ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಘೋಷಣೆಯಾಗುಳಿಯದೆ, ಎಲ್ಲಾ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಸಾರ್ಥಕವಾಗುತ್ತದೆ.
ಪ್ರಸ್ತುತ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾತಿನಿಧ್ಯದ ಚರ್ಚೆ ಮುಂಚೂಣಿಗೆ ಬಂದಾಗಲೆಲ್ಲಾ, ಅತ್ಯಂತ ಪ್ರಮುಖವಾಗಿ ಕೇಳಿಬರುವ ಹೆಸರು ಹಿರಿಯ ಮುತ್ಸದ್ದಿ ರಾಜಕಾರಣಿ ಟಿ.ಬಿ. ಜಯಚಂದ್ರ ಅವರದ್ದಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದಲ್ಲಿ ಅಡಿಯಲ್ಲಿ ಕುಂಚಿಟಿಗ ಜಾತಿಗೆ ನ್ಯಾಯ ಒದಗಿಸಲು ವಿಫಲರಾಗಿದ್ದರು ಎನ್ನುವುದು ನೋವಿನ ಸಂಗತಿ.
ಕರ್ನಾಟಕದ ಸುಮಾರು 48 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ, ಪ್ರಬಲ ಹಾಗೂ ಶ್ರಮಜೀವಿ ಪಶುಪಾಲನೆ, ಕೃಷಿ ಜೀವನ ಕಟ್ಟಿಕೊಂಡಿರುವ ಸಮುದಾಯವಾದ ಕುಂಚಿಟಿಗ ಜನಾಂಗಕ್ಕೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು ಸಮುದಾಯದಾದ್ಯಂತ ತೀವ್ರ ಅಸಮಾಧಾನ ಮತ್ತು ನಿರಾಶೆಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ, ಜಯಚಂದ್ರ ಅವರ ಹಿರಿತನ, ಸೇವಾನುಭವ ಮತ್ತು ಕುಂಚಿಟಿಗ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಅನಿವಾರ್ಯತೆಯ ಕುರಿತು ನ್ಯಾಯ ಒದಗಿಸಲು ಕಾಲು ಕೂಡಿ ಬಂದಿದ್ದು ಕಾಂಗ್ರೆಸ್ ವರಿಷ್ಠರು ಮತ್ತು ಭಾವಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಜಯಚಂದ್ರ ಅವರಿಗೆ ಸೇವಾ ಹಿರಿತನಕ್ಕೆ ತಕ್ಕಂತೆ ಸಂಪುಟಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಒಕ್ಕಲಿಗ ಜನಾಂಗಕ್ಕೆ ಸೇರಿದ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರುವುದರಿಂದ ಒಕ್ಕಲಿಗರಿಗೆ ನಾಲ್ಕು ಐದು ಸಚಿವ ಸ್ಥಾನ ನೀಡುವ ಬದಲು ರಾಜಕೀಯ ತುಳಿತಕ್ಕೊಳಗಾಗಿರುವ ಕುಂಚಿಟಿಗ ಜಾತಿ ಸೇರಿದಂತೆ ಅವಕಾಶ ವಂಚಿತ ಇತರೆ ಜಾತಿಗಳಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರೊಬ್ಬ ಪ್ರಬುದ್ಧ ಮುಖ್ಯಮಂತ್ರಿಗಳು ಎನ್ನುವುದನ್ನು ಸಾಬೀತು ಮಾಡುವ ಕಾಲ ಸಹ ಬಂದಿದೆ.
