i
ನಾಡ ಅಭಿವೃದ್ಧಿಗೆ ಮುನ್ನುಡಿ ಬರೆದ ಧೀಮಂತ ನಾಯಕ ಕೆಂಪೇಗೌಡ-ಶಾಸಕ ಕೆ.ಎಸ್.ನವೀನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶ್ವದ ಅತಿ ಜನಪ್ರಿಯ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ನಿರ್ಮಾತೃ, ನಾಡ ಅಭಿವೃದ್ಧಿಗೆ ಮುನ್ನುಡಿ ಬರೆದ ಧೀಮಂತ ನಾಯಕ ನಾಡಪ್ರಭು ಕೆಂಪೇಗೌಡರು ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಹೇಳಿದರು.
ಹಿರಿಯೂರು ತಾಲ್ಲೂಕು, ಜವನಗೊಂಡನಹಳ್ಳಿ ಗ್ರಾಮದಲ್ಲಿ ಇಂದು ಜಿಲ್ಲೆಗೆ ಆಗಮಿಸಿದ ನಾಡಪ್ರಭು ಕೆಂಪೇಗೌಡ ಪವಿತ್ರ ಮೃತ್ತಿಕೆ ಸಂಗ್ರಹ ರಥಕ್ಕೆ ಸ್ವಾಗತಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹದಿನಾರನೇ ಶತಮಾನದಲ್ಲಿ ಬೆಂಗಳೂರು ನಿರ್ಮಾಣಕ್ಕೆ ಮುನ್ನುಡಿ ಬರದೆ ಕೆಂಪೇಗೌಡರು ಯೋಜಿತ ನಗರವೊಂದನ್ನು ಸ್ಥಾಪಿಸಿದರು. ನಗರದ ಜನರಿಗಾಗಿ ನೂರಾರು ಕೆರೆಗಳನ್ನು ನಿರ್ಮಿಸಿದರು.
ಆಧುನಿಕ ಪಟ್ಟಣವೊಂದು ಹೇಗೆ ಮಾದರಿಯಾಗಿರಬೇಕು ಎಂಬುದಕ್ಕೆ ಪ್ರತೀಕವಾಗಿ ಬೆಂಗಳೂರು ನಗರ ಸ್ಥಾಪನೆಯಾಯಿತು. ಆಗಿನ ಕಾಲದಲ್ಲಿ ವೃತ್ತಿ ಹಾಗೂ ವ್ಯಾಪಾರ ಮಾಡುವ ಜನರು ವಾಸಿಸಲು ಅನುಕೂಲವಾಗುವಂತೆ ನಗರದಲ್ಲಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು. ಇಂದಿಗೂ ಬೆಂಗಳೂರಿನಲ್ಲಿ ಕುಂಚಿಗರ ಪೇಟೆ, ತಿಗಳ ಪೇಟೆಯಂತಹ ಸ್ಥಳಗಳನ್ನು ಕಾಣಬಹುದು. ನಗರದ ನಾಲ್ಕು ದಿಕ್ಕಿನಲ್ಲೂ ಗೋಪುರಗಳನ್ನು ನಿರ್ಮಾಣ ಮಾಡಿದರು. ಇವು ದೂರದಿಂದ ಜನರಿಗೆ ಬೆಂಗಳೂರು ನಗರ ತಲುಪಿದ ಗುರುತಾಗಿ ಗೋಚರವಾಗುತ್ತಿದ್ದರು.
ವಿಶ್ವದೆಲ್ಲೆಡೆಯಿಂದ ಬೆಂಗಳೂರಿಗೆ ಇಂದು ಜನರು ಆಗಮಿಸುತ್ತಾರೆ. ಇವರಿಗೆ ಕೆಂಪೇಗೌಡರ ಮಹತ್ವ ಸಾರಲು, ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆಯನ್ನು ಲೋಕಾರ್ಪಣೆ ಮಾಡುವರು. ಪ್ರತಿಮೆಯೊಂದಿಗೆ ಥೀಮ್ ಪಾರ್ಕ್ ಸಹ ನಿರ್ಮಿಸಲಾಗಿದೆ. ಪವಿತ್ರ ಮೃತ್ತಿಕೆ ಸಂಗ್ರಹ ವಾಹನಕ್ಕೆ ಅಕ್ಟೋಬರ್ 21 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. 17 ಜಿಲ್ಲೆಗಳಲ್ಲಿ ಸಂಚರಿಸುವ ವಾಹನವು ಪವಿತ್ರ ಸ್ಥಳಗಳು, ನದಿಗಳ ಮಣ್ಣನ್ನು ಸಂಗ್ರಹಿಸುತ್ತಿದೆ. ಹಿರಿಯೂರು ಪುಣ್ಯಭೂಮಿ ಮಣ್ಣನ್ನು ಸಹ ಸಂಗ್ರಹಿಸಲಾಗುತ್ತಿದೆ. ಈ ಮಣ್ಣನ್ನು ಬಳಸಿ ಕೆಂಪೇಗೌಡರ ಪ್ರತಿಮೆ ಪಾದದ ಬಳಿ ಸುಂದರ ಉದ್ಯಾನವನ ನಿರ್ಮಿಸಲಾಗುವುದು. ಇದರಲ್ಲಿ ಬೆಳೆಸುವ ಹೂಗಳು ಪ್ರತಿನಿತ್ಯ ಕೆಂಪೇಗೌಡರಿಗೆ ಸಮರ್ಪಿತವಾಗಲಿವೆ ಎಂದರು.
