i
ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೂ ಸಾಮಾಜಿಕ ಅಂತರ ಮರೆತು ಜನತೆ….
ನಾಗಮಂಗಲ
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಲಾಕ್ ಡೌನ್ ಸಮಯದಲ್ಲಿ ಇಷ್ಟು ದಿನ ಬಹಳ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ.
ಲಾಕ್ ಡೌನ್ ಸಮಯದಲ್ಲಿ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಸಮಯ ನಿಗದಿ ಮಾಡಿ ದಿನಸಿ, ಹಾಲು, ತರಕಾರಿ, ಹಾಗೂ ಔಷಧಿ, ಮಾರಾಟಕ್ಕೆ ಮಾತ್ರ ತಾಲ್ಲೂಕು ಆಡಳಿತ ಅನುಮತಿ ನೀಡಿ ಖರೀದಿಗೆ ಬರುವ ಗ್ರಾಹಕರಿಗೆ ಅಂಗಡಿ ಮಾಲೀಕರೆ ಎಚ್ಚರಿಕೆ ನೀಡಿ ಒಬ್ಬರಿಗೊಬ್ಬರು ಅಂತರ ಕಾಯ್ದಿರಿಸಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು.
ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರದಂತೆ ಜಿಲ್ಲಾಧಿಕಾರಿ ಆದೇಶದಂತೆ ತಾಲ್ಲೂಕು ಆಡಳಿತವು ಕೆಲವು ಷರತ್ತುಗಳನ್ನು ವಿಧಿಸಿ ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಮಯ ನಿಗದಿ ಮಾಡಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ.
ತಾಲ್ಲೂಕು ಆಡಳಿತವೂ ಲಾಕ್ ಡೌನ್ ಗೆ ಸಡಿಲಿಕೆ ನೀಡುತ್ತಿದ್ದಂತೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಮಾತ್ರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಮಾಸ್ಕ್ ಧರಿಸದೆ ಒಬ್ಬರಿಗೊಬ್ಬರು ಅಂತರ ಕಾಯ್ದಿರಿಸದೆ ಎಂದಿನಂತೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿಕೊಂಡು ದಿನಬಳಕೆ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದರು.
ಹಾಗೂ ಇದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಮುಂದೆ ಮತ್ತು ಅಂಚೆ ಕಚೇರಿಯ ಬಳಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದಿರಿಸದೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು.
ತಾಲ್ಲೂಕು ಆಡಳಿತವು ಹಾಗೂ ಪೊಲೀಸ್ ಇಲಾಖೆಯು ಮನವಿ ಮಾಡುವುದೇನೆಂದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಿಕೆ ನೀಡಿರುವುದು ವ್ಯಾಪಾರ ವಹಿವಾಟಿಗೆ ಹೊರತು ಕೋವಿಡ್-19 ಸೋಂಕಿಗೆ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.
ಸಾರ್ವಜನಿಕರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರ ಬಂದಾಗ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅನಗತ್ಯವಾಗಿ ಹೊರಗಡೆ ಓಡಾಡಬೇಡಿ, ಕೊರೊನ್ ವೈರಸ್ ತಡೆಗಟ್ಟಲು ತಾಲೂಕಿನ ಜನರು ಕೈಜೋಡಿಸಬೇಕು ಎಂದು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮನವಿ ಮಾಡಿದರೂ ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಕೊರೊನಾ ಮಹಾಮಾರಿಯನ್ನ ಮೈ ಮೇಲೆ ತಂದುಕೊಳ್ಳುವ ಸಾಧ್ಯತೆ ಇದೆ.
ವರದಿ: ಜಗದೀಶ್ ದೇವಲಾಪುರ