i
ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯ ಹೊಡೆದಾಟ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ…
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು-ಕಡೂರು:
ಅನುದಾನ ಹಂಚಿಕೆ ತಾರತಮ್ಯ ವಿಚಾರವಾಗಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರೊಬ್ಬರು ಹಬಿರಂಗವಾಗಿ ಹೊಡೆದಾಡಿದ್ದು ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪದ್ದಣ್ಣಗಾವಾಡಿಯಾ ಮತ್ತು ಸದಸ್ಯ ವಸಂತ್ಕುಮಾರ್ ನಡುವೆ ಪಂಚಾಯಿತಿ ಕಚೇರಿಯಲ್ಲಿ ಚರಂಡಿ ಸ್ವಚ್ಛತೆಯ ವಿಚಾರವಾಗಿ ಆರಂಭವಾದ ಗಲಾಟೆ ಹೊಡೆದಾಡುವ ಹಂತಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ಪಿಡಿಒ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಪಿಡಿಒಯಿಂದ ಹಲ್ಲೆಗೊಳಗಾದ ಪಂಚಾಯಿತಿ ಸದಸ್ಯ ವಸಂತ್ಕುಮಾರ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುವ ಮುನ್ನ ಸಖರಾಯಪಟ್ಟಣ ಪೊಲೀಸರು ಅವರನ್ನು ವಶಕ್ಕೆ ಪಡೆದ ಕಾರಣ ಘಟನೆಯು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಪಿಡಿಒರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಖರಾಯಪಟ್ಟಣ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆಗೆ ಮುಂದಾದರು. ಪೊಲೀಸರ ಮನವೊಲಿಕೆಗೂ ಬಗ್ಗಲಿಲ್ಲ. ಈ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು.
ಸ್ಥಳಕ್ಕೆ ಬಂದ ಡಿವೈಎಸ್ಪಿ ನಾಗರಾಜ್ ಇಬ್ಬರ ನಡುವಿನ ಗಲಾಟೆಯ ಪ್ರಕರಣ ಕುರಿತಾಗಿ ದೂರು ದಾಖಲಿಸಿಕೊಳ್ಳಲು ಸೂಚಿಸಿದ ನಂತರ ರಾತ್ರಿ 8 ಗಂಟೆಯ ನಂತರ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಹಿಂಪಡೆದರು. ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಇಬ್ಬರು ವಿರುದ್ಧ ಪ್ರಕರಣ ದಾಖಲಾಗಿದೆ.