ಚಂದ್ರವಳ್ಳಿ ನ್ಯೂಸ್, ರಾಮನಗರ:
"ರಾಜ್ಯ ಸರ್ಕಾರಕ್ಕೆ ಕೃಷಿಗಿಂತ ರಿಯಲ್ ಎಸ್ಟೇಟ್ವ್ಯವಹಾರವೇ ಮುಖ್ಯವಾಗಿದೆ. ಬಿಡದಿ ಭಾಗದ ರೈತರಿಗೆ ಮರಣಶಾಸನ ಬರೆಯಲು ಹೊರಟಿರುವ ಸರ್ಕಾರದ ನಡೆ ಅತ್ಯಂತ ಖಂಡನೀಯ," ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಜಮೀನುಗಳ ರಕ್ಷಣೆಗಾಗಿ ಟ್ರ್ಯಾಕ್ಟರ್ಗಳ ಮೂಲಕ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದ ಅನ್ನದಾತರ ಮೇಲೆ ಪೊಲೀಸರು ದರ್ಪ ತೋರಿಸಿರುವುದನ್ನು ಉಗ್ರವಾಗಿ ಖಂಡಿಸಿರುವ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ದರ್ಪಕ್ಕೆ ತೀವ್ರ ಖಂಡನೆ: ಹಕ್ಕುಗಳಿಗಾಗಿ ಹೋರಾಡಲು ಬಂದ ರೈತರನ್ನು ಪೊಲೀಸರ ಮೂಲಕ ಹತ್ತಿಕ್ಕಲು ನೋಡುವುದು ನಿರಂಕುಶತೆಯ ಪರಮಾವಧಿಯಾಗಿದೆ. ಅನ್ನದಾತರ ಮೇಲೆ ಪೋಲಿಸ್ ಬಲ ಪ್ರಯೋಗ ಮಾಡಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಿಯಲ್ ಎಸ್ಟೇಟ್ ಸರ್ಕಾರ: ಕೃಷಿ ಭೂಮಿಯನ್ನು ರಕ್ಷಿಸುವ ಬದಲು, ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಮಣೆ ಹಾಕುತ್ತಿದೆ. ಬಿಡದಿ ಭಾಗದ ರೈತರ ಹಿತಾಸಕ್ತಿಯನ್ನು ಬಲಿಗೊಟ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: "ಲಾಠಿಗಳನ್ನು ತೋರಿಸಿ ರೈತರ ನ್ಯಾಯಸಮ್ಮತ ಹೋರಾಟವನ್ನು ಹತ್ತಿಕ್ಕುತ್ತೇವೆ ಎನ್ನುವುದು ಕೇವಲ ಭ್ರಮೆ. ಇಂತಹ ದೌರ್ಜನ್ಯಗಳಿಗೆ ಅನ್ನದಾತರು ಜಗ್ಗುವುದಿಲ್ಲ," ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
"ನೆಲ ನಂಬಿದ ರೈತರ ಮೇಲೆ ಪೊಲೀಸರನ್ನು ಬಿಟ್ಟು ದರ್ಪ ತೋರುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ರೈತರ ಧ್ವನಿಯನ್ನು ಅಡಗಿಸಲು ಲಾಠಿಗಳಿಂದ ಸಾಧ್ಯವಿಲ್ಲ. ಅನ್ನದಾತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ." ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು.



