i
ಜೋಗ್ಫಾಲ್ಸ್ನಿಂದ ನೇರವಾಗಿ ವಿದ್ಯುತ್ ಪೂರೈಕೆ-ಚಂದ್ರಪ್ಪ ಭರವಸೆ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಸಾರ್ವಜನಿಕ ಬದುಕು ಅರ್ಥಮಾಡಿಕೊಂಡು ಬದ್ದತೆ, ಜವಾಬ್ದಾರಿಯಿಂದ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಭೈರಸಿದ್ದೇಶ್ವರ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಧುರೆ, ಬೆಂಕಿಕೆರೆ, ಪಂಡರಹಳ್ಳಿಯಿಂದ ಒಂದೊಂದು ಲೈನ್ ತಂದು ರೈತರಿಗೆ ದಿನಕ್ಕೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತೇನೆ. ಇದರಿಂದ ಕರೆಂಟ್ ಸಮಸ್ಯೆ ಇಲ್ಲದಂತಾಗುತ್ತದೆ. ಜೋಗ್ಫಾಲ್ಸ್ನಿಂದ ನೇರವಾಗಿ ವಿದ್ಯುತ್ ತಂದು ತಾಲ್ಲೂಕಿನಲ್ಲಿರುವ ಎಲ್ಲಾ ಸಬ್ಸ್ಟೇಷನ್ಗಳಿಗೆ ವಿದ್ಯುತ್ ಪೂರೈಸಲು ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ರೇಷ್ಮೆ ಇಲಾಖೆಗೆ ಸೇರಿದ ಹನ್ನೆರಡು ಎಕರೆ ಜಾಗವನ್ನು ತೆಗೆದುಕೊಂಡು ಅಲ್ಲಿ ೨೫೦ ಕೋಟಿ ರೂ.ಗಳ ವೆಚ್ಚದಲ್ಲಿ ಕೆಲಸ ಆರಂಭವಾಗಿದೆ. ಇದು ಪೂರ್ಣವಾದ ಮೇಲೆ ಇನ್ನು ನೂರು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಅಭಾವ ಇರುವುದಿಲ್ಲ ಎಂದು ತಿಳಿಸಿದರು.
ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ನೀರು ಕೊಡುವುದಕ್ಕಾಗಿ ೩೭೦ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಗಟ್ಟಿಹೊಸಹಳ್ಳಿ ಬಳಿ ಗುಡ್ಡದ ಮೇಲೆ ಎಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಮಹಿಳೆಯರು ನೇರವಾಗಿ ಅಡುಗೆ ಮನೆಗೆ ಶುದ್ದ ನೀರನ್ನು ಪಡೆಯಬಹುದು. ಸಿ.ಸಿ.ರಸ್ತೆ, ಕೆರೆ ಕಟ್ಟೆ, ಚೆಕ್ಡ್ಯಾಂಗಳನ್ನು ನಿರ್ಮಿಸಿದ್ದೇನೆ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ನನ್ನ ಅನುದಾನದಲ್ಲಿ ಉಚಿತ ಬಸ್ಗಳನ್ನು ಬಿಟ್ಟಿದ್ದೇನೆ. ಆಸ್ಪತ್ರೆ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ, ಎ.ಪಿ.ಎಂ.ಸಿ.ಮಾರ್ಕೆಟ್ ಆಗಿದೆ. ತಾಲ್ಲೂಕಿನಾದ್ಯಂತ ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅವನ್ನೆಲ್ಲಾ ಹುಡುಕಿ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದೇನೆ. ಅದರಂತೆ ಎಲ್ಲಾ ದೇವಸ್ಥಾನಗಳ ಅಭಿವೃದ್ದಿಗೂ ಹಣ ನೀಡಿದ್ದೇನೆಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಲಿತಾಬಾಯಿ, ಉಪಾಧ್ಯಕ್ಷ ಬಸವರಾಜಪ್ಪ, ರಾಮಗಿರಿ ರಾಮಪ್ಪ, ಸದಸ್ಯರುಗಳಾದ ಕೆಂಚಪ್ಪ, ಮರಿಗೆಂಚಪ್ಪ, ನೇತ್ರಮ್ಮ, ನಾಗಪ್ಪ, ಚಂದ್ರಪ್ಪ, ಲಕ್ಷ್ಮಣ, ಗ್ರಾಮದ ಹಿರಿಯರಾದ ನಾಗಪ್ಪ, ಗೋವಿಂದಪ್ಪ, ಹಳ್ಳಪ್ಪ, ಸಿದ್ದಪ್ಪ, ಗುರಯ್ಯ ಒಡೆಯರ್, ರೇವಣಯ್ಯ ಒಡೆಯರ್, ಗುಡಿಗೌಡ್ರು ಕೆಂಚಪ್ಪ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.