ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸ್ವಾಮಿ ವಿವೇಕಾನಂದರು ತಿಳಿಸಿದಂತೆ ತ್ಯಾಗ ಮತ್ತು ಸೇವೆಗಳು ಭಾರತದ ಅವಳಿ ಆದರ್ಶಗಳಾಗಿದ್ದು ಅದರಲ್ಲಿ ನಿಸ್ವಾರ್ಥ ಸೇವೆಯು ಇಂದಿನ ಯುವಕ-ಯುವತಿಯರ ಆದರ್ಶವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು "ಸೇವೆಯ ಆದರ್ಶ"ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು.
ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ, ಸಂನ್ಯಾಸಿ ಗೀತೆಯ ಗಾಯನ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ತರಗತಿಯಲ್ಲಿ ಸುಧಾಮಣಿ, ಸಿ.ಎಸ್.ಭಾರತಿ, ಕವಿತಾ ಗುರುಮೂರ್ತಿ, ನಾಗೇಶ್, ಮಾನ್ಯ, ದರ್ಶನ್, ಹೃತಿಕ್, ಜ್ಞಾನೇಶ್ವರಿ, ತಪಸ್ವಿನಿ, ಲೋಹಿತ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.