ಕುಂಚಿಟಿಗ ಜನಾಂಗದ ಏಕೈಕ ಆಶಾಕಿರಣ ಮತ್ತು ಧ್ವನಿ:
ರಾಜ್ಯದ ಹಳೆ ಮೈಸೂರು ಭಾಗ ಸೇರಿದಂತೆ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಹಾಸನ ಮತ್ತು ಸೆಂಟ್ರಲ್ ಕರ್ನಾಟಕದ ಬರೋಬ್ಬರಿ 48 ಕ್ಷೇತ್ರಗಳಲ್ಲಿ ಕುಂಚಿಟಿಗ ಜನಾಂಗದ ಮತದಾರರು ಅತ್ಯಂತ ಪ್ರಭಾವಶಾಲಿಯಾಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ, ಪ್ರಸ್ತುತ ವಿಧಾನಸಭೆಯಲ್ಲಿ ಈ ಜನಾಂಗವನ್ನು ಪ್ರತಿನಿಧಿಸುತ್ತಿರುವ ಏಕೈಕ ಶಾಸಕ ಹಾಗೂ ನಾಯಕ ಎಂದರೆ ಅದು ಟಿ.ಬಿ. ಜಯಚಂದ್ರ ಅವರು ಮಾತ್ರ. ಕುಂಚಿಟಿಗ ಜನಾಂಗ ಗೆಲ್ಲುವ ಅವಕಾಶ ಇರುವಂತ ಮಧುಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅನ್ಯ ಮೀಸಲು ಕೋಮಿನ ವ್ಯಕ್ತಿಗೆ ಟಿಕೆಟ್ ನೀಡಿ ಎಲ್ಲೂ ಕುಂಚಿಟಿಗ ಜಾತಿಗೆ ಕಾಂಗ್ರೆಸ್ ಅನ್ಯಾಯ ಮಾಡಿತ್ತು.
ಜಯಚಂದ್ರ ಅವರು ಕೇವಲ ಒಂದು ಕ್ಷೇತ್ರದ ಶಾಸಕರಲ್ಲ, ಬದಲಿಗೆ ಇಡೀ ರಾಜ್ಯದ ಕುಂಚಿಟಿಗ ಸಮುದಾಯ ಸೇರಿದಂತೆ ಇತರೆ ಹಿಂದುಳಿದ ವರ್ಗಗಳು, ಅವಕಾಶ ವಂಚಿತರ ಹಕ್ಕುಗಳಿಗಾಗಿ, ಒಳಿತಿಗಾಗಿ ಹೋರಾಡುವ ಏಕೈಕ ಧೀಮಂತ ನಾಯಕರಾಗಿದ್ದಾರೆ.
ಇಂತಹ ಸಮುದಾಯದ ಏಕೈಕ ಪ್ರತಿನಿಧಿಯನ್ನು ಸಂಪುಟದಿಂದ ಹೊರಗಿಟ್ಟಿದ್ದು ಇಡೀ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನಿರಾಕರಿಸಿದಂತಾಗಿದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಬಲವಾಗಿದೆ.
ಹಿರಿತನ ಮತ್ತು ಅಪಾರ ಸೇವಾನುಭವ:
ಟಿ.ಬಿ. ಜಯಚಂದ್ರ ಎಂದರೆ ಕೇವಲ ಜಾತಿಯ ನಾಯಕರಲ್ಲ; ಅವರು ರಾಜ್ಯ ರಾಜಕಾರಣ ಕಂಡ ಅತ್ಯಂತ ಅನುಭವಿ, ಸೌಮ್ಯ, ಮೇಧಾವಿ, ಬುದ್ದಿವಂತ ರಾಜಕಾರಣಿ.
ಸಂಸದೀಯ ಪಟು: ಹಲವು ದಶಕಗಳ ಕಾಲ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ದೀರ್ಘ ಅನುಭವ ಅವರಿಗಿದೆ. Law (ಕಾನೂನು), Parliamentary Affairs (ಸಂಸದೀಯ ವ್ಯವಹಾರಗಳು), ಕೃಷಿ ಮತ್ತು ಸಣ್ಣ ನೀರಾವರಿ ಸೇರಿದಂತೆ ಪ್ರಮುಖ ಖಾತೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಅವರದ್ದು.
ಆಡಳಿತಾತ್ಮಕ ಪಕ್ವತೆ: ಸದನದಲ್ಲಿ ಕಾನೂನು ಚೌಕಟ್ಟುಗಳ ಬಗ್ಗೆ, ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಅವರಿಗಿರುವ ಜ್ಞಾನ ಮತ್ತು ಹಿರಿತನ ಇಡೀ ಸರ್ಕಾರಕ್ಕೆ ಮಾರ್ಗದರ್ಶಕವಾಗಬಲ್ಲದು. ಇಂಥಹ ಜ್ಞಾನಿಯನ್ನು ಸಂಪುಟಕ್ಕೆ ಸೇರಿಕೊಂಡರೆ ಇಡೀ ಸಂಪುಟಕ್ಕೆ ಘನ ಗೌರವ ಬರಲಿದೆ.
