ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾರ್ವಜನಿಕರಿಗೆ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ರೌಡಿ ಶೀಟರ್ಗಳ ಮೇಲೆ ನಿಗಾ ಬಿಗಿಗೊಳಿಸುವ ಉದ್ದೇಶದಿಂದ ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗ ವ್ಯಾಪ್ತಿಯಲ್ಲಿ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿ 45ಕ್ಕೂ ಹೆಚ್ಚು ರೌಡಿ ಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.
ಬೆಳಗ್ಗಿನ ಜಾವ ಆರಂಭವಾದ ಅನಿರೀಕ್ಷಿತ ಕಾರ್ಯಾಚರಣೆ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಪರಾಧ ಚಟುವಟಿಕೆಗಳ ಮೇಲಿನ ಪೊಲೀಸ್ ನಿಗಾ ಮತ್ತಷ್ಟು ಬಿಗಿಯಾಗಿರುವ ಸಂದೇಶವನ್ನು ರವಾನಿಸಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧಿಗಳಿಗೆ ಎಚ್ಚರಿಕೆ ನೀಡಲಾಯಿತು.
ಡಿವೈಎಸ್ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಶ್ವನಾಥಪುರ, ಚೆನ್ನರಾಯಪಟ್ಟಣ ಹಾಗೂ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಆಸಾಮಿಗಳ ಮನೆಗಳನ್ನು ಶೋಧಿಸಲಾಗಿದೆ. ಕಾರ್ಯಾಚರಣೆಯನ್ನು ಯೋಜಿತವಾಗಿ ನಡೆಸಲು ಪ್ರತಿ ಠಾಣೆಯಿಂದ 3 ರಿಂದ 4 ವಿಶೇಷ ತಂಡಗಳನ್ನು ರಚಿಸಿ ಒಂದೇ ಸಮಯದಲ್ಲಿ ವಿವಿಧ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ದೈನಂದಿನ ದಿನಚರಿಯಲ್ಲಿ ರೌಡಿ ಶೀಟರ್ಗಳು ಎಲ್ಲೆಲ್ಲಿ ಓಡಾಡುತ್ತಾರೆ, ಯಾರ ಭೇಟಿಯಾಗುತ್ತಾರೆ ಮತ್ತು ಅವರ ದೈನಂದಿನ ಚಟುವಟಿಕೆಗಳೇನು ಎಂಬ ಬಗ್ಗೆ ಪೋಲಿಸರು ನಿರಂತರ ಮಾಹಿತಿ ಸಂಗ್ರಹಿಸುವ ಹೊಣೆ ಹೊರಿಸಲಾಗಿದೆ.
ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕಾನೂನುಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಅಥವಾ ರೌಡಿಸಂಗೆ ಯಾವುದೇ ರೀತಿಯ ಅವಕಾಶ ನೀಡಬಾರದು. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಪೊಲೀಸರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುಲಾಗುವುದು ಎಂದು ರೌಡಿ ಶೀಟರ್ ಗೆ ಖಡಕ್ ಎಚ್ಚರಿಕೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ಗಳಾದ ಡಾ. ನವೀನ್ ಕುಮಾರ್ ಎಂ.ಬಿ., ಅಮರೇಶ್ ಗೌಡ, ಕಲ್ಲಪ್ಪ ಖರಾತ, ಮುತ್ತು ರಾಜ್ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.



