ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಕಚೇರಿಯಾದ ಜೆಪಿ ಭವನದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಪಕ್ಷದ ಬಿಎಲ್ಎ-1 ಹಾಗೂ ಪ್ರಮುಖ ಮುಖಂಡರ "ಬಿಎಲ್ಎಗಳ ಜವಾಬ್ದಾರಿ ವಿಶೇಷ ಸಭೆ" ಜರುಗಿತು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಿ, ಮುಂಬರುವ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬಿಎಲ್ಎಗಳ ಕರ್ತವ್ಯಗಳ ಕುರಿತು ಸಮಾಲೋಚನೆ ನಡೆಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಮುಖ ವೇಳಾಪಟ್ಟಿ:
ಸಭೆಯಲ್ಲಿ ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆಯ ಹಂತಗಳನ್ನು ಪಕ್ಷದ ಪದಾಧಿಕಾರಿಗಳಿಗೆ ವಿವರಿಸಲಾಗಿದ್ದು, ಅದರ ವಿವರಗಳು ಹೀಗಿವೆ.
ಜೂನ್ 20 ರಿಂದ 29: ಚುನಾವಣಾ ಅಧಿಕಾರಿಗಳು ನಡೆಸುವ ತರಬೇತಿ ಕಾರ್ಯಾಗಾರಗಳು ಮತ್ತು ಸಭೆಗಳಲ್ಲಿ ಬಿಎಲ್ಎಗಳು ಕಡ್ಡಾಯವಾಗಿ ಭಾಗವಹಿಸುವುದು.
ಜೂನ್ 30 ರಿಂದ ಜುಲೈ 29: ಮನೆ-ಮನೆ ಗಣತಿ ಪ್ರಕ್ರಿಯೆ.
ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ.
ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ.
ಆಗಸ್ಟ್ 5 ರಿಂದ ಅಕ್ಟೋಬರ್ 3: ಸಲ್ಲಿಕೆಯಾದ ಆಕ್ಷೇಪಣೆಗಳ ವಿಚಾರಣೆ ಮತ್ತು ವಿಲೇವಾರಿ.
ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಬಿಡುಗಡೆ.
ಅಧಿಕಾರಿಗಳೊಂದಿಗೆ ಸಹಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಕರೆ:
"ಚುನಾವಣಾ ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಬಿಎಲ್ಎಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡುವ ಮೂಲಕ ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಬಿಎಲ್ಎಗಳ ಜವಾಬ್ದಾರಿಯಾಗಿದೆ" ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.
ಈ ವಿಶೇಷ ಸಭೆಯಲ್ಲಿ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪಕ್ಷದ ಬಿಎಲ್ಎಗಳು ಉಪಸ್ಥಿತರಿದ್ದರು.



