ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮುರು:
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ವೆ ಇಲಾಖೆಯು ರಾಜ್ಯದ ಜನರ ಪಾಲಿಗೆ ಸತ್ತು ಹೋಗಿದೆ ಎಂದು ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವೇ ಇಲಾಖೆಯಲ್ಲಿ ಚಿತ್ರದುರ್ಗ ಜಿಲ್ಲೆ ಒಂದರಲ್ಲೇ 10834 ಅರ್ಜಿಗಳು ಬಾಕಿ ಉಳಿದಿವೆ. ಈ ಪೈಕಿ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನ 3389 ಅರ್ಜಿಗಳು ಸರ್ವೆ ಆಗದೆ ಬಾಕಿ ಉಳಿದಿದ್ದು ಮುಂದಿನ ಎರಡು ವರ್ಷಗಳಾದರೂ ಈ ಅರ್ಜಿಗಳ ವಿಲೇವಾರಿ ಆಗುವುದಿಲ್ಲ. ರೈತರ ಗೋಳು ಹೇಳತೀರಾದಾಗಿದೆ ಎಂದು ಪ್ರಭಾಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕಂಡು ಕಾಣದಂತೆ ಇದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲಾಖೆಯಲ್ಲಿ ಒಂದಷ್ಟು ಸುಧಾರಣೆ ತಂದಿದ್ದರೂ ಈ ಬಗ್ಗೆ ಕಣ್ಣು ಮುಚ್ಚಿ ಕೂತಿರುವುದಾದರೂ ಏಕೆ ಎಂದು ಪ್ರಭಾಕರ ಪ್ರಶ್ನಿಸಿದ್ದಾರೆ.
ಪೋಡಿ, ದುರಸ್ಥಿ, ಹದ್ದುಬಸ್ತು, 11 ಇ ಸೇರಿದಂತೆ ಚಿತ್ರದುರ್ಗ ಜಿಲ್ಲೆ ಒಂದರಲ್ಲಿ 10834 ಅರ್ಜಿಗಳು ಬಾಕಿ ಉಳಿದಿದ್ದು ಸರ್ವೇ ಇಲಾಖೆಯು ಜನರ ಪಾಲಿಗೆ ಸತ್ತು ಹೋಗಿದೆ ಎಂದು ಪ್ರಭಾಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾಡಳಿತ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದೆ ಎಂದು ಪ್ರಭಾಕರ ವ್ಯಂಗ್ಯ ವಾಡಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಗಳಂತು ಖಾತೆ ಆಂದೋಲನ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪೌತಿ ಖಾತೆಯ ಹೆಸರಿನಲ್ಲಿ ಯಾರದೋ ಜಮೀನು ಯಾರ್ಯರಿಗೋ ಖಾತೆ ಮಾಡಿಕೊಡುತ್ತಿದ್ದಾರೆ.
ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಖಾತೆ ಮಾಡುತ್ತಿರುವುದು ಕೂಡ ಕಂಡು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ಜರುಗಿಸುವಂತೆ ಅಗ್ರಹಿಸಿದ್ದಾರೆ.
ಖಾತೆ ಮಾಡಲು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನು ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕು ಎಂದು ಪ್ರಭಾಕರ ಅಗ್ರಹಿಸಿದ್ದಾರೆ.