ಇಂದು ಬೆಂಗಳೂರು ಜಾಗತಿಕವಾಗಿ ನಗರವಾಗಿ ಬೆಳೆದಿದೆ. ವಿಶ್ವದಲ್ಲೇ ಸಿಲಿಕಾನ್ ಸಿಟಿ ಎಂದು ಹೆಸರುಗಳಿಸಿದೆ. ಕೋಟ್ಯಾಂತರ ಜನರಿಗೆ ಉದ್ಯೋಗ ನೀಡಿದೆ. ಮೃತ್ತಿಕೆ ಸಂಗ್ರಹ ಕಾರ್ಯ ಕೇವಲ ಸರ್ಕಾರಿ ಕಾರ್ಯಕ್ರಮವಾಗಬಾರದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪವಿತ್ರ ಮೃತ್ತಿಕೆ ಸಂಗ್ರಹ ರಥಕ್ಕೆ ಭವ್ಯ ಸ್ವಾಗತ:
ತುಮಕೂರು ಜಿಲ್ಲೆ, ಶಿರಾ ತಾಲೂಕಿನಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿಗೆ ಆಗಮಿಸಿದ ಪವಿತ್ರ ಮೃತ್ತಿಕೆ ಸಂಗ್ರಹ ರಥಕ್ಕೆ ಜವನಗೊಂಡನಹಳ್ಳಿ ಬಳಿ ಭವ್ಯ ಸ್ವಾಗತ ಕೋರಲಾಯಿತು.
ಪೂರ್ಣ ಕುಂಭ ಹೊತ್ತ ಮಹಿಳೆಯರು, ಕೋಲಾಟ ತಂಡದ ಚಿಣ್ಣರು, ಜಾನಪದ ಕಲಾ ತಂಡಗಳು ರಾಷ್ಟ್ರೀಯ ಹೆದ್ದಾರಿ ಬಳಿ ರಥದ ಆಗಮನಕ್ಕೆ ಕಾಯುತ್ತಾ ನಿಂತಿದ್ದರು. ರಥ ಆಗಮಿಸಿದ ವೇಳೆ ನೆರದಿದ್ದವರಲ್ಲಿ ಸಂಭ್ರಮ ಹೆಚ್ಚಾಯಿತು. ಪಾಟಕಿ ಸಿಡಿಸಿದರು, ಅದ್ಧೂರಿ ಮೆರವಣಿಗೆಯೊಂದಿಗೆ ರಥವನ್ನು ಗ್ರಾಮದ ಸಿದ್ಧಿವಿನಾಯಕ ದೇವಾಲಯದ ಬಯಲು ರಂಗಮAದಿರಕ್ಕೆ ಬರಮಾಡಿಕೊಳ್ಳಲಾಯಿತು. ಜವನಗೊಂಡನಹಳ್ಳಿ, ಕರಿಯಾಲ, ದಿಂಡಾವರ ಸೇರಿದಂದೆ ಹಲವು ಗ್ರಾಮದ ಜನರು ಪವಿತ್ರ ಮೃತ್ತಿಕೆಯನ್ನು ನೀಡಿದರು. ರಥವು 2 ದಿನಗಳ ಕಾಲ ಹಿರಿಯೂರು ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಿದೆ.
ಈ ಸಂದರ್ಭದಲ್ಲಿ ಜವನಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಗದಾಂಭ ಮಹೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಬೇತೂರು ರಾಜು, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಡಾ.ರಂಗನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಹಿರಿಯೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ತಾ.ಪಂ. ಇಓ ಈಶ್ವರ ಪ್ರಸಾದ್, ರಾಜಸ್ವ ನಿರೀಕ್ಷಕ ಶಿವಮೂರ್ತಿ, ಪಿ.ಡಿ.ಓ ಈಶ್ವರಪ್ಪ, ಮಾಜಿ ಜಿ.ಪಂ.ಅಧ್ಯಕ್ಷ ಎಂ. ಜಯಣ್ಣ, ಕೆ.ಶಂಕರಮೂರ್ತಿ, ಸೇರಿದಂತೆ ಮತ್ತಿರರು ಇದ್ದರು.