ದಾಖಲೆಯ ಸೇವೆ: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಹೆಗ್ಗಳಿಕೆ ಇವರದ್ದು. ಕಷ್ಟಕಾಲದಲ್ಲೂ ಪಕ್ಷ ನಿಷ್ಠೆ ಬದಲಿಸದ ಸಿದ್ದಾಂತವಾದಿ. 2018ರ ಚುನಾವಣೆಯಲ್ಲಿ ಅವರು ಸೋತಿದ್ದರು. 2018-2023ರ ಅವಧಿಯಲ್ಲಿ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಆಗ ಬಿಜೆಪಿ ಸರ್ಕಾರ ರಾಜ್ಯದಲ್ಲಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಜಯಚಂದ್ರ ಅವರನ್ನ ಪಕ್ಷಕ್ಕೆ ಎಳೆಯಲು ಶತಗತಾಯ ಪ್ರಯನ್ನ ಮಾಡಿತ್ತು. ಆದರೆ ತತ್ವ, ಸಿದ್ದಾಂತ, ಪಕ್ಷ ನಿಷ್ಠೆಯಿಂದಾಗಿ ಅವರು ಬಿಜೆಪಿಗೆ ಹೋಗಲಿಲ್ಲ. ಉಪ ಚುನಾವಣೆಯಲ್ಲೂ ಅವರು ಸೋಲಬೇಕಾಯಿತು.
ಸಿದ್ದರಾಮಯ್ಯ ಸಂಪುಟದಲ್ಲಿ ಕೈತಪ್ಪಿದ ಸ್ಥಾನ: ಕುಂಚಿಟಿಗ ಜನಾಂಗಕ್ಕೆ ಅನ್ಯಾಯವೇ?:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅಹಿಂದ ಮತ್ತು ಇತರೆ ಹಿಂದುಳಿದ ವರ್ಗಗಳ ಬೆಂಬಲ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಕುಂಚಿಟಿಗ ಸಮುದಾಯವೂ ಕಾಂಗ್ರೆಸ್ ಕೈ ಹಿಡಿದಿದೆ. ಹೀಗಿದ್ದೂ, ಸಿದ್ದರಾಮಯ್ಯನವರ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ಸಿಗದೇ ಹೋದದ್ದು ದೊಡ್ಡ ಆಘಾತವನ್ನುಂಟು ಮಾಡಿತು.
ಇದಲ್ಲದೆ ಡಿ.ಕೆ ಶಿವಕುಮಾರ್ ಅವರು 2023ರಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಕಾರಣಕ್ಕೆ ಬಹುತೇಕ ಕುಂಚಿಟಿಗರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರೂ ಕುಂಚಿಟಿಗರಿಗೆ ಸ್ಥಾನ ಮಾನ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣ ಎಡವಿಬಿಟ್ಟಿತು.
"ಸಮುದಾಯದ ಏಕೈಕ ಶಾಸಕನಿಗೆ ಸಚಿವ ಸ್ಥಾನ ನೀಡದಿರುವುದು, ಆ ಇಡೀ ಜನಾಂಗದ ರಾಜಕೀಯ ಅಸ್ತಿತ್ವವನ್ನು ಕಡೆಗಣಿಸಿದಂತೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಕೇವಲ ಜಯಚಂದ್ರ ಅವರಿಗೆ ಆದ ಅನ್ಯಾಯವಲ್ಲ, ಬದಲಿಗೆ 48 ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಲಕ್ಷಾಂತರ ಕುಂಚಿಟಿಗ ಮತದಾರರ ಆಶೋತ್ತರಗಳಿಗೆ ತಣ್ಣೀರೆರಚಿದಂತೆ."
ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನದ ಅನಿವಾರ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದಾ 'ಸಾಮಾಜಿಕ ನ್ಯಾಯ' ಮತ್ತು 'ಎಲ್ಲರಿಗೂ ಸಮಬಾಳು-ಸಮಪಾಲು' ಎಂಬ ತತ್ವದ ಮೇಲೆ ರಾಜಕಾರಣ ಮಾಡುತ್ತಾ ಬಂದವರು. ಆದರೆ, ಕುಂಚಿಟಿಗ ಸಮುದಾಯವನ್ನು ಸಂಪುಟದಿಂದ ದೂರ ಇಟ್ಟಿದ್ದು ಮಾತ್ರ ಅವರ ತತ್ವಕ್ಕೆ ಪೂರಕವಾಗಿರಲಿಲ್ಲ.
ಸಮುದಾಯದ ಸಮತೋಲನ: ರಾಜಕೀಯವಾಗಿ ಅವಕಾಶ ವಂಚಿತವಾಗಿರುವ ಕುಂಚಿಟಿಗ ಜನಾಂಗವನ್ನು ಸಮಾಧಾನಪಡಿಸಲು ಟಿ.ಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಅತ್ಯಗತ್ಯ.
ಲೋಕಸಭೆ ಹಾಗೂ ಮುಂದಿನ ಚುನಾವಣೆಗಳ ದೃಷ್ಟಿ: ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಮತ್ತು ಜನಾಂಗದ ಮತ ಬ್ಯಾಂಕ್ ಕಾಂಗ್ರೆಸ್ ಜೊತೆಗೇ ಉಳಿಯಲು ಜಯಚಂದ್ರ ಅವರಂತಹ ಹಿರಿಯರಿಗೆ ಸೂಕ್ತ ಗೌರವ ಸಿಗಲೇಬೇಕು.
ಅಭಿವೃದ್ಧಿಯ ವೇಗ: ತುಮಕೂರು ಜಿಲ್ಲೆ ಸೇರಿದಂತೆ ಬಯಲು ಸೀಮೆಯ ನೀರಾವರಿ ಯೋಜನೆಗಳ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಇತ್ಯಾದಿ ಅನುಷ್ಠಾನಕ್ಕೆ ಜಯಚಂದ್ರ ಅವರ ಆಡಳಿತಾತ್ಮಕ ಅನುಭವ ಅತ್ಯಂತ ತುರ್ತಾಗಿ ಬೇಕಾಗಿದೆ. ಅಲ್ಲದೆ ನೀರಾವರಿ ಯೋಜನೆಗಳನ್ನು ತ್ವರಿತ ಮತ್ತು ಸಮರ್ಪಕವಾಗಿ ಅನುಷ್ಠಾನ ಮಾಡಲು ಇಂಥಹ ತಜ್ಞ ಹಿರಿಯರ ಅಗತ್ಯವಿದೆ.
ಯಾವುದೇ ಒಂದು ಪ್ರಜಾಪ್ರಭುತ್ವ ಸರ್ಕಾರ ಯಶಸ್ವಿಯಾಗಬೇಕಾದರೆ ಅಲ್ಲಿ ಸರ್ವ ಜನಾಂಗದ ಪ್ರಾತಿನಿಧ್ಯ ಇರಬೇಕು. ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಕೇವಲ ರಾಜಕೀಯ ಹೊಂದಾಣಿಕೆಯಲ್ಲ; ಅದು ಕುಂಚಿಟಿಗ ಸಮುದಾಯಕ್ಕೆ ನೀಡುವ "ಸಾಮಾಜಿಕ ನ್ಯಾಯ".
ಡಿ.ಕೆ ಶಿವಕುಮಾರ್ ಅವರು ಮತ್ತು ಕಾಂಗ್ರೆಸ್ ಹೈಕಮಾಂಡ್ ಈ ಹಿರಿಯ ಮುತ್ಸದ್ದಿಯ ಹಿರಿತನ ಮತ್ತು ಜನಾಂಗದ ಹಿತದೃಷ್ಟಿ ಪರಿಗಣಿಸಿ, ಜಯಚಂದ್ರ ಅವರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡುವ ಮೂಲಕ ಜನಾಂಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕಿದೆ. ಆ ಮೂಲಕ ಸರ್ಕಾರವು ತನ್ನ 'ಸಾಮಾಜಿಕ ನ್ಯಾಯ'ದ ಬದ್ಧತೆ ಪ್ರದರ್ಶಿಸಬೇಕಾಗಿದೆ.



