿದೆ.
ಸಮಯಪ್ರಜ್ಞೆ ಮೆರೆದ ಪೈಲಟ್: ವಿಮಾನ ಗಾಳಿಯಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅದರ ಒಂದು ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಆಫ್ ಆಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್ಗಳು ವಿಮಾನವನ್ನು ಯೂಟರ್ನ್ ಪಡೆದು ಸುರಕ್ಷಿತವಾಗಿ ವಾಪಸ್ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಯಾಣಿಕರು ಸುರಕ್ಷಿತ: ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಸಂಭಾವ್ಯ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ತಾಂತ್ರಿಕ ತಪಾಸಣೆ: ಪ್ರಸ್ತುತ ವಿಮಾನವನ್ನು ಸಂಪೂರ್ಣ ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯ ತಾಂತ್ರಿಕ ಪರಿಶೀಲನೆ ಹಾಗೂ ಅಧಿಕೃತ ಅನುಮತಿ ದೊರೆತ ನಂತರವೇ ವಿಮಾನ ಮತ್ತೆ ಹಾರಾಟ ನಡೆಸಲಿದೆ ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ.
ಪರ್ಯಾಯ ವ್ಯವಸ್ಥೆ: ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ಕ್ಷಮೆ ಯಾಚಿಸಿರುವ ಇಂಡಿಗೋ ಸಂಸ್ಥೆಯು, ಅವರಿಗೆ ಉಪಾಹಾರ ಹಾಗೂ ಅಗತ್ಯ ಸೌಲಭ್ಯ ಒದಗಿಸಿದೆ. ಜೊತೆಗೆ ದೆಹಲಿ ತಲುಪಲು ಪರ್ಯಾಯ ವಿಮಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.




