ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಎಂತಹ ಸವಾಲುಗಳಿದ್ದರೂ ಅನ್ನದಾತರ ಹಿತ ಕಾಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶ್ಲಾಘಿಸಿದ್ದಾರೆ.
2026-27ರ ಮಾರುಕಟ್ಟೆ ಹಂಗಾಮಿನ 14 ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಕೇವಲ ಅಂಕಿ-ಅಂಶವಲ್ಲ, ಅನ್ನದಾತರಿಗೆ ನೀಡುವ ಗೌರವ ಎಂದು ಬಣ್ಣಿಸಿದ್ದಾರೆ.
ಲಾಭದ ಖಾತ್ರಿ: ಕೃಷಿ ವೆಚ್ಚಕ್ಕಿಂತ ಕನಿಷ್ಠ 50% ರಷ್ಟು ಹೆಚ್ಚಿನ ಲಾಭವನ್ನು ರೈತರಿಗೆ ಖಾತ್ರಿಪಡಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಸಂಕಲ್ಪವನ್ನು ಸಾಬೀತುಪಡಿಸಿದೆ.
ಭತ್ತದ ಬೆಲೆ ಏರಿಕೆ: ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ಗೆ 72 ರೂ. ಹೆಚ್ಚಿಸಲಾಗಿದ್ದು, ಈಗಿನ ಬೆಲೆ 2,441 ರೂ. ಗೆ ತಲುಪಿದೆ.
ಸೂರ್ಯಕಾಂತಿ ಬೆಲೆಯಲ್ಲಿ ಭಾರಿ ಜಿಗಿತ: ಸೂರ್ಯಕಾಂತಿ ಬೀಜಕ್ಕೆ ಕ್ವಿಂಟಾಲ್ಗೆ ಬರೋಬ್ಬರಿ 622 ರೂ. ಹೆಚ್ಚಳ ಮಾಡಲಾಗಿದ್ದು, ಒಟ್ಟು ಬೆಲೆ 8,343 ರೂ. ಆಗಿದೆ.
ಬೆಳೆ ವೈವಿಧ್ಯಕ್ಕೆ ಆದ್ಯತೆ: ಆಮದು ಅವಲಂಬನೆ ತಗ್ಗಿಸಲು ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ:
"ಬಿತ್ತನೆಯಿಂದ ಮಾರುಕಟ್ಟೆಯವರೆಗೆ ರೈತರ ಕೈ ಹಿಡಿದು ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ನಿರ್ಧಾರವು ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಬೆಳೆ ವೈವಿಧ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ" ಎಂದು ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯದ ಸಮಸ್ತ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಎನ್.ಡಿ.ಎ ಸರ್ಕಾರಕ್ಕೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.


