i
ಸತೀಶ್ ಜಾರಕಿಹೊಳೆ ಬೆಂಬಲಿತ ಗೂಂಡಾಗಳಿಂದ ಸಂಸದರ ಮೇಲೆ ಹಲ್ಲೆ-ಖಂಡನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ತಮ್ಮ ಕೆಲಸದ ನಿಮಿತ್ತ ಕಲ್ಲೋಳ್ಳಿಗೆ ತೆರಳುತ್ತಿರುವ ಸಮಯದಲ್ಲಿ ಮಾರ್ಗದ ಮಧ್ಯೆ ಸತೀಶ್ ಜಾರಕಿಹೊಳೆಯ ಬೆಂಬಲಿತ ಗೊಂಡಾಗಳು ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿ ಈರಣ್ಣ ಕಡಾಡಿ ಅವರಿಗೆ ಮತ್ತು ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ ಹಲ್ಲೆಗೆ ಮುಂದಾಗಿದ್ದು ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್ ಉಗ್ರವಾಗಿ ಖಂಡಿಸಿದ್ದಾರೆ.
ರೈತ ಮೋರ್ಚಾ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಅತ್ಯಂತ ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಇವರ ಕಾರನ್ನು ಅಡ್ಡಗಟ್ಟಿ ಸತೀಶ್ ಜಾರಕಿಹೊಳೆಯ ಬೆಂಬಲಿತ ಗೊಂಡಾಗಳು ಹಲ್ಲೆಯಂತಹ ಕೃತ್ಯ ಎಸಗಿರುವುದು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳೆಗೆ ಶೋಭೆ ತರುವಂತದ್ದಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಖಂಡಿಸಿದ್ದಾರೆ.
ಇಡೀ ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರವನ್ನು ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇವರ ಸಾಲಿಗೆ ಸೇರಿರುವ ವಿಚಾರವಾದಿ ಎಂಬ ಮುಖವಾಡ ಧರಿಸಿರುವ ಸತೀಶ್ ಜಾರಕಿಹೊಳಿ ದಲಿತ ಸಂಘಟನೆಗಳ ಹೆಸರಿನಲ್ಲಿ ಒಬ್ಬ ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದಿರುವ ಸತೀಶ್ ಜಾರಕಿ ಹೊಳೆ ಅಂತಹ ವ್ಯಕ್ತಿಗಳು ಮುಗ್ಧ ದಲಿತ ಮುಖಂಡರನ್ನು ಬಳಸಿಕೊಂಡಿರುವುದು ಇದು ದಲಿತರಿಗೆ ಮಾಡಿರುವ ಅಪಮಾನ ಎಂದು ಹೇಳಬೇಕಾಗುತ್ತದೆ ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ತನ್ನ ಗೂಂಡಾ ಸಂಸ್ಕೃತಿಯಿಂದ ಪ್ರಜಾಪ್ರಭುತ್ವ ಹತ್ತಿಕ್ಕುವಂತಹ ಕೆಲಸದಲ್ಲಿ ನಿತ್ಯ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಪ್ರತಿಭಟನೆಗಳು ಜನ ಪರವಾಗಿರಬೇಕು. ಆದರೆ, ದ್ವೇಷ ಸಾಧನೆಗೋಷ್ಕರ ಬಳಸಿಕೊಂಡಿರುವುದು ಜಾರಕಿಹೊಳೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಹೆಯ ಕೃತ್ಯವನ್ನು ಯಾವೊಬ್ಬ ಪ್ರಜೆಯೂ ಸಹಿಸತಕ್ಕಂತದ್ದಲ್ಲ.ತಮ್ಮ ಮನಸ್ಥಿತಿಯನ್ನು ಸರಿ ಪಡಿಸಿಕೊಳ್ಳದಿದ್ದರೆ ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ನಡೆದರೆ ರಾಜ್ಯ ರೈತ ಮೋರ್ಚಾ ವತಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವೆಂಕಟೇಶ್ ಯಾದವ್, ಚಲವಾದಿ ತಿಪ್ಪೇಸ್ವಾಮಿ ಎಚ್ಚರಿಸಿದ್ದಾರೆ.