i
ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹಿರಿಯೂರು ಗೊಲ್ಲರು ತಿರುಗಿ ಬೀಳುವ ಜನರಾಗಿದ್ದಾರೆ-ಡಿ.ಟಿ.ಶ್ರೀನಿವಾಸ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ಕ್ಷೇತ್ರದ ಗೊಲ್ಲರು ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ತಿರುಗಿ ಬೀಳಲಿದ್ದಾರೆ. ಇಂತಹ ಗೊಲ್ಲ ಸಮುದಾಯವನ್ನು ನಾನು ಎಲ್ಲೂ ನೋಡಿಲ್ಲ ಎಂದು ರಾಜ್ಯ ಯಾದವ ಗೊಲ್ಲ ಸಂಘದ ಅಧ್ಯಕ್ಷ ಡಿ ಟಿ ಶ್ರೀನಿವಾಸ್ ಹೇಳಿದರು.
ಹಿರಿಯೂರು ತಾಲೂಕು ಗೊಲ್ಲ ನೌಕರರ ಸಂಘದ ವತಿಯಿಂದ ಹಿರಿಯೂರಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪದೋನ್ನತಿ ಮತ್ತು ನಿವೃತ್ತ ನೌಕರರಿಗೆ ಅಭಿನಂದನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೊಂದು ಸ್ವಾಭಿಮಾನದ ಸಮಾಜವಾಗಿದೆ. ಇಲ್ಲಿನ ಜನರ ಅತರಾಳ ಅರಿತಿದ್ದೇನೆ, ನೋಡಿದ್ದೇನೆ ಈ ಜನರ ನಾಡಿ ಮಿಡಿತ ಅರಿತಿದ್ದೇನೆ, ಸಾಕಷ್ಟು ಸಂಕಷ್ಟವನ್ನು ಈ ಸಮಾಜ ಎದುರಿಸುತ್ತಿದೆ. ಅನುಭವಿಸುತ್ತಿದೆ ಎಂದು ತಿಳಿಸಿದರು.
ಇಷ್ಟೇಲ್ಲ ಅನುಭವಿಸುತ್ತಿರುವ ಗೊಲ್ಲ ಸಮಾಜಕ್ಕೆ ಅವಕಾಶ ಸಿಕ್ಕಿಲ್ಲ, ಈಗ ಅವಕಾಶ ಸಿಕ್ಕಿದೆ. ಈ ಅವಕಾಶವನ್ನ ಹೇಗೆ ಉಳಿಸಿಕೊಳ್ಳಬೇಕು ಎನ್ನುವುದರ ಕುರಿತು ಚಿಂತನೆ ಮಾಡಬೇಕಿದೆ ಎಂದು ಶೀನಿವಾಸ್ ಕಿವಿ ಮಾತು ಹೇಳಿದರು.
ಗೊಲ್ಲರ ಹಟ್ಟಿಯಲ್ಲಿರುವ ಯುವಕರು ಮುಖ್ಯವಾಹಿನಿಗೆ ಬರಬೇಕು, ಜೊತೆ ಜೊತೆಯಲ್ಲಿ ಸಮುದಾಯದ ಮಕ್ಕಳಿಗೆ ಎಲ್ಲ ರೀತಿಯ ಸಹಕಾರ ಸಹಾಯ ಮಾಡುವುದಾಗಿ ಹೇಳಿದರು.
ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಪುರಸ್ಕಾರ ನೀಡುವುದೆಂದರೆ ದೊಡ್ಡದಾಗಿ ಕಿರೀಟ ನೀಡುವುದಲ್ಲ, ಪ್ರತಿಭಾವಂತ ಮಕ್ಕಳಿಗೆ ನಾವು-ನೀವೆಲ್ಲ ಏಣಿಯಾಗಿ ನಿಲ್ಲಬೇಕು ಎಂದು ಅವರು ತಿಳಿಸಿದರು.
ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿ, ಅವಕಾಶ ವಂಚಿತ ಮಕ್ಕಳು ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆಯುವುದರಿಂದ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಗೊಲ್ಲ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಯಾದವ ಗೊಲ್ಲ ಸಂಘದ ಅಧ್ಯಕ್ಷ ಆರ್ ರಂಗಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಹೆಚ್ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಶಿವರಂಜಿನಿ, ನಗರಸಭಾ ಸದಸ್ಯ ಚಿತ್ರಜಿತ್ ಯಾದವ್, ನಿತ್ಯಾನಂದ, ಮುಖಂಡರಾದ ಬಿ ಕೆ ಉಗ್ರಮೂರ್ತಿ, ಬಿ ಕೆ ಕರಿಯಪ್ಪ, ದಿಂಡಾವರ ಶಿವಣ್ಣ, ದಾಸಪ್ಪ, ಡಿಹೆಚ್ಓ ಡಾ.ರಂಗನಾಥ್, ಶಿಕ್ಷಕ ಶಿವಾನಂದ, ಚಿತ್ತಯ್ಯ, ಎಂ. ವೈ.ರಂಗಯ್ಯ, ಆರ್ ಚಂದ್ರಯ್ಯ, ಡಾ ಮಹೇಶ್, ಎಂ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.