ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಯೋತ್ಪಾದನೆ, ಬೆದರಿಕೆ ಅಥವಾ ದೇಶದ ಭಾವನೆಗೆ ಧಕ್ಕೆ ತರುವ ಶಕ್ತಿಗಳಿಗೆ ಭಾರತ ಎಂದಿಗೂ ತಲೆಬಾಗದು ಎಂಬುದಕ್ಕೆ ಒಂದು ವರ್ಷದ ಹಿಂದೆ ನಡೆದ 'ಆಪರೇಷನ್ ಸಿಂದೂರ್' ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ಅವರು, ದೇಶದ ಏಕತೆ ಮತ್ತು ಶಕ್ತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ರಾಷ್ಟ್ರದ ಸಂಕಲ್ಪ: ಆಪರೇಷನ್ ಸಿಂದೂರ್ ಎಂಬುದು ಕೇವಲ ಒಂದು ಕಾರ್ಯಾಚರಣೆಯಲ್ಲ. ಇದು ಸವಾಲು ಎದುರಾದಾಗ ಒಗ್ಗಟ್ಟಿನಿಂದ ನಿಲ್ಲುವ ನಾಗರಿಕತೆಯ ಸಂಕಲ್ಪವಾಗಿದೆ. ತಮ್ಮ ಪ್ರಾಣಕ್ಕಿಂತ ದೇಶವೇ ದೊಡ್ಡದು ಎಂದು ಭಾವಿಸುವ ನಮ್ಮ ವೀರ ಯೋಧರ ಧೈರ್ಯ ಹಾಗೂ 140 ಕೋಟಿ ಭಾರತೀಯರ ಸಾಮೂಹಿಕ ನಿರ್ಧಾರದ ಸಂಕೇತವಿದು.
ಮೋದಿ ಅವರ ನೇತೃತ್ವ: ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಾಯಕತ್ವದಲ್ಲಿ ಭಾರತವು ಇಡೀ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ನಮ್ಮ ತಾಳ್ಮೆಯನ್ನು ಎಂದಿಗೂ ದೌರ್ಬಲ್ಯ ಎಂದು ಭಾವಿಸಬಾರದು. ತ್ರಿವರ್ಣ ಧ್ವಜಕ್ಕಾಗಿ ಮಾಡಿದ ಪ್ರತಿಯೊಂದು ಬಲಿದಾನವನ್ನೂ ಶಕ್ತಿ ಮತ್ತು ಏಕತೆಯೊಂದಿಗೆ ಗೌರವಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವೀರ ಯೋಧರಿಗೆ ನಮನ: ಈ ಸಂದರ್ಭದಲ್ಲಿ ದೇಶದ ಸಶಸ್ತ್ರ ಪಡೆಗಳ ಶೌರ್ಯಕ್ಕೆ ತಲೆಬಾಗಿದ ಅವರು, ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿರುವ ಪ್ರತಿಯೊಬ್ಬ ವೀರ ಯೋಧರ ಬಲಿದಾನವನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.
"ಭಾರತವು ಬಲವಾಗಿ ನಿಂತಿದೆ, ಒಗ್ಗಟ್ಟಾಗಿ ನಿಂತಿದೆ ಮತ್ತು ದೃಢವಾಗಿ ನಿಂತಿದೆ" ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು ದೇಶದ ಸಾರ್ವಭೌಮತೆ ಮತ್ತು ಘನತೆಯನ್ನು ಎತ್ತಿ ಹಿಡಿದಿದ್ದಾರೆ.


