ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
21 ತಿಂಗಳ ತುರ್ತು ಪರಿಸ್ಥಿತಿಯಲ್ಲಿ ಭಾರತ - ಪ್ರಜಾಪ್ರಭುತ್ವದ ಕರಾಳ ಅಧ್ಯಾಯ.
1970 ರ ದಶಕದ ಮಧ್ಯಭಾಗದಲ್ಲಿ ದೇಶದಲ್ಲಿ ಆರ್ಥಿಕ ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ ಮತ್ತು ರಾಜಕೀಯ ಅಸ್ಥಿರತೆ ಹೆಚ್ಚಾಗಿತ್ತು. ವಿರೋಧ ಪಕ್ಷದ ನಾಯಕರಾದ ಜಯಪ್ರಕಾಶ್ ನಾರಾಯಣ್ ರವರು ಸರ್ಕಾರದ ವಿರುದ್ಧ ವ್ಯಾಪಕ ಜನಾಂದೋಲನವನ್ನು ಪ್ರಾರಂಭಿಸಿದರು ಇದೇ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ 1975 ರ ಜೂನ್ 12 ರಂದು ನೀಡಿದ ತೀರ್ಪಿನಲ್ಲಿ, 1971 ರ ಲೋಕಸಭಾ ಚುನಾವಣೆಯನ್ನು ಕೆಲವು ಚುನಾವಣಾ ನಿಯಮಗಳ ಉಲ್ಲಂಘನೆಯ ಆಧಾರದ ಮೇಲೆ ಇಂದಿರಾ ಗಾಂಧಿ ರವರ ರಾಯ್ ಬರೆಲಿ ಕ್ಷೇತ್ರದ ಚುನಾವಣೆ ಅಮಾನ್ಯ ಎಂದು ಘೋಷಿಸಿತು. ಹಾಗೆಯೇ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹತೆಯನ್ನು ವಿಧಿಸಲಾಯಿತು. ಈ ತೀರ್ಪಿನ ನಂತರ ದೇಶದ ರಾಜಕೀಯ ಪರಿಸ್ಥಿತಿ ತೀವ್ರಗೊಂಡಿತು ನಂತರ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
1975 ಜೂನ್ 25 ರ ರಾತ್ರಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಭಾರತೀಯ ಸಂವಿಧಾನದ 352 ವಿಧಿಯ ಅನುಮೋದನೆಯೊಂದಿಗೆ ದೇಶದಲ್ಲಿ "ಆಂತರಿಕ ಅಶಾಂತಿ" ಉಂಟಾಗಿದೆ ಎಂಬ ಕಾರಣ ನೀಡಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ 1975 ಜೂನ್ 25 ರಿಂದ 1977 ಮಾರ್ಚ್ 21 ರವರೆಗೆ ಈ ಕಾನೂನು ಜಾರಿಗೊಳಿಸಲಾಯಿತು. ಮಾತಿನ ಸ್ವಾತಂತ್ರ್ಯ, ಸಭೆ ನಡೆಸುವ ಹಕ್ಕು ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಯಿತು. ಪತ್ರಿಕೆಗಳು ಮತ್ತು ಮಾಧ್ಯಮಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಯಿತು. ಸರ್ಕಾರದ ಅನುಮತಿ ಇಲ್ಲದೆ ಕೆಲವು ಸುದ್ದಿಗಳನ್ನು ಪ್ರಕಟಿಸಲು ಅವಕಾಶ ಇರಲಿಲ್ಲ. ಸರ್ಕಾರದ ಕ್ರಮಗಳನ್ನು ಪ್ರಶ್ನಿಸಲು ನಾಗರಿಕರಿಗೆ ಇದ್ದ ಕಾನೂನು ಅವಕಾಶಗಳು ಕೂಡ ಸೀಮಿತಗೊಂಡಿದ್ದವು. ಸೇರಿದಂತೆ ವಿರೋಧ ಪಕ್ಷದ ನಾಯಕರಾದ ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಯಿತು. ಈ ಅವಧಿಯಲ್ಲಿ 20 ಅಂಶಗಳ ಕಾರ್ಯಕ್ರಮ, ಕುಟುಂಬ ಯೋಜನೆ ಅಭಿಯಾನ ಮತ್ತು ಆಡಳಿತಾತ್ಮಕ ಸುಧಾರಣೆಗಳಂತಹ ಕ್ರಮಗಳನ್ನು ಜಾರಿಗೊಳಿಸಲಾಯಿತು. ಆದರೆ ಬಲವಂತದ ಕುಟುಂಬ ನಿಯಂತ್ರಣ ಕ್ರಮಗಳು ಹಾಗೂ ನಾಗರಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು ತೀವ್ರ ಟೀಕೆಗೆ ಗುರಿಯಾದವು.
1977 ರ ಮಾರ್ಚ್ 21 ರಂದು ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಯಿತು. ಇದರೊಂದಿಗೆ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು ಪುನಃ ಜಾರಿಗೆ ಬಂದವು. 1977 ರಲ್ಲಿ ಲೋಕಸಭಾ ಚುನಾವಣೆ ಘೋಷಣೆಯ ನಂತರ ಅನೇಕ ವಿರೋಧ ಪಕ್ಷದ ನಾಯಕರನ್ನು ಮತ್ತು ರಾಜಕೀಯ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು. ಇದರಿಂದ ರಾಜಕೀಯ ಚಟುವಟಿಕೆಗಳು ಮತ್ತೆ ಚುರುಕುಗೊಂಡವು. 1977 ಚುನಾವಣೆಯಲ್ಲಿ ಮುರಾಜಿ ದೇಸಾಯಿ ರವರ ನೇತೃತ್ವದ ಜನತಾ ಪಾರ್ಟಿ ಭರ್ಜರಿ ಜಯ ಸಾಧಿಸಿತು ಮತ್ತು ಕಾಂಗ್ರೆಸ್ ಪಕ್ಷ ಸೋಲು ಕಂಡಿತು. ಈ ಚುನಾವಣೆಯನ್ನು ಭಾರತೀಯ ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯೆಂದು ಪರಿಗಣಿಸಲಾಗುತ್ತದೆ. ನಂತರ 44 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರಕ್ಕೆ ಹೆಚ್ಚಿನ ನಿಯಂತ್ರಣಗಳನ್ನು ತರಲಾಯಿತು. ಇದರಿಂದ ಭವಿಷ್ಯದಲ್ಲಿ ಅಧಿಕಾರದ ದುರುಪಯೋಗವನ್ನು ತಡೆಯುವ ದೂರ ದೃಷ್ಟಿಯ ಪರಿಕಲ್ಪನೆಯಾಗಿತ್ತು.
ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನಾಗರಿಕ ಹಕ್ಕುಗಳ ಮಹತ್ವವನ್ನು ದೇಶಕ್ಕೆ ಮನದಟ್ಟು ಮಾಡಿಸಿತು. ಭಾರತದ ರಾಜಕೀಯ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯು ಒಂದು ಪ್ರಮುಖ ಪಾಠವಾಗಿ ಉಳಿದಿದೆ. ತುರ್ತು ಪರಿಸ್ಥಿತಿ ಸಂವಿಧಾನದ ಪ್ರಕಾರ ಘೋಷಿಸಲ್ಪಟ್ಟ ಕಾನೂನು ಕ್ರಮವಾಗಿತ್ತು. ಆದರೆ ಅದರ ಅವಧಿಯಲ್ಲಿ ನಾಗರಿಕ ಸ್ವಾತಂತ್ರ್ಯಗಳು ಮತ್ತು ಪ್ರಜಾಪ್ರಭುತ್ವದ ಕಾರ್ಯವೈಖರಿ ಗಂಭೀರವಾಗಿ ಸೀಮಿತಗೊಂಡಿದ್ದರಿಂದ, ಅನೇಕರು ಅದನ್ನು ರೂಪಕವಾಗಿ "ಸಂವಿಧಾನದ ಹತ್ಯೆ" ಅಥವಾ "ಪ್ರಜಾಪ್ರಭುತ್ವದ ಮೇಲೆ ದಾಳಿ" ಎಂದು ವಿವರಿಸುತ್ತಾರೆ.

ಆದ್ದರಿಂದ ತುರ್ತು ಪರಿಸ್ಥಿತಿಯ ಅಂತ್ಯವು ಭಾರತೀಯ ಪ್ರಜಾಪ್ರಭುತ್ವದ ಪುನರುಜ್ಜೀವನದ ಸಂಕೇತವಾಗಿದೆ. 1977 ರ ಚುನಾವಣೆಯಲ್ಲಿ ಜನರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಬದ್ಧರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದರು.
ಲೇಖನ: ಡಾ. ಎಂ ವಸಂತ್ ಆಚಾರ್, ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರ ಯುವ ಮೋರ್ಚಾ.



