i
ಸರ್ಕಾರ ಮುರುಘಾ ಮಠ ವಶಕ್ಕೆ ಪಡೆಯುತ್ತಾ, ಆಡಳಿತ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಕೇಳಿದ ಸರ್ಕಾರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕಾರಾಗೃಹದಲ್ಲಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಪೀಠಾಧಿಪತಿ ಆಗಿರುವ ಮುರುಘಾ ಮಠದ ಆಡಳಿತ ಹಾಗೂ ಅದರ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯ ಕುರಿತು ಕೂಡಲೇ ವರದಿ ನೀಡುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜಿ ಅವರಿಗೆ ಕೇಳಿದೆ.
ಪ್ರೌಢಶಾಲೆ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಸೆ.2ರಂದು ಬಂಧಿಸಿದ ಬಳಿಕ ಪೀಠತ್ಯಾಗಕ್ಕೆ ಒತ್ತಡ ಸೃಷ್ಟಿಯಾಗಿತ್ತು. ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಭಕ್ತರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದನ್ನ ಸ್ಮರಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರವೇ ಜಿಲ್ಲಾಧಿಕಾರಿ ಮುರುಘಾ ಮಠಕ್ಕೆ ಭೇಟಿ ನೀಡಿ ಟ್ರಸ್ಟ್ಗೆ ಸಂಬಂಧಿಸಿದ ಅಗತ್ಯ ದಾಖಲೆ ಹಾಗೂ ಮಾಹಿತಿ ಕೇಳಿದ್ದಾರೆ. ಎಸ್ಜೆಎಂ ವಿದ್ಯಾಪೀಠದ ಅಧೀನದಲ್ಲಿರುವ ಚಂದ್ರವಳ್ಳಿ ಪದವಿ ಕಾಲೇಜಿಗೆ ತೆರಳಿ ಕಾರ್ಯವೈಖರಿ, ವೇತನ, ನೇಮಕಾತಿ ಕುರಿತಾದ ಮಾಹಿತಿ ಕಲೆಹಾಕಿದ್ದಾರೆ. ಮುರುಘಾ ಮಠ, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ, ಇಂಜಿನಿರಿಂಗ್ ಸಂಸ್ಥೆಗಳ ಬಗ್ಗೆ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.
ನಿಕಟಪೂರ್ವ ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ವರ್ಗಾವಣೆಗೊಂಡ ವಾರದಲ್ಲೇ ಸರ್ಕಾರ ನೂತನ ಜಿಲ್ಲಾಧಿಕಾರಿಗಳಿಗೆ ವರದಿ ಕೇಳಿದ್ದು ಸರ್ಕಾರ ತನ್ನ ವಶಕ್ಕೆ ಅಥವಾ ಸರ್ಕಾರದ ವತಿಯಿಂದ ಮುರುಘಾಮಠಕ್ಕೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಿದೆಯಾ ಎನ್ನುವುದು ಚರ್ಚೆಯಾಗುತ್ತಿದೆ.
ಸರ್ಕಾರದ ಕಂದಾಯ ಇಲಾಖೆ ಜಿಲ್ಲಾಧಿಕಾರಿಗೆ ಸೂಚನಾ ಪತ್ರ ನೀಡಿ ಚಿನ್ಮೂಲಾದ್ರಿ ಶ್ರೀಜಗದ್ಗುರು ಮುರುಘರಾಜೇಂದ್ರ ಟ್ರಸ್ಟ್ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಮಾಹಿತಿ ಕೇಳಿದೆ ಎನ್ನಲಾಗಿದೆ